May 6, 2024

Bhavana Tv

Its Your Channel

ಕಿಂಡಿ ಆಣೆಕಟ್ಟು ಯೋಜನೆ ಅವೈಜ್ಞಾನಿಕವಾಗಿದ್ದು, ಕಾಮಗಾರಿಯ ಸ್ಥಳ ಬದಲಾಯಿಸುವಂತೆ ಗ್ರಾಮಸ್ಥರಿಂದ ಮನವಿ

ಕುಮಟಾ ತಾಲೂಕಿನ ಅಳಕೋಡನ ಅಘನಾಶಿನಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಲಾದ ಕಿಂಡಿ ಆಣೆಕಟ್ಟು ಯೋಜನೆ ಅವೈಜ್ಞಾನಿಕವಾಗಿದ್ದು, ಕಾಮಗಾರಿಯ ಸ್ಥಳ ಬದಲಾಯಿಸುವಂತೆ ಒತ್ತಾಯಿಸಿ ಆ ಭಾಗದ ನೂರಾರು ಗ್ರಾಮಸ್ಥರು ಅಳಕೋಡ ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಒ ಅವರಿಗೆ ಮನವಿ ಸಲ್ಲಿಸಿದರು.

ಅಳಕೋಡ ಗ್ರಾಮ ಪಂಚಾಯತಗೆ ಸೇರಿದ ತೊಪ್ಪಲಗುತ್ತ, ಉಪ್ಪಿಣಪಟ್ಟಣ, ಶಿರಗುಂಜಿ, ಚಂಡಿಹಿತ್ತಲ್, ಮಲವಳ್ಳಿ, ವಗೈರೆ ಗ್ರಾಮಸ್ಥರು ಪಂಚಾಯತ ಸದಸ್ಯರಾದ ವಿನಾಯಕ ಅಂಬಿಗ, ನಳಿನಿ ಮಹೇಂದ್ರ ನಾಯ್ಕ, ಲೀಲಾವತಿ ಚಂದ್ರಕಾAತ ಮುಕ್ರಿ, ಮಹಾಲಕ್ಷ್ಮೀ ಕುಸುಮಾಕರ ಗೌಡ, ಶಶಿಕಲಾ ಅಂಬಿಗ ಇವರ ನೇತ್ರತ್ವದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಕೆಸರಿ ಉದಯಕುಮಾರ ಜೈನ್ ಹಾಗೂ ಪಿಡಿಒ ವಿನಾಯಕ ನಾಯ್ಕ ಅವರಿಗೆ ಭೇಟಿ ಮಾಡಿ, ಅಳಕೋಡನ ಅಘನಾಶಿನಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಲಾದ ಕಿಂಡಿ ಆಣೆಕಟ್ಟು ಯೋಜನೆ ಕಾಮಗಾರಿಯ ಸ್ಥಳ ಬದಲಾಯಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಈ ಕಿಂಡಿ ಆಣೆಕಟ್ಟಿನ ಮೂಲಕ ಕುಡಿಯುವ ನೀರಿನ ಪೂರೈಕೆಗೆ ಯೋಜನೆ ರೂಪಿಸಲಾಗಿದೆ. ಆದರೆ ಈ ಅವೈಜ್ಞಾನಿಕ ಕಾಮಗಾರಿಯಿಂದ ಮಲವಳ್ಳಿ, ಶಿರಗುಂಜಿ, ಉಪ್ಪಿನಪಟ್ಟಣ, ತಪ್ಪಲಗುತ್ತಾ, ಚಂಡಿಹಿತ್ತಲ್ ಗ್ರಾಮಗಳು ಮಳೆಗಾಲದಲ್ಲಿ ಜಲಾವೃತಗೊಳ್ಳಲಿದೆ. ನದಿ ಸಂಗಮ ಸ್ಥಳದಲ್ಲಿ ಕಿಂಡಿ ಆಣೆಕಟ್ಟು ನಿರ್ಮಿಸುವುದರಿಂದ ಆ ಎಲ್ಲ ಗ್ರಾಮಗಳು ನೆರೆಯಿಂದ ಮುಳುಗಡೆಯಾಗುವ ಸಾಧ್ಯತೆ ಅಧಿಕವಾಗಿದೆ. ಸುಮಾರು ೫೦೦ ಎಕರೆಗೂ ಅಧಿಕ ಕೃಷಿ ಪ್ರದೇಶ ಮುಳುಗಡೆಯಾಗುವುದರಿಂದ ಬೆಳೆಗಳು ನಾಶವಾಗಿ, ರೈತರ ಬದುಕು ದುಸ್ತರಗೊಳ್ಳಲಿದೆ. ನೆರೆ ಬರುವ ಪ್ರದೇಶದಲ್ಲಿ ಆಣೆಕಟ್ಟು ನಿರ್ಮಿಸಿದರೆ ಪ್ರವಾಹದ ತೀವ್ರತೆ ಇನ್ನು ಹೆಚ್ಚಾಗಿ ಇಡೀ ಊರೇ ಮುಳುಗಡೆಯಾದರೆ ಆಶ್ಚರ್ಯ ಪಡಬೇಕಾಗಿಲ್ಲ. ಉಪ್ಪಿನಪಟ್ಟಣ, ಹಡಿನಗದ್ದೆ, ಮುಕ್ರಿಕೇರಿಯ ಭಾಗಗಳಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಇದೆ. ಸಿಹಿ ನೀರು ಮತ್ತು ಉಪ್ಪು ನೀರು ಸಂಗಮಿಸುವ ಸ್ಥಳದಲ್ಲಿ ವ್ಯತ್ಯಾಸವಾದರೆ ಮೀನಿನ ಸಂತತಿಗೆ ಮಾರಕವಾಗಲಿದೆ. ಆಣೆಕಟ್ಟು ನಿರ್ಮಾಣಕ್ಕಾಗಿ ಮಣ್ಣು ಸುರಿದಿದ್ದರಿಂದ ದೋಣಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಕೃಷಿ ಕಾರ್ಯಕ್ಕಾಗಿ ದೋಣಿಯ ಮೇಲೆ ಸಾಗಿಸಲಾಗುತ್ತಿರುವ ಸೊಪ್ಪು, ತರಕು, ಹುಲ್ಲು, ಕಟ್ಟಿಗೆ ಸಾಗಣಿಕೆಗೆ ತೊಂದರೆಯಾಗಿದೆ. ಅಲ್ಲದೇ ಶಿರಗುಂಜಿ ನಡುಗಡ್ಡೆಯಲ್ಲಿರುವ ಐತಿಹಾಸಿಕ ಪಾಂಡವರ ಕಲ್ಲು ಪ್ರವಾಸಿ ತಾಣಕ್ಕೆ ಪ್ರವಾಸಿಗರು ತೆರಳದಂತಾಗಿದೆ. ಬೊಗರಿಬೈಲ್ ಸೇತುವೆ ನಿರ್ಮಿಸುವಾಗ ನದಿ ಪಾತ್ರದಲ್ಲಿ ಮಣ್ಣು ಮತ್ತು ಕಾಂಕ್ರೀಟ್ ತುಂಬಿ ಈಗಾಗಲೇ ನದಿ ಪಾತ್ರದ ಆಳ ಕಡಿಮೆಯಾಗಿ, ಮುಳುಗಡೆ ಪ್ರದೇಶ ಹೆಚ್ಚಾಗಿದೆ. ಈಗ ಉದ್ದೇಶಿತ ಸ್ಥಳದಲ್ಲಿ ಕಿಂಡಿ ಆಣೆಕಟ್ಟು ನಿರ್ಮಿಸಿದರೆ, ಮುಂಬರುವ ಮಳೆಗಾಲದಲ್ಲಿ ನೆರೆಯ ತೀವ್ರತೆ ಜಾಸ್ತಿಯಾಗಿ, ಇನ್ನಷ್ಟು ಗ್ರಾಮಗಳು ಮುಳುಗಡೆಯಾಗುವ ಸಾಧ್ಯತೆ ಅಧಿಕವಾಗಿದೆ. ಹಾಗಾಗಿ ಈ ಆಣೆಕಟ್ಟು ಯೋಜನೆಯನ್ನು ನದಿ ಪಾತ್ರದಿಂದ ಮೇಲ್ಭಾಗದ ಪ್ರದೇಶಕ್ಕೆ ಸ್ಥಳಾಂತರಿಸಿ, ಗ್ರಾಮಸ್ಥರಿಗಾಗುವವ ತೊಂದರೆಯನ್ನು ತಪ್ಪಿಸುವಂತೆ ನೀಡಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಕತಗಾಲ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಮಹೇಂದ್ರ ನಾಯ್ಕ ಹಾಗೂ ಅಳಕೋಡ ಗ್ರಾಮ ಪಂಚಾಯತ ಸದಸ್ಯ ವಿನಾಯಕ ಅಂಬಿಗ ಮಾತನಾಡಿ, ಕಿಂಡಿ ಆಣೆಕಟ್ಟು ಯೋಜನೆ ಅವೈಜ್ಞಾನಿಕ ಕಾಮಗಾರಿಯಿಂದ ಮಲವಳ್ಳಿ, ಶಿರಗುಂಜಿ, ಉಪ್ಪಿನಪಟ್ಟಣ, ತಪ್ಪಲಗುತ್ತಾ, ಚಂಡಿಹಿತ್ತಲ್ ಗ್ರಾಮಗಳು ಮಳೆಗಾಲದಲ್ಲಿ ಜಲಾವೃತಗೊಳ್ಳಲಿದೆ. ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ನಮ್ಮ ವಿರೋಧವಿಲ್ಲ. ಈ ಯೋಜನೆಗೆ ನಾವೇಲ್ಲರೂ ಸ್ವಾಗತಿಸುತ್ತೇವೆ. ಆದರೆ ಸ್ಥಳವನ್ನು ಬದಲಾಯಿಸಬೇಕು ಎನ್ನುವುದೇ ನಮ್ಮ ಮನವಿಯಾಗಿದೆ. ನಮ್ಮ ಮನವಿಯನ್ನು ದಿಕ್ಕರಿಸಿ, ಅದೇ ಸ್ಥಳದಲ್ಲಿ ಕಾಮಗಾರಿ ಆರಂಭಿಸಿದರೆ, ಉಗ್ರ ಹೋರಾಟ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅಳಕೋಡ ಗ್ರಾಪಂ ಅಧ್ಯಕ್ಷೆ ಕೆಸರಿ ಜೈನ್ ಅವರು, ಈ ಕಾಮಗಾರಿ ಕುರಿತು ಪಂಚಾಯತದ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸುವ ಜೊತೆಗೆ ಸ್ಥಳ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮನವಿ ಸಲ್ಲಿಕೆಯಲ್ಲಿ ಗಜಾನನ ಗೌಡ, ಮಾಸ್ತಿ ಗೌಡ, ನರಸಿಂಹ ಭಟ್, ಶಂಕರ ಅಂಬಿಗ, ಪರಮೇಶ್ವರ ಅಂಬಿಗ, ಶ್ಯಾಮ್ ಫರ್ನಾಂಡಿಸ್, ಚಂದ್ರಕಾAತ ಮುಕ್ರಿ, ಕುಸುಮಾಕರ ಗೌಡ, ರಾಜೇಶ ಹರಿಕಂತ್ರ, ನಾಗೇಶ ಮುಕ್ರಿ, ಮಹೇಶ ಮುಕ್ರಿ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ: ನಟರಾಜ ಗದ್ದೆಮನೆ

error: