ಬೆಂಗಳೂರು: ಲಾಕ್ಡೌನ್ 5.0 ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ಶನಿವಾರ ಹೊರಡಿಸಿದ್ದ ಮಾರ್ಗಸೂಚಿಯಂತೆ ನಿರ್ಬಂಧಗಳನ್ನು ಮುಂದುವರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ. ಅದರ ಅನ್ವಯ, ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಜೂನ್ 30ರವರೆಗೂ ನಿರ್ಬಂಧ ಇರಲಿದೆ. ಜೂನ್ 8ರ ನಂತರವೇ ಧಾರ್ಮಿಕ ಕ್ಷೇತ್ರ ಹಾಗೂ ಪೂಜಾ ಸ್ಥಳಗಳು, ಹೋಟೆಲ್, ಮಾಲ್ಗಳು ತೆರೆಯಲಿವೆ. ರಾತ್ರಿ 9ರಿಂದ ಬೆಳಿಗ್ಗೆ 5 ಗಂಟೆವರೆಗೆ ಕರ್ಫ್ಯೂ ಇರಲಿದೆ. (ಈಗ ರಾತ್ರಿ 7 ಗಂಟೆಯಿಂದ ಬೆಳಿಗ್ಗೆ 7 ಗಂಟೆವರೆಗೆ ಇದೆ)
ಕಂಟೈನ್ಮೆಂಟ್ ಅಲ್ಲದ ಪ್ರದೇಶಗಳಲ್ಲಿ ಮೂರು ಹಂತಗಳಲ್ಲಿ ಲಾಕ್ಡೌನ್ ಸಡಿಲಗೊಳಿಸಲು ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ಅವಕಾಶ ನೀಡಲಾಗಿದ್ದು, ಅದೇ ಮಾದರಿಯನ್ನು ರಾಜ್ಯದಲ್ಲೂ ಅಳವಡಿಸಿಕೊಳ್ಳಲು ತೀರ್ಮಾನಿಸಲಾಗಿದೆ.
ಮೊದಲ ಹಂತದಲ್ಲಿ ಕಂಟೈನ್ಮೆಂಟ್ ಅಲ್ಲದ ಪ್ರದೇಶಗಳಲ್ಲಿ ಜೂನ್ 8ರ ಬಳಿಕ ಹೆಚ್ಚಿನ ಸಡಿಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲಿ ಧಾರ್ಮಿಕ ಕ್ಷೇತ್ರಗಳು, ಪೂಜಾ ಸ್ಥಳಗಳನ್ನು ಸಾರ್ವಜನಿಕರಿಗೆ ತೆರೆಯಲು ಅನುಮತಿ ಸಿಗಲಿದೆ. ಅಲ್ಲದೆ, ಹೋಟೆಲ್, ರೆಸ್ಟೋರೆಂಟ್ಗಳು, ಶಾಪಿಂಗ್ ಮಾಲ್ಗಳನ್ನೂ ತೆರೆಯಬಹುದು.
ಎರಡನೇ ಹಂತದಲ್ಲಿ ಶಾಲಾ, ಕಾಲೇಜುಗಳು, ಕೋಚಿಂಗ್ ಸೆಂಟರ್ಗಳು ಸೇರಿದಂತೆ ಶೈಕ್ಷಣಿಕ ಕೇಂದ್ರಗಳನ್ನು ತೆರೆಯುವ ಬಗ್ಗೆ ತೀರ್ಮಾನಿಸುವ ಮೊದಲು ಈ ಸಂಸ್ಥೆಗಳ ಮಟ್ಟದಲ್ಲಿ ಮತ್ತು ಪೋಷಕರು ಹಾಗೂ ಇತರ ಭಾಗೀದಾರರ ಜೊತೆ ಚರ್ಚಿಸಬೇಕು. ಎಲ್ಲರ ಅಭಿಪ್ರಾಯ ಪಡೆದ ಬಳಿಕ ಜುಲೈ ತಿಂಗಳಲ್ಲಿ ತೆರೆಯುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು.
ಮೂರನೇ ಹಂತದಲ್ಲಿ, ಪರಿಸ್ಥಿತಿಯನ್ನು ಅವಲೋಕಿಸಿ, ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದ ಬಳಿಕ ಅಂತರರಾಷ್ಟ್ರೀಯ ವಿಮಾನಯಾನ ಆರಂಭಿಸಬಹುದು. ಅದೇ ರೀತಿ ಮೆಟ್ರೊ ರೈಲು, ಸಿನಿಮಾ ಮಂದಿರಗಳು, ಜಿಮ್, ಈಜುಕೊಳ, ಮನರಂಜನೆ ಪಾರ್ಕ್ಗಳು, ಆಡಿಟೋರಿಯಂಗಳನ್ನು ತೆರೆಯಬಹುದು. ಸಾಮಾಜಿಕ, ರಾಜಕೀಯ, ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಹೆಚ್ಚು ಜನಸಂದಣಿಯ ಕಾರ್ಯಕ್ರಮಗಳನ್ನು ಆರಂಭಿಸಲು ಅವಕಾಶ ಇದೆ.
source : Prajavani
More Stories
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಾಧನಾ ಕುಟೀರದ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆ ಕಾಂಗ್ರೆಸ್ ಮುಖಂಡರಿoದ ಪಟಾಕಿ ಸಿಡಿಸಿ ಸಿಹಿ ವಿತರಣೆ
ಪ್ರಜ್ಞಾವಂತರ ವೇದಿಕೆ ಶ್ರೀರಂಗಪಟ್ಟಣ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ