April 20, 2024

Bhavana Tv

Its Your Channel

ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಕ್ಷತ್ರೀಯ ಮರಾಠ ಸಮಾಜ ಬಂಧುಗಳಿOದ ಪ್ರವರ್ಗ 3(ಬಿ) ಯಿಂದ 2(ಎ ) ಗೆ ಸೇರಿಸುವಂತೆ ಒತ್ತಾಯಿಸಿ ಶಾಂತಿಯುತ ಪ್ರತಿಭಟನೆ

ಕಾರ್ಕಳ:- ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್( ರಿ ) ಬೆಂಗಳೂರು ಇದರ ಅಧ್ಯಕ್ಷರಾದ ಶ್ರೀ ಕೆ ಸುರೇಶ ರಾವ್ ಸಾಠೆ ಯವರ ಸೂಚನೆಯಂತೆ ಕ್ಷತ್ರೀಯ ಮರಾಠ ಸಮಾಜ ವನ್ನು ಪ್ರವರ್ಗ 3(ಬಿ) ಯಿಂದ 2(ಎ ) ಗೆ ಸೇರಿಸುವಂತೆ ಒತ್ತಾಯಿಸಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗ ಏಕಕಾಲಕ್ಕೆ ಪ್ರತಿಭಟನೆ ನಡೆಯಿತು. ಅದರ ಭಾಗವಾಗಿ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯ ಎದುರುಗಡೆ ಕೆ ಕೆ ಎಂ ಪಿ ಉಡುಪಿ ಜಿಲ್ಲಾ ಅಧ್ಯಕ್ಷರಾದ ಪ್ರಕಾಶ್ ರಾವ್ ಅವರ ನೇತೃತ್ವದಲ್ಲಿ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಕೆ ಕೆ ಎಂ ಪಿ ರಾಜ್ಯ ಸಲಹೆಗಾರರಾದ ಕೇಶವ ರಾವ್ ಮಾನೆ ಮಾತನಾಡಿ ಇಲ್ಲಿಯವರೆಗೆ ಬಂದ ಎಲ್ಲಾ ಸರಕಾರಗಳು ಕ್ಷತ್ರಿಯ ಮರಾಠರಿಗೆ ಯಾವುದೇ ಸವಲತ್ತುಗಳನ್ನು ಕೊಡದೇ , ಕೇವಲ ಮರಾಠ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ ಮತ್ತು ನಮ್ಮ ಬೇಡಿಕೆಯನ್ನು ನಿರ್ಲಕ್ಷಿಸಿದೆ ಎಂದರು .
ಕಾರ್ಕಳ ತಾಲೂಕು ಅಧ್ಯಕ್ಷರಾದ ಕೆ ಬಿ ಕೀರ್ತನ್ ಕುಮಾರ್ ಲಾಡ್ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ನಮ್ಮನ್ನು 3(ಬಿ) ಯಿಂದ 2(ಎ) ಗೆ ಸೇರಿಸುವಂತೆ ಒತ್ತಾಯಿಸುತ್ತಿದ್ದೇವೆ . ಆದರೆ ಇದಕ್ಕೆ ಸರ್ಕಾರ ಸ್ಪಂದಿಸದೇ ಇದ್ದುದರಿಂದ ವಿದ್ಯಾಭ್ಯಾಸ ಆರ್ಥಿಕ ರಾಜಕೀಯ ಸಾಮಾಜಿಕ ಕ್ಷೇತ್ರಗಳಲ್ಲಿ ನಾವು ಹಿಂದೆ ಬಿದ್ದಿದ್ದೇವೆ , ಹಾಗಾಗಿ ಸರಕಾರ ನಮ್ಮ ಮನವಿಯನ್ನು ಪುರಸ್ಕರಿಸಿ ಇನ್ನು ಮುಂದಾದರೂ ಮರಾಠ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದರು.
ಪ್ರತಿಭಟನೆಯ ಅಧ್ಯಕ್ಷತೆಯನ್ನು ವಹಿಸಿದ ಪ್ರಕಾಶ್ ರಾವ್ ಕವಡೆ ಮಾತನಾಡಿ ಮರಾಠ ಸಮಾಜದವರು ಸರಕಾರಿ ಸವಲತ್ತುಗಳು ಇಲ್ಲದೆ ಕೂಲಿ, ಡ್ರೈವರ್ ಹಾಗೂ ಇನ್ನಿತರ ಅಸಂಘಟಿತ ವಲಯಗಳಲ್ಲಿ ಕೆಲಸಗಳನ್ನು ಮಾಡಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ . ಸರಕಾರಿ ಉದ್ಯೋಗ ,ರಾಜಕೀಯ ಮೀಸಲಾತಿ ಹಾಗೂ ಇನ್ನಿತರ ಸರಕಾರಿ ಸೌಲಭ್ಯಗಳಿಂದ ಮರಾಠ ಸಮುದಾಯ ವಂಚಿತವಾಗಿದೆ .ಇನ್ನು ಮುಂದಾದರೂ ಕ್ಷತ್ರಿಯ ಮರಾಠ ರನ್ನು (2ಎ) ಗೆ ಸೇರಿಸಿ ಸಮಾಜದ ಅಭಿವೃದ್ಧಿಗೆ ಸಹಾಯ ಮಾಡಬೇಕೆಂದು ಆಗ್ರಹಿಸಿದರು.
ಕಾರ್ಯದರ್ಶಿ ಸಂತೋಷ್ ರಾವ್ ಕವಡೆ ಮಾತನಾಡಿ ಮರಾಠರು ಹುಟ್ಟಿನಿಂದಲೇ ಹೋರಾಟಗಾರರು. ತಮ್ಮ ನೆಲ ಜಲ ದೇಶ ಸಂಸ್ಕೃತಿ ವಿಚಾರಕ್ಕೆ ಧಕ್ಕೆ ಬಂದಾಗ ಪ್ರಬಲವಾಗಿ ಹೋರಾಟಗಳನ್ನು ಮಾಡಿಕೊಂಡು ಬಂದವರು .ಇವತ್ತು ನಾವು ಮಾಡಿದ ಶಾಂತಿಯುತ ಪ್ರತಿಭಟನೆಗೆ ಬೆಲೆ ಕೊಟ್ಟು ಪ್ರವರ್ಗ 2ಎ ಗೆ ಸೇರಿಸದೇ ಇದ್ದಲ್ಲಿ ಮುಂದೆ ಉಗ್ರ ಹೋರಾಟ ಮಾಡಬೇಕಾದೀತು ಎಂದು ಎಚ್ಚರಿಸಿದರು. ಸಂತೋಷ್ ರಾವ್ ಕವಡೆ ಕಾರ್ಯಕ್ರಮ ನಿರೂಪಿಸಿ, ಕುಮಾರಿ ಶ್ರುತಿ ರಾವ್ ಶಿಂದೆ ಪ್ರಾರ್ಥಿಸಿ, ಪ್ರಕಾಶ್ ರಾವ್ ಸೆಪ್ಟೆಕರ್ ವಂದಿಸಿದರು . ಅಪರ ಜಿಲ್ಲಾಧಿಕಾರಿ ವೀಣಾ ಬಿ ಎನ್ ಮನವಿಯನ್ನು ಸ್ವೀಕರಿಸಿದರು ಹಾಗೂ ಜಿಲ್ಲಾಧಿಕಾರಿಗಳಾದ ಕೂರ್ಮ ರಾವ್ ರವರಲ್ಲಿ ಈ ವಿಚಾರದ ಬಗ್ಗೆ ಚರ್ಚಿಸಲಾಯಿತು.
ಪ್ರತಿಭಟನೆಯಲ್ಲಿ ಕೆಕೆಎಂಪಿ ಜಿಲ್ಲಾ ಗೌರವಾಧ್ಯಕ್ಷ ದಯಾನಾಥ್ ಜಿ ರಾವ್ ,ಕುಂದಾಪುರ ತಾಲೂಕು ಅಧ್ಯಕ್ಷ ಗೋಪಾಲ್ ರಾವ್ ಪವಾರ್ ಮತ್ತು ಇತರ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಕ್ಷತ್ರಿಯ ಮರಾಠ ಸಮಾಜ ಬಾಂಧವರು ಉಪಸ್ಥಿತರಿದ್ದರು

ವರದಿ:ಅರುಣ ಭಟ್ ಕಾರ್ಕಳ

error: