ಹೊನ್ನಾವರ :- ಮೋಟಾರ್ ಅಪಘಾತ ವಿಮಾ ಪರಿಹಾರವನ್ನು ನ್ಯಾಯಾಲಯದ ಆದೇಶದ ಅನ್ವಯ ನೊಂದ ಕುಟುಂಬಕ್ಕೆ ನೀಡಲು ವಿಫಲವಾದ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟ ವಿಭಾಗದ ಬಸ್ಸನ್ನು ಹೊನ್ನಾವರ ನ್ಯಾಯಾಲಯದ ಸಿಬ್ಬಂದಿಗಳು ಜಪ್ತಿಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
2014 ರ ಫೆಬ್ರವರಿ 4 ರಂದು ಮಂಗಳೂರು ಕಡೆಯಿಂದ ಬಾಗಲಕೋಟೆಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಶ್ರೀದೇವಿ ಆಸ್ಪತ್ರೆಯ ತಿರುವಿನ ಬಳಿ ಬೈಕ ಸವಾರ ಗಣಪತಿ ಮೇಸ್ತ ಎನ್ನುವವರಿಗೆ ಅಪಘಾತಪಡಿಸಿತ್ತು. ಅಪಘಾತದಿಂದ ಗಣಪತಿ ಮೇಸ್ತ ಮೃತರಾಗಿದ್ದರು. ಗಣಪತಿ ಮೇಸ್ತ ಇವರ ಕುಟುಂಬವು ಅಪಘಾತ ವಿಮಾ ಪರಿಹಾರ ಕೋರಿ ಹೊನ್ನಾವರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಹೊನ್ನಾವರ ಎಂ.ಎ.ಸಿ.ಟಿ ನ್ಯಾಯಾಲಯವು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಗೆ ಪರಿಹಾರ ಹಣವನ್ನು ನೀಡಲು ಆದೇಶ ಮಾಡಿತ್ತು. ಆದರೆ ನ್ಯಾಯಾಲಯದ ತೀರ್ಪಿನ ಪ್ರಕಾರ ಸಂಸ್ಥೆಯ ಬಾಗಲಕೋಟೆ ವಿಭಾಗವು ನ್ಯಾಯಾಲಯಕ್ಕೆ ಹಣವನ್ನು ಭರಣ ಮಾಡಿರಲಿಲ್ಲ. ಮೃತನ ಕುಟುಂಬವು ಪರಿಹಾರ ಹಣವನ್ನು ತುಂಬದ ಸಾರಿಗೆ ಸಂಸ್ಥೆಯ ವಿರುದ್ದ ಮತ್ತೆ ಅಮಲ್ಜಾರಿ ಪ್ರಕರಣವನ್ನು ದಾಖಲಿಸಿ ರೂ. 18,97,797/- ಹಾಗೂ ಅದರ ಮೇಲಿನ ಬಡ್ಡಿ ಸಹಿತ ನೀಡುವಂತೆ ಕೋರಿದ್ದರು.
ಅಮಲ್ಜಾರಿ ಪ್ರಕರಣವನ್ನು ವಿಚಾರಿಸಿದ ಎಂ.ಎ.ಸಿ.ಟಿ ನ್ಯಾಯಾಲಯದ ನ್ಯಾಯಾಧೀಶ ಕುಮಾರ ಜಿ. ಸಂಸ್ಥೆಯ ಬಾಗಲಕೋಟ ವಿಭಾಗದ ಬಸ್ ಜಪ್ತ ಪಡಿಸಲು ಆದೇಶ ನೀಡಿದ್ದರು. ನ್ಯಾಯಾಲಯದ ಆದೇಶದ ಅನ್ವಯ ಹೊನ್ನಾವರದ ಕೋರ್ಟ ಸಿಬ್ಬಂದಿಗಳು ಬಸ್ಸನ್ನು ಸೋಮವಾರ ನ್ಯಾಯಾಲಯಕ್ಕೆ ಜಪ್ತ ಪಡಿಸಿ ಹಾಜರುಪಡಿಸಿದ್ದಾರೆ.
More Stories
ಬಿಜೆಪಿ ಜಿಲ್ಲೆಯಲ್ಲಷ್ಟೇ ಅಲ್ಲ, ರಾಜ್ಯದಲ್ಲೂ ಏನೂ ಮಾಡಿಲ್ಲ: ಮಂಕಾಳ ವೈದ್ಯ ಟೀಕೆ
ಬಿಜೆಪಿ ಬಿಜೆಪಿ ಎಂದು ಕುಣಿಯುವ ಯುವಕರಿಗೆ ಮತದಾನದ ಹಕ್ಕು ನೀಡಿದ್ದು ಕಾಂಗ್ರೆಸ್: ದೇಶಪಾಂಡೆ
ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವರ ಜಾತ್ರಾ ಮಹೋತ್ಸವದ ನಿಮಿತ್ತ ‘ಶರಾವತಿ ಕುಂಭ’-‘ಶರಾವತಿ ಆರತಿ’