ಬಾಗೇಪಲ್ಲಿ : ಜೀವಂತವಾಗಿರುವ ವ್ಯಕ್ತಿಯ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಮಂಜೂರು ಮಾಡಿಸಿ, ನಕಲಿ ದಾಖಲೆಗಳನ್ನು ಸೃಷ್ಠಿಸಿ ರೂ. ೩೦ ಲಕ್ಷ ಬೆಲೆ ಬಾಳುವ ಕೃಷಿ ಜಮೀನನ್ನು ಮತ್ತೊಬ್ಬರಿಗೆ ಪೌತಿ ಖಾತೆ ಮಾಡಿ ಅಕ್ರಮವಾಗಿ ಪರಭಾರೆ ಮಾಡಿರುವ ಘಟನೆ ಬಾಗೇಪಲ್ಲಿ ತಾಲ್ಲೂಕಿನ ಯಗವಬಂಡ್ಲಕೆರೆ ಗ್ರಾಮದಲ್ಲಿ ನಡೆದಿದೆ.
ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವ ವ್ಯಕ್ತಿಯೋರ್ವ ರಿಯಲ್ ಎಸ್ಟೇಟ್ ಏಜೆಂಟರಿಗೆ ಕಡಿಮೆ ದರದಲ್ಲಿ ಜಮೀನು ಕೊಡುವುದಾಗಿ ಹೇಳಿದ್ದಾನೆ. ಅದರಂತೆ ರಿಯಲ್ ಎಸ್ಟೇಟ್ ಏಜೆಂಟರುಗಳು ಕೆಲವರೊಂದಿಗೆ ಜಮೀನು ನೋಡಲು ಬಂದು ಪರಿಶೀಲನೆ ಮಾಡಿದ ಸಂದರ್ಭದಲ್ಲಿ , ನಿಜವಾದ ಭೂ ಮಾಲೀಕ ನಾಗಪ್ಪ ಎಂಬಾತನ್ನು ವಿಚಾರಿಸಿದಾಗ ಜಮೀನು ಮಾರಾಟಕ್ಕಿಟ್ಟಿರುವ ವಿಷಯ ತಿಳಿದು ಗಾಬರಿಯಾಗಿದ್ದು, ತಕ್ಷಣವೇ ತಾಲ್ಲೂಕು ಕಛೇರಿಗೆ ದೌಡಾಯಿಸಿ ದಾಖಲೆಗಳನ್ನು ಪರಿಶೀಲಿಸಿದಾಗ ಅಕ್ರಮ ಬಯಲಾಗಿದೆ.
ಗೂಳೂರು ಕಂದಾಯ ವೃತ್ತದ ಜಿಲಾಜಿರ್ಲ ಗ್ರಾಮದ ಸರ್ವೇ ನಂ. ೧೦/ಪಿ೨೫ ರಲ್ಲಿ ಇದೇ ಹೋಬಳಿ ಯಗವಬಂಡ್ಲಕೆರೆ ಗ್ರಾಮದ ನಾಗಪ್ಪ ಬಿನ್ ಪೆದ್ದನ್ನ ಹೆಸರಿನಲ್ಲಿ ಮೂರು ಎಕರೆ ಜಮೀನು ಇದೆ, ಆದರೆ ರೈತ ನಾಗಪ್ಪ ಜೀವಂತವಾಗಿದ್ದರೂ ಕಂದಾಯ ಇಲಾಖೆಯ ಅಧಿಕಾರಿಗಳು ಮಗನಲ್ಲದ ಬೇರೊಬ್ಬ ವ್ಯಕ್ತಿಯ ಹೆಸರಿಗೆ ಖಾತೆ ಮಾಡಿರುವುದು ಕಂದಾಯ ಇಲಾಖೆಯ ಅಧಿಕಾರಿಗಳ ಭ್ರಷ್ಟಾಚಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದಿರುವ ಸಾರ್ವಜನಿಕರು ಈ ಹಿಂದೆ ಇದೇ ರೀತಿಯಾದ ಸಂಭವಿಸದ ಘಟನೆಯನ್ನು ನೆನಪಿಸಿದ್ದಾರೆ.
ಈ ಬಗ್ಗೆ ತಹಸೀಲ್ದಾರ್ ಡಿ.ಎ. ದಿವಾಕರ್ ರವರನ್ನು ವಿಚಾರಿಸಿದಾಗ ಅಕ್ರಮ ನಡೆದಿರುವುದು ಗಮನಕ್ಕೆ ಬಂದಿದೆ. ಆದರೆ ಖಾತೆ ರದ್ದು ಮಾಡುವ ಅಧಿಕಾರ ನನಗಿಲ್ಲ, ಉಪ ವಿಭಾಗಾಧಿಕಾರಿ ಕಛೇರಿಗೆ ದಾಖಲೆ ಸಮೇತ ದೂರು ಸಲ್ಲಿಸಬೇಕು, ಪ್ರಕರಣ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ ಎಂದಿದ್ದಾರೆ.
ಗೋಪಾಲ ರೆಡ್ಡಿ ಬಾಗೇಪಲ್ಲಿ
More Stories
ಬಾಗೇಪಲ್ಲಿ ಕ್ಷೇತ್ರದ 3 ಲಕ್ಷ ನಾಗರೀಕರಿಗೆ ಪೂರ್ಣ ಪ್ರಮಾಣದಲ್ಲಿ ಉಚಿತ ಹೆಲ್ತ್ ಕಾರ್ಡ್ ವಿತರಣೆ
ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಿಂದ ರಕ್ಷಾ ಬಂಧನ ಆಚರಣೆ
ಗುರಿ ಮುಟ್ಟಬೇಕು ಎನ್ನುವ ಛಲ ಇದ್ದರೆ ಯಾವುದೇ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು- ಡಾ. ಎ.ಹೆಚ್.ರಾಮರಾವ್