ಬಾಗೇಪಲ್ಲಿ: ಎಲ್ಲಂದರಲ್ಲೆ ಚೆಲ್ಲಾಡಿದ ಟೊಮ್ಯಾಟೊ, ಬಿಸಾಡಿದ ಮೂಲಂಗಿ ಮೂಟೆಗಳು, ರಸ್ತೆಯೆಂಬ ರಾಡಿಯ ಗದ್ದೆ, ಮಾಸ್ಕ್ ಗಳು ಹಾಕಿದ್ದರೂ ಗಪ್ ಅಂತ ಮುಖ,ಮೂಗಿಗೆ ರಾಚುವ ಗಬ್ಬು ವಾಸನೆ.
ಇವೆಲ್ಲವೂ ಕಂಡು ಬಂದಿದ್ದು ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ. ಹೆಸರಿಗಷ್ಟೇ ಮಾರುಕಟ್ಟೆ, ಆದರೆ ನೋಡುಗರಿಗೆ ಮಾತ್ರ ಹಂದಿ ಕೊಟ್ಟಿಗೆಗಿಂತಲೂ ಅದ್ವಾನದ ಬೇಸರಮಯ ಜಾಗವಾಗಿದೆ. ಇದರಿಂದಾಗೆ ಸೊಳ್ಳೆಗಳು ಉದ್ಬವವಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಶುರುವಾಗಿದೆ.
ಇನ್ನೇನು ಲಾಕ್ಡೌನ್ ಸಡಿಲಿಕೆಯಾಗಿದ್ದು, ಜನಸಾಮಾನ್ಯರ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಾಗೇಯೇ ಬೆಳೆದ ತರಕಾರಿಗಳು ಮಾರಾಟವಾಗುತ್ತವೆ ಎಂಬ ಭರವಸೆಯೂ ಮೂಡಿದೆ. ಇದರಿಂದಾಗಿ ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಿಕೊಂಡು ಹೋಗುತ್ತಾರೆ. ಆದರೆ ರೈತರಿಗೆ ಮಾರುಕಟ್ಟೆಗೆ ಹೋದರೆ ಕೊರೋನಾ ಜತೆಗೆ ಬೇರೆ ರೋಗಗಳು ಹರಡಬಹುದು ಎಂಬ ಆತಂಕದಲ್ಲಿದ್ದಾರೆ. ಏಕೆಂದರೆ ಎಪಿಎಂಸಿ ಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ಸ್ವಚ್ಛತೆ ಮಾಯವಾಗಿದೆ. ಮಾರುಕಟ್ಟೆಯಲ್ಲಿ ರಸ್ತೆಗಳು ಅಕ್ಷರಶಃ ರಾಡಿಯ ಗದ್ದೆಗಳಂತಾಗಿವೆ. ಗಬ್ಬು ನಾರುತ್ತಿದ್ದು, ಕೊಳೆತ ತರಕಾರಿಗಳ ರಾಶಿರಾಶಿಗಳನ್ನು ಎಲ್ಲಂದರಲ್ಲೆ ಸುರಿಯಲಾಗಿದೆ. ಮಾರುಕಟ್ಟೆಯಲ್ಲಿ ಸರಿಯಾದ ನಿರ್ವಹಣೆ ಕಣ್ಮರೆಯಾಗಿದೆ. ತ್ಯಾಜ್ಯ ಪದಾರ್ಥಗಳನ್ನು ಸುರಿಯುವ ನಿಗದಿತ ಜಾಗವಿಲ್ಲವಾಗಿದೆ.
ನಾನು ಪ್ರತಿನಿತ್ಯ ಮಾರುಕಟ್ಟೆಗೆ ರೈತರ ತರಕಾರಿಯನ್ನು ಹಾಕಿಕೊಂಡು ಹೋಗುತ್ತೇನೆ. ಅಲ್ಲಿಂದ ಎಷ್ಟೊತ್ತಿಗೆ ಹೊರಡುತ್ತೇನೋ? ಎಂದು ಆತುರದಿಂದ ಇರುತ್ತೇನೆ. ಏಕೆಂದರೆ ಅಲ್ಲಿ ಮುಖ ಮಾಡಲೂ ಬೇಸರವಾಗುತ್ತದೆ. ಮೂಗೆಲ್ಲ ಗಬ್ಬು ಹೊಡೆಯುತ್ತದೆ ಎಂದು ವಾಹನ ಚಾಲಕ ರಾಜೇಶ್ ರವರು ಅಭಿಪ್ರಾಯ ವ್ಯಕ್ತಪಡಿಸಿದರು.
ಎಪಿಎಂಸಿ ಆಡಳಿತ ವರ್ಗವು ಪುರಸಭೆಯೊಂದಿಗೆ ಸೇರಿ ತ್ಯಾಜ್ಯ ಸಂಗ್ರಹಣೆಗೆ ನಿಗದಿತ ಜಾಗವನ್ನು ಗುರ್ತಿಸಬೇಕು. ತ್ಯಾಜ್ಯ ವಿಲೇವಾರಿ ವಿಳಂಬವಾಗದAತೆ ಕ್ರಮ ಕೈಗೊಳ್ಳಬೇಕು. ಮಾರುಕಟ್ಟೆಗೆ ಬರುವ ರೈತರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದಂತೆ ಸ್ವಚ್ಚತೆಯನ್ನು ಕಾಪಾಡಬೇಕೆಂದು ಡಿವೈಎಪ್ ನ ಮುಖಂಡ ಹರೀಶ್ ತಿಳಿಸಿದರು.
ವರದಿ ; ಗೋಪಾಲ ರೆಡ್ಡಿ ಬಾಗೇಪಲ್ಲಿ
More Stories
ಬಾಗೇಪಲ್ಲಿ ಕ್ಷೇತ್ರದ 3 ಲಕ್ಷ ನಾಗರೀಕರಿಗೆ ಪೂರ್ಣ ಪ್ರಮಾಣದಲ್ಲಿ ಉಚಿತ ಹೆಲ್ತ್ ಕಾರ್ಡ್ ವಿತರಣೆ
ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಿಂದ ರಕ್ಷಾ ಬಂಧನ ಆಚರಣೆ
ಗುರಿ ಮುಟ್ಟಬೇಕು ಎನ್ನುವ ಛಲ ಇದ್ದರೆ ಯಾವುದೇ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು- ಡಾ. ಎ.ಹೆಚ್.ರಾಮರಾವ್