April 19, 2024

Bhavana Tv

Its Your Channel

‘ಖೇಲ್ ರತ್ನ ಪ್ರಶಸ್ತಿ’ಯನ್ನು ‘ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ’ ಎಂದು ಮರುನಾಮಕರಣ – ಪ್ರಧಾನಿ ನರೇಂದ್ರ ಮೋದಿ ಘೋಷಣೆ

ಹೊಸದಿಲ್ಲಿ: ಭಾರತೀಯ ಕ್ರೀಡಾಪಟುಗಳಿಗೆ ನೀಡಲಾಗುವ ದೇಶದ ಅತ್ಯುನ್ನತ ಕ್ರೀಡಾಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್‌ ರತ್ನ (Rajiv Gandhi Khel Ratna Award) ಪ್ರಶಸ್ತಿಯನ್ನು ಹಾಕಿ ದಿಗ್ಗಜರಾದ ಧ್ಯಾನ್ ಚಂದ್ ಸ್ಮರಣಾರ್ಥ ಮೇಜರ್ ಧ್ಯಾನ್ ಚಂದ್ ಖೇಲ್‌ ರತ್ನ ಪ್ರಶಸ್ತಿ (Major Dhyan Chand Khel Ratna Award) ಎಂದು ಮರುನಾಮಕರಣ ಮಾಡಿ ಪ್ರಧಾನಿ ನರೇಂದ್ರ ಮೋದಿ (Narendra Modi) ಘೋಷಿಸಿದ್ದಾರೆ. ದೇಶಾದ್ಯಂತ ನಾಗರಿಕರ ಭಾವನೆಗಳನ್ನು ಗೌರವಿಸಿ ಈ ಮಹತ್ತರ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಖೇಲ್ ರತ್ನ ಪ್ರಶಸ್ತಿಯನ್ನು 1991-1992 ರಲ್ಲಿ ಸ್ಥಾಪಿಸಲಾಯಿತು. ಈ ಪ್ರಶಸ್ತಿಯನ್ನು ಮೊದಲು ತನ್ನದಾಗಿಸಿಕೊಂಡವರು ಚೆಸ್ ದಂತಕತೆ ವಿಶ್ವನಾಥನ್ ಆನಂದ್. ಲಿಯಾಂಡರ್ ಪೇಸ್, ಸಚಿನ್ ತೆಂಡೂಲ್ಕರ್, ಧನರಾಜ್ ಪಿಳ್ಳೈ, ಪುಲ್ಲೇಲ ಗೋಪಿಚಂದ್, ಅಭಿನವ್ ಬಿಂದ್ರಾ, ಅಂಜು ಬಾಬಿ ಜಾರ್ಜ್, ಮೇರಿ ಕೋಮ್ ಮೊದಲಾದ ಶ್ರೇಷ್ಠ ಕ್ರೀಡಾಪಟುಗಳು ಈ ಪ್ರಶಸ್ತಿಯ ಹಿರಿಮೆಗೆ ಪಾತ್ರರಾಗಿದ್ದಾರೆ.

ರಾಜೀವ್ ಗಾಂಧಿ ಖೇಲ್‌ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್‌ಚಂದ್ ಹೆಸರಿನಲ್ಲಿ ಮರುನಾಮಕರಣ ಮಾಡುವಂತೆ ಪ್ರಧಾನಿಯವರಿಗೆ ದೇಶಾದ್ಯಂತ ನಾಗರಿಕರು ಮನವಿ ಮಾಡಿದ್ದಾರೆ. ಅವರ ಮನವಿಯನ್ನು ಗೌರವಿಸಿ ಹಾಗೂ ಅಭಿಮಾನಕ್ಕೆ ಮನ್ನಣೆ ನೀಡಿ ಖೇಲ್‌ ರತ್ನ ಪ್ರಶಸ್ತಿಯನ್ನು ಮರುನಾಮಕರಣ ಮಾಡಿರುವುದಾಗಿ ಪ್ರಧಾನಿ ತಿಳಿಸಿದ್ದಾರೆ.

ಪ್ರಸ್ತುತ ಮರುನಾಮಕರಣಗೊಂಡಿರುವ ಧ್ಯಾನ್‌ಚಂದ್ ಖೇಲ್‌ ರತ್ನ ಪ್ರಶಸ್ತಿಯು 25 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದೆ. ಹಾಕಿ ಮಾಂತ್ರಿಕ ಎಂದೇ ಬಿರುದಾಂಕಿತರಾಗಿರುವ ಮೇಜರ್ ಧ್ಯಾನ್ ಚಂದ್ ಅಂತಾರಾಷ್ಟ್ರೀಯ ಹಾಕಿ ಪಂದ್ಯಾಟವನ್ನು 1926ರಿಂದ 1949ರವರೆಗೆ ಆಡಿದರು ಹಾಗೂ ತಮ್ಮ ವೃತ್ತಿಜೀವನದಲ್ಲಿ 400 ಗೋಲುಗಳನ್ನು ಗಳಿಸಿ ಭಾರತದ ಅಗ್ರಗಣ್ಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲಹಾಬಾದ್‌ನಲ್ಲಿ ಜನಿಸಿದ ಧ್ಯಾನ್‌ಚಂದ್ 1928, 1932 ಹಾಗೂ 1936ರ ಒಲಿಂಪಿಕ್ಸ್‌ ತಂಡದ ಭಾಗವಾಗಿ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದರು.

ಖೇಲ್‌ ರತ್ನ ಪ್ರಶಸ್ತಿಯಲ್ಲದೆ, ಕ್ರೀಡಾ ಕ್ಷೇತ್ರದಲ್ಲಿ ಜೀವಮಾನ ಸಾಧನೆಗಾಗಿ ನೀಡುವ ದೇಶದ ಅತ್ಯುನ್ನತ ಪ್ರಶಸ್ತಿ ಧ್ಯಾನ್ ಚಂದ್ ಪ್ರಶಸ್ತಿಯಾಗಿದೆ. ಇದನ್ನು 2002ರಲ್ಲಿ ಸ್ಥಾಪಿಸಲಾಯಿತು. ನವದೆಹಲಿಯಲ್ಲಿರುವ ರಾಷ್ಟ್ರೀಯ ಕ್ರೀಡಾಂಗಣವನ್ನು 2002ರಲ್ಲಿ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣವೆಂದು ಮರುನಾಮಕರಣ ಮಾಡಲಾಯಿತು.

ಖೇಲ್‌ ರತ್ನ ಪ್ರಶಸ್ತಿಗೆ ಭಾಜನರಾದ ಕ್ರೀಡಾಪಟುಗಳನ್ನು ಸಚಿವಾಲಯವು ರಚಿಸಿದ ಸಮಿತಿಯಿಂದ ಆಯ್ಕೆಮಾಡಲಾಗುತ್ತದೆ. ‘ನಾಲ್ಕು ವರ್ಷಗಳ ಕ್ರೀಡಾರಂಗದಲ್ಲಿ ಕ್ರೀಡಾಪಟುಗಳು ಮಾಡಿದ ಅದ್ಭುತ ಸಾಧನೆ ಹಾಗೂ ಅತ್ಯುತ್ತಮ ಪ್ರದರ್ಶನ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.

source: News18 ಕನ್ನಡ

error: