April 23, 2024

Bhavana Tv

Its Your Channel

ಕಾರ್ಕಳ ತಾಲೂಕು ಪತ್ರಕರ್ತರ ಸಂಘಕ್ಕೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಭೇಟಿ.

ಕಾರ್ಕಳ : ಅವರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಪ್ರವಾಸ ಕೈಗೊಂಡು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಕಾರ್ಕಳ ಪತ್ರಕರ್ತರ ಸಂಘಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ವತಿಯಿಂದ ಅವರನ್ನು ಅಭಿನಂದಿಸಲಾಯಿತು. ಬಳಿಕ ಮಾತನಾಡಿದ ಅವರು, ಪ್ರಮುಖವಾಗಿ ಗ್ರಾಮೀಣ ಹಾಗೂ ಹೋಬಳಿ, ತಾಲೂಕು ಮಟ್ಟದ ಪತ್ರಕರ್ತರ ಸಮಸ್ಯೆಗಳನ್ನು ಕುರಿತು ಸರಕಾರದ ಗಮನಕ್ಕೆ ತರಲಾಗಿದ್ದು ಪತ್ರಕರ್ತರ ಏಳಿಗೆಗಾಗಿ ಶ್ರಮಿಸುವುದು ಸಂಘದ ಉದ್ದೇಶ ಎಂದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸದಸ್ಯರಾಗಿ ನಿವೃತ್ತಿ ಹೊಂದಿದ ಸದಸ್ಯರಿಗೆ ತಲಾ ೧೦ ಸಾವಿರ ಮಾಸಿಕ ಪಿಂಚಣಿಯನ್ನು ನೀಡಲಾಗುತ್ತಿದೆ. ಇದನ್ನು ೧೫ ಸಾವಿರಕ್ಕೆ ಏರಿಸುವ ಕುರಿತು ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
ಕಾರ್ಕಳ ತಾಲೂಕು ಪತ್ರಕರ್ತರ ಭವನ ನಿರ್ಮಾಣದ ಮನವಿ ಕುರಿತಂತೆ ಮಾತನಾಡಿದ ಅವರು, ಪತ್ರಕರ್ತರ ಭವನಕ್ಕೆ ನಿವೇಶನ ಮಂಜೂರು ಮಾಡಿಸಿಕೊಳ್ಳಿ ಬಳಿಕ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸುವ ಹೊಣೆಗಾರಿಕೆ ನಮ್ಮದು ಎಂದು ಭರವಸೆ ನೀಡಿದರು.
ಪ್ರೆಸ್ ಕೌನ್ಸಿಲ್ ಸಂಚಾಲಕ ಮದನ್ ಗೌಡ ಮಾತನಾಡಿ, ಪತ್ರಕರ್ತರು ಸಂಘಟಿತರಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು, ಸಂಘಟನೆಯನ್ನು ಬಲಪಡಿಸುವ ಮೂಲಕ ಸರಕಾರದಿಂದ ಪತ್ರಕರ್ತರಿಗೆ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು. ಸರಕಾರಿ ಬಸ್ ಗಳಲ್ಲಿ ಪತ್ರಕರ್ತರ ಓಡಾಟಕ್ಕೆ ಬಸ್ ಪಾಸ್ ಕುರಿತು ಮಾತನಾಡಿದ ಮದನ್ ಗೌಡ ಅವರು ,ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ಅವುಗಳ ಪ್ರಸರಣಕ್ಕೆ ಅನುಗುಣವಾಗಿ ಪಾಸ್ ಗಳನ್ನು ವಿತರಿಸಲಾಗುತ್ತದೆ, ಆದರೆ ಅದರಿಂದ ಹೆಚ್ಚಿನ ಪತ್ರಕರ್ತರಿಗೆ ಪ್ರಯೋಜನವಾಗಲಾರದು, ಅವರು ಅಂತಹ ಪಾಸ್ ಗಳಲ್ಲಿ ಜಿಲ್ಲೆಯೊಳಗೆ ಮಾತ್ರ ಓಡಾಟ ನಡೆಸಲು ಅವಕಾಶವಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್, ಪ್ರಧಾನ ಕಾರ್ಯದರ್ಶಿ ಕೃಷ್ಣ ಅಜೆಕಾರ್, ಜಿಲ್ಲಾ ಉಪಾಧ್ಯಕ್ಷ ಆರ್ ಬಿ ಜಗದೀಶ್, ಹರಿಪ್ರಸಾದ್ ನಂದಳಿಕೆ ಮುಂತಾದವರು ಉಪಸ್ಥಿತರಿದ್ದರು.
ವರದಿ ; ಅರುಣ ಭಟ್, ಕಾರ್ಕಳ

error: