ಹೊನ್ನಾವರ : ದಿನಾಂಕ ೧೮ರಂದು ಕೋವಿಡ್ ಮತ್ತು ತುರ್ತು ಸೇವೆ ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳನ್ನು ಬೆಳಿಗ್ಗೆ ೮ರಿಂದ ಮಧ್ಯಾಹ್ನ ೨ಗಂಟೆಯವರೆಗೆ ಸ್ಥಗಿತಗೊಳಿಸಿ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಲು ಭಾರತೀಯ ವೈದ್ಯಕೀಯ ಸಂಘದ ತೀರ್ಮಾನದಂತೆ ನಿರ್ಧರಿಸಲಾಗಿದೆ ಎಂದು ಹೊನ್ನಾವರ ವೈದ್ಯಕೀಯ ಸಂಘದ (ಐಎಂಎ) ಅಧ್ಯಕ್ಷ ಡಾ. ವಿಶಾಲ ಮತ್ತು ಕಾರ್ಯದರ್ಶಿ ಡಾ.ವಿನಾಯಕ ರಾಯ್ಕರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಭಾರತೀಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಕೋವಿಡ್ ನಿವಾರಣೆಗೆ ಶ್ರಮಿಸುತ್ತಿದ್ದಾರೆ. ಹೀಗಿರುವಾಗ ವೈದ್ಯರ ತಪ್ಪಿಲ್ಲದಿದ್ದರೂ ವೈದ್ಯರನ್ನು ಟೀಕಿಸಲಾಗುತ್ತದೆ ಮಾತ್ರವಲ್ಲ ಅಲ್ಲಲ್ಲಿ ಹಲ್ಲೆಗಳು ನಡೆದಿವೆ. ಇಂಥಹ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸಲು ಕಷ್ಟವಾಗುತ್ತಿದೆ. ಆದ್ದರಿಂದ ವೈದ್ಯರ ಮೇಲೆ ಹಲ್ಲೆ ನಡೆಸುವ ಪ್ರಕರಣಗಳಲ್ಲಿ ಜಾಮೀನು ರಹಿತ ಮೊಕದ್ದಮೆ ದಾಖಲಿಸಬೇಕು. ಆರೋಪಿಗಳಿಗೆ ೧೦ವರ್ಷ ಜೈಲು ಶಿಕ್ಷೆ ವಿಧಿಸಬೇಕು ಎಂದು ಸಂಘ ಹೇಳಿದೆ. ಈ ವರೆಗೆ ೧೪೦೦ ವೈದ್ಯರು ಮತ್ತು ಅಸಂಖ್ಯ ವೈದ್ಯಕೀಯ ಸಿಬ್ಬಂದಿಗಳು ಕೋವಿಡ್ ಕರ್ತವ್ಯದಲ್ಲಿರುವವರು ಮೃತಪಟ್ಟಿದ್ದಾರೆ. ಕಳೆದ ವರ್ಷ ೭೪೦ ವೈದ್ಯರು ಮೃತಪಟ್ಟಿದ್ದರು. ಇದರಲ್ಲಿ ಕೇವಲ ೧೬೮ ಜನಕ್ಕೆ ಮಾತ್ರ ಸರ್ಕಾರ ಪ್ರಕಟಿಸಿದ ಪರಿಹಾರ ಸಿಕ್ಕಿದೆ, ಉಳಿದವರಿಗೂ ಬೇಗ ಸಿಗಬೇಕು ಮತ್ತು ಕೋವಿಡ್ ಮತ್ತು ನಂತರದ ಬ್ಲಾö್ಯಕ್ ಫಂಗಸ್ಗೆ ಔಷಧ ಮತ್ತು ಲಸಿಕೆ ಸಾಕಷ್ಟು ಪ್ರಮಾಣದಲ್ಲಿ ಸಿಗಬೇಕು, ಇಲ್ಲವಾದರೆ ಜನರ ಆಕ್ರೋಶಕ್ಕೆ ವೈದ್ಯರು ಬಲಿಯಾಗುತ್ತಾರೆ. ವೈದ್ಯರ ಮೇಲೆ ಹಲ್ಲೆ ಮಾಡುವುದರಿಂದ ಯಾರಿಗೂ ಲಾಭವಿಲ್ಲ, ವೈದ್ಯರು ಉದ್ದೇಶಪೂರ್ವಕವಾಗಿ ಯಾರನ್ನೂ ಸಾಯಿಸುವುದಿಲ್ಲ, ವೈದ್ಯರು ಬದುಕಿಸಲೆಂದೇ ತರಬೇತಿ ಪಡೆದಿರುತ್ತಾರೆ ಎಂದು ಅವರು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ತಾಲೂಕಿನ ಎಲ್ಲ ವೈದ್ಯರೂ ಪಾಲ್ಗೊಳ್ಳಲಿದ್ದು ದಿನಾಂಕ ೧೮ರಂದು ತುರ್ತು ಚಿಕಿತ್ಸೆ ಮತ್ತು ಕೋವಿಡ್ ಚಿಕಿತ್ಸೆಯ ಹೊರತಾಗಿ ಬೇರೆ ಯಾವ ರೋಗಿಗಳೂ ಆಸ್ಪತ್ರೆಗೆ ಬರದೆ ಸಹಕರಿಸಬೇಕು ಎಂದು ಅವರು ಹೇಳಿದ್ದಾರೆ. ಪ್ರಧಾನಮಂತ್ರಿ ಮೋದಿಯವರಿಗೆ ಈ ಕುರಿತು ನಾಲ್ಕು ಪುಟಗಳ ಮನವಿ ಸಲ್ಲಿಕೆಯಾಗಲಿದೆ.
More Stories
ಸಮುದ್ರ ಕಿನಾರೆಯಲ್ಲಿ ಆಟವಾಡಲು ಹೋಗಿದ್ದ ಇಬ್ಬರು ಬಾಲಕರು ನೀರು
ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮುಂಬತ್ತಿ ಪ್ರಜ್ವಲನೆ ಕಾರ್ಯಕ್ರಮ
ಅರಬ್ಬೀ ಸಮುದ್ರದಲ್ಲಿ ಬೋಟ್ ಮುಳುಗಡೆ, ನಾಲ್ವರ ರಕ್ಷಣೆ