
ಭಟ್ಕಳ ಬಂದರದಲ್ಲಿರುವ ಪವಿತ್ರ ಶಿಲುಭೆಯ ಎದುರು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಡಿಸೆಂಬರ್ ಮೊದಲನೇ ರವಿವಾರದಂದು ಕೆಥೋಲಿಕ್ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷದ ಆರಂಭದAದು ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಸಂತ ಫ್ರಾನ್ಸಿಸ್ ಕ್ಸೇವಿಯರ್ ಅವರ ಮೃತ ದೇಹವನ್ನು ಗೋವಾಕ್ಕೆ ಕೊಂಡೊಯ್ಯವ ಮಾರ್ಗದಲ್ಲಿ ಭಟ್ಕಳ ಬಂದರದಲ್ಲಿ ಹಡಗು ಒಂದು ದಿನ ತಂಗಿದ್ದು ಅಂದಿನ ನೆನಪಿಗಾಗಿ ಈ ಪ್ರಾರ್ಥನೆಯನ್ನು ಪ್ರತಿ ವರ್ಷವೂ ಹಮ್ಮಿಕೊಳ್ಳಲಾಗುತ್ತಿದೆ. ಮುಂಡಳ್ಳಿಯ ಅವರ್ ಲೇಡಿ ಆಫ್ ಲೂಡ್ರ್ಸ್ ಚರ್ಚ ಹಾಗೂ ಪುರವರ್ಗದ ಸೈಂಟ್ ಜೋಸೆಫ್ ಚರ್ಚನಲ್ಲಿ ಹಮ್ಮಿಕೊಂಡಿದ್ದ ಬಲಿಪೂಜೆಯ ನಂತರ ಮಧ್ಯಾಹ್ನದ ವೇಳೆಗೆ ತಾಲೂಕಿನ ಕ್ರೈಸ್ತ ಬಾಂಧವರು ಬಂದರದಲ್ಲಿರುವ ಪವಿತ್ರ ಶಿಲುಭೆಯ ಎದುರು ಫಾದರ್ ಪ್ರೇಮ್ಕುಮಾರ್ ಅವರ ನೇತ್ರತ್ವದಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ನಂತರ ಫಾದರ್ ಸಾಲ್ವದಾರ್ ರೊಡ್ರಿಗಸ್ ನೆರೆದ ಜನರನ್ನುದ್ದೇಶಿಸಿ ಆಶೀರ್ವಚನ ನೀಡಿದರು.
೧೫೦೬ರ ಎಪ್ರಿಲ್ ೭ರಂದು ಸ್ಪೇನ್ನಲ್ಲಿ ಜನಿಸಿ, ಸಂತ ಪದವಿಗೇರಿದ ಸಂತ ಫ್ರಾನ್ಸಿಸ್ ಕ್ಸೇವಿಯರ್ ಪಾರ್ಥಿವ ಶರೀರವನ್ನು ಗೋವಾಕ್ಕೆ ಕೊಂಡೊಯ್ಯುವ ಮಾರ್ಗದಲ್ಲಿ ಒಂದು ದಿನ ಭಟ್ಕಳ ಬಂದರಿನಲ್ಲಿ ತಂಗಿದ್ದು ಆ ಸವಿನೆನಪಿಗಾಗಿ ಇಲ್ಲಿನ ಬಂದರದಲ್ಲಿ ಒಂದು ಶಿಲುಬೆಯನ್ನು ಸ್ಥಾಪಿಸಲಾಗಿದೆ. ಈ ಶಿಲುಬೆ ಇಡೀ ಜನಾಂಗಕ್ಕೆ ದಿಕ್ಕು ತೋರುವ ಶಿಲುಬೆಯಾಗಿದೆ ಎನ್ನುವುದು ಕ್ರೈಸ್ತ ಧರ್ಮೀಯರ ನಂಬಿಕೆಯಾಗಿದೆ.
೧೫೫೨ರಲ್ಲಿ ಚೀನಾದ ಸಮೀಪದ ದ್ವೀಪದಲ್ಲಿ ಇವರು ದೇಹತ್ಯಾಗವನ್ನು ಮಾಡಿದರು. ಹಡಗಿನಲ್ಲಿ ತೆರಳುತ್ತಿರುವಾಗ ಇವರ ಮೃತ ದೇಹವನ್ನು ಅಲ್ಲಿಯೇ ಸಮಾಧಿ ಮಾಡಲಾಗಿದ್ದು, ನಂತರ ಹಡಗು ವಾಪಾಸು ಬರುವಾಗ ದೇಹವನ್ನು ಸಾಗಿಸಲು ತೆಗೆದು ನೋಡಿದರೆ ಕೆಡದೇ ಹಾಗೆಯೇ ಇರುವುದು ಆಶ್ಚರ್ಯ ಮೂಡಿಸಿತ್ತು. ಕೆಡದೇ ಇರುವ ಇವರ ದೇಹವನ್ನು ೧೫೫೩ರಲ್ಲಿ ಮಲಕ್ಕಾದಿಂದ ಗೋವಾಕ್ಕೆ ಸಾಗಿಸುವ “ಸಾಂತಾ ಕ್ರೂಜ್” ಹಡಗು ಕೇರಳದ ಕೊಲ್ಲಂನಲ್ಲಿ ಲಂಗರು ಹಾಕಿದ್ದು ಅಲ್ಲಿಂದ ಹೊರಟು ಭಟ್ಕಳದ ಬಂದರಿನ ಸಮೀಪ ಬಂದಾಗ ಒಂದು ದಿನ ಇಲ್ಲಿ ಲಂಗರು ಹಾಕಿತ್ತೆನ್ನುವುದನ್ನು ಇತಿಹಾಸ ಹೇಳುತ್ತಿದೆ. ಅಂದು ಹಡಗಿನಲ್ಲಿರುವ ಸಂತರ ಮೃತ ದೇಹವನ್ನು ಸ್ಪರ್ಷಿಸಿದ್ದ ಪೋರ್ಚುಗೀಸ್ ಫ್ಯಾಕ್ಟರ್ ಅಂಟೋನಿಯೋ ರೊಡ್ರಿಗಸ್ ಇವರ ತೀವ್ರ ಕಾಯಿಲೆಯಿಂದ ಬಳಲುತ್ತಿರುವ ಪತ್ನಿ, ಸಂಪೂರ್ಣ ಗುಣಮುಖಳಾದಳು ಎನ್ನುವುದನ್ನು ಸಹ ಇತಿಹಾಸ ಪುಟಗಳು ತೆರೆದಿಡುತ್ತವೆ. ಮೃತದೇಹವನ್ನು ಗೋವಾಕ್ಕೆ ಕೊಂಡೊಯ್ಯಲು ಅಂದು ಫಾದರ್ ಮೆಲ್ಕಿಯೋರ್ ಭಟ್ಕಳಕ್ಕೆ ಆಗಮಿಸಿದ್ದರು ಎನ್ನುವುದು ಕೂಡಾ ಸತ್ಯ. ಇಲ್ಲಿನ ಸ್ಥಾಪಿಸಿದ ಶಿಲುಭೆಯ ಎದುರು ಪ್ರತಿ ವರ್ಷವೂ ಕೂಡಾ ನೂರಾರು ಕ್ರಿಶ್ಚಿಯನ್ ಬಾಂಧವರು ಪೂಜೆ ಸಲ್ಲಿಸಿ ಪ್ರಾರ್ಥಿಸುವುದು ವಾಡಿಕೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ