ದಾಂಡೇಲಿ: ಬೆಳಗಾವಿಯಲ್ಲಿ ಎಂ.ಇ.ಎಸ್. ಕಾರ್ಯಕರ್ತರು ಕನ್ನಡ ಬಾವುಟ ಸುಟ್ಟಿದ್ದನ್ನು ಹಾಗೂ ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ, ಬಸವೇಶ್ವರರ ಪುತ್ಥಳಿಗಳಿಗೆ ಅವಮಾನ ಮಾಡಿದ್ದನ್ನು ಖಂಡಿಸಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ, ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಹಾಗೂ ಜಿಲ್ಲೆಯ ಸಾಹಿತಿಗಳ ಉಪಸ್ಥಿತಿಯಲ್ಲಿ ದಾಂಡೇಲಿ ಯಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆಯವರು ಈ ನೆಲದ ಅಸ್ಮಿತೆಗೆ ಧಕ್ಕೆಯಾಗುವಂತಹ ಕೆಲಸವನ್ನು ಯಾರೇ ಮಾಡಿದರೂ ಕನ್ನಡ ಸಾಹಿತ್ಯ ಪರಿಷತ್ತು ಸಹಿಸುವುದಿಲ್ಲ. ಕನ್ನಡ ಬಾವುಟ ಸುಡುವ ಮೂಲಕ ಭಾಷಾ ಸೌಹಾರ್ದತೆ ಕೆಡಿಸುವ ಕೆಲಸವನ್ನು ಎಂ.ಇ.ಎಸ್ ಮಾಡಿದೆ. ರಾಷ್ಟ್ರ ನಾಯಕರ ಪುತ್ಥಳಿಗಳಿಗೆ ಅವಮಾನ ಮಾಡುವ ಮೂಲಕ ನಾಡದ್ರೋಹದ ಕೆಲಸ ಮಾಡಿದ್ದಾರೆ. ಇದನ್ನು ಆಡಳಿತ ಗಂಭೀರವಾಗಿ ಪರಿಗಣಿಸಿ ಸಂಬoಧಿಸಿದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.. ನಾಡದ್ರೋಹದ ಕೆಲಸ ಮಾಡುವ ಸಂಘಟನೆಗಳನ್ನು ನಿಷೇಧಿಸಬೇಕು ಎಂದರು.
ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಮಾತನಾಡಿ ಈ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಸಲು ತಜ್ಞರ ಸಮಿತಿ ಮಾಡಲು ನಿರ್ಧರಿಸಿದ್ದೇವೆ. ಅದು ನಡೆಯುತ್ತದೆ. ಆದರೆ ಕನ್ನಡ ಬಾವುಟ ಸುಡುವುದು, ಮಹಾಪುರುಷರ ಪುತ್ಥಳಿಗಳಿಗೆ ಅವಮಾನ ಮಾಡುವುದು ಸರಿಯಾದ ಕ್ರಮವಲ್ಲ. ನಾವು ಸಹಿಸುವುದೂ ಇಲ್ಲ. ಅಂತಹ ಸಂಘಟನೆಯನ್ನು ನಿಷೇಧಿಸಬೇಕು. ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ನಾಡು ನುಡಿಗೆ ಧಕ್ಕೆ ತರುವಂತಹ ಕೆಲಸವನ್ನು ಯಾರೇ ಮಾಡಿದರೂ ಕನ್ನಡ ಸಾಹಿತ್ಯ ಪರಿಷತ್ತು ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಡಾ. ಆರ್. ಜಿ. ಗುಂದಿ, ಮೋಹನ ಹಬ್ಬು, ರೋಹಿದಾಸ ನಾಯಕ, ಪಿ.ಆರ್. ನಾಯ್ಕ, ಎಸ್.ಡಿ. ಹೆಗಡೆ, ಡಾ. ಸಿದ್ದಲಿಂಗ್ ವಸ್ತ್ರದ್, ಪದ್ಮಶ್ರೀ ತುಳಸಿ ಗೌಡ, ಮಾದೇವ ವೇಳಿಪ, ಸುಬ್ರಾಯ ಭಟ್ಟ ಬಕ್ಕಳ, ಬೀರಣ್ಣ ನಾಯಕ ಮೊಗಟಾ, ಡಾ. ಪದ್ಮನಾಭ ಛಬ್ಬಿ, ಗಂಗಾಧರ ಕೊಳಗಿ, ಸಹದೇವಪ್ಪ ನಡಿಗೇರ, ಯಶವಂತ ನಾಯ್ಕ, ಭಾಸ್ಕರ ಗಾಂವಕರ, ಮುರ್ತಜಾ ಹುಸೇನ ಆನೆಹೊಸೂರ, ದುಂಡಪ್ಪ ಗೂಳೂರ, ಯ.ಎಸ್. ಪಾಟೀಲ, ಕೀರ್ತಿ ಗಾಂವಕರ, ಮೋಹನ ಹಲವಾಯಿ, ಸುಮಂಗಲ ಅಂಗಡಿ ಚಂದ್ರಕಾoತ ಅಂಗಡಿ, ಸತೀಶ ನಾಯಕ, ಅನಿಲ ದಂಡಗಲ, ಟಿ.ಎಸ್. ಬಾಲಮಣಿ, ಎಸ್. ಪ್ರಕಾಶ ಶೇಟ್ಟಿ, ನಾರಾಯಣ ನಾಯಕ, ಮಾಧವ್ ನಾಯಕ, ರಾಮಾ ನಾಯ್ಕ, ಡಾ. ಮಹೇಶ ಗಳಿಕಟ್ಟೆ, ಬಾಬು ಶೇಖ್, ಗೋಪಾಲಕೃಷ್ಣ ನಾಯಕ, ಜಗದೀಶ ನಾಯಕ, ಸುರೇಶ ಕಾಮತ್, ಡಿ. ಸ್ಯಾಮಸನ್, ಮುಸ್ತಾಕ ಶೇಖ ಮುಂತಾದವರು ಸೇರಿದಂತೆ ಜಿಲ್ಲೆಯೆಲ್ಲಡೆಯ ಬರಹಾರರು ನುಡಿ ಸಂಘಟಕರು ಭಾಗವಹಿಸಿದ್ದರು.
More Stories
ದಾಂಡೇಲಿಯಲ್ಲಿ ನಡೆದ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನ
ಹಣತೆಯಿಂದ ಸಾರಾ ಅಬೂಬಕ್ಕರ್ಗೆ ಅರ್ಥಪೂರ್ಣ ಗೌರವ : ಡಾ: ತೃಪ್ತಿ ನಾಯಕ
ಜ. 8 : ‘ಹಣತೆ’ ದಾಂಡೇಲಿ ತಾಲೂಕು ಘಟಕದ ಉದ್ಘಾಟನೆ