May 7, 2024

Bhavana Tv

Its Your Channel

ನಾನು ಪ್ರಚಾರಕ್ಕಾಗಿ ರಾಜಕಾರಣಕ್ಕೆ ಬಂದವನಲ್ಲ-ಸಚಿವ ಡಾ. ನಾರಾಯಣಗೌಡ

ಕೆ.ಆರ್.ಪೇಟೆ: ನಾನು ಪ್ರಚಾರಕ್ಕಾಗಿ ರಾಜಕಾರಣಕ್ಕೆ ಬಂದವನಲ್ಲ. ಯಾರು ಏನೇ ಹೇಳಲಿ ನನಗೆ ಬೇಕಾಗಿರುವುದು ಜನರ ನೆಮ್ಮದಿ ಹಾಗೂ ತಾಲೂಕಿನ ಅಭಿವೃದ್ಧಿ. ಇದರ ಬಗೆಗಷ್ಟೆ ಅಧಿಕಾರಿಗಳು ಗಮನವನ್ನು ಹರಿಸಿ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಹೇಳಿದರು.

ಅವರು ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತದ ವತಿಯಿಂದ ನೂತನವಾಗಿ ತಾಲೂಕಿಗೆ ತಹಸೀಲ್ದಾರ್ ಆಗಿ ವರ್ಗಾವಣೆಗೊಂಡು ಬಂದಿರುವ ಎಂ.ವಿ.ರೂಪಾ ಅವರು ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ನಾನು ಸಚಿವನಾದ ಆರಂಭದಲ್ಲಿಯೇ ಕೊರೊನಾ ಮಹಾಮಾರಿ ಬಂದಿದ್ದರಿoದ ಉಸಿರಾಡಲು ಕೂಡಾ ಕಷ್ಟವಾಯಿತು. ಅದರಲ್ಲಿಯೂ ನನ್ನ ಮೇಲೆ ಜಿಲ್ಲೆಯ ರಾಜಕಾರಣಿಗಳು ಬಾಂಬೆಯಿAದ ಜನರನ್ನು ಕರೆತಂದು ಕೊರೊನಾ ಹಬ್ಬಿಸಲು ಸಚಿವ ನಾರಾಯಣಗೌಡರೆ ಕಾರಣ ಅಂತ ಸುಳ್ಳು ಪ್ರಚಾರವನ್ನೆ ಮಾಡಿದರು. ಅದನ್ನೆಲ್ಲಾ ಸಮರ್ಥವಾಗಿ ಎದುರಿಸಿದೆ.
ಆದರೀಗ ಮತ್ತೆ ಒಮಿಕ್ರಾನ್ ಹೆಸರಿನಲ್ಲಿ ಕೊರೊನಾ ಮತ್ತೆ ವ್ಯಾಪಕವಾಗಿ ಹರಡುವ ಮುನ್ಸೂಚನೆಯಿದೆ. ಇದನ್ನು ಎದುರಿಸಲು ತಾಲೂಕು ಆಡಳಿತ ಸಕಲ ರೀತಿಯಲ್ಲಿಯೂ ಸಜ್ಜುಗೊಳ್ಳಬೇಕು. ಹಿಂದೆ ಆದ ತಪ್ಪುಗಳು ಮರುಕಳಿಸಬಾರದು ಎಂದು ನಾರಾಯಣಗೌಡ ಎಚ್ಚರಿಸಿದರು. ಸರಕಾರ ಕೋವಿಡ್ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಪೊಲೀಸ್ ಇಲಾಖೆ ಕ್ರಮವಹಿಸಬೇಕು. ಯಾರಿಗೂ ಕೂಡಾ ನೈಟ್‌ಕರ್ಫ್ಯೂ ಹಿಂಸೆ ಎಂದು ಅನ್ನಿಸಬಾರದು. ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸುವ ಮೂಲಕ ಕಾನೂನನ್ನು ಯಶಸ್ವಿಯಾಗಿ ಜಾರಿಗೊಳಿಸಬೇಕು. ತಹಸೀಲ್ದಾರ್ ರೂಪ ಅವರು ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಜೊತೆಯಾಗಿ ಕರೆದೊಯ್ಯಬೇಕು. ನಾನು ಯಾವ ಅಧಿಕಾರಿಯನ್ನು ಕೂಡಾ ಪ್ರಶ್ನಿಸುವುದಿಲ್ಲ. ನಿಮ್ಮ ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸಮಾಡಿ. ನನಗೆ ಕೆಲವೊಂದು ಇಲಾಖೆಯ ಮೇಲೆ ಅಸಮಾಧಾನವಿದೆ. ಅವರು ತಮ್ಮ ತಪ್ಪನ್ನು ತಿದ್ದಿಕೊಂಡು ಸಮಾಜ ಮುಖಿಯಾಗಿ ಕೆಲಸ ಮಾಡದಿದ್ದರೆ ಅಂತಹವರನ್ನು ಇಂತಹ ಸಭೆಗಳಲ್ಲಿ ಬಹಿರಂಗವಾಗಿ ಮಾತನಾಡುವುದಿಲ್ಲ. ಶೀಘ್ರದಲ್ಲೆ ತಹಸೀಲ್ದಾರ್ ಅವರ ಸಮ್ಮುಖದಲ್ಲಿಯೆ ಕರೆಸಿ ಅಂತಹ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮ ಕೈಗೊಳ್ಳಲು ಸೂಚಿಸುತ್ತೇನೆ ಎಂದು ನಾರಾಯಣಗೌಡ ಹೇಳಿದರು.

ಪಟ್ಟಣದ ಪುರಸಭೆ ವ್ಯಾಪ್ತಿಯ ಜಯನಗರ ಬಡಾವಣೆಗೆ ಕೆಪಿಎಸ್ ಶಾಲೆ ಮಂಜೂರು ಮಾಡಿಸಲು ಕ್ರಮ :
ಸಭೆಗೆ ಆಗಮಿಸಿದ್ದ ಜಯನಗರ ಬಡಾವಣೆಯ ಹಿರಿಯ ನಾಗರಿಕರಾದ ಬಳ್ಳೇಕೆರೆ ಮಂಜುನಾಥ್, ಚಾ.ಶಿ.ಜಯಕುಮಾರ್, ಶರತ್ ಪುರಸಭಾ ಸದಸ್ಯರುಗಳಾದ ಹೆಚ್.ಆರ್.ಲೋಕೇಶ್, ಗಿರೀಶ್ ಅವರು ಜಯನಗರ ಬಡಾವಣೆಯು ವಿಸ್ತೀರ್ಣದಲ್ಲಿ ದೊಡ್ಡದಿದ್ದು ಸುಮಾರು 6 ಸಾವಿರ ಜನರು ವಾಸಿಸುತ್ತಿದ್ದಾರೆ. ಬಡವರು ಹಾಗೂ ಮಧ್ಯಮ ವರ್ಗದ ಮಕ್ಕಳೆ
ಹೆಚ್ಚಿದ್ದು ಪಟ್ಟಣದಲ್ಲಿರುವ ಇತರೆ ಶಾಲೆಗಳಿಗೆ ಜನಸಂದಣಿಯನ್ನು ದಾಟಿ ಹೋಗಬೇಕಿದೆ. ಅದ್ದರಿಂದ ಇಲ್ಲಿಗೆ ಕೆಪಿಎಸ್ ಮಾದರಿಯ ಶಾಲೆಯನ್ನು ಮಂಜೂರು ಮಾಡಿಸುವಂತೆ ಕೋರಿದರು. ತಕ್ಷಣವೆ ಸಭೆಯಲ್ಲಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ಅವರಿಗೆ ನಿರ್ದೇಶನ ನೀಡಿದ ಸಚಿವರು ಅಗತ್ಯ ಕ್ರಮವನ್ನು ತೆಗೆದುಕೊಂಡು ಶಾಲೆ ಆರಂಭಕ್ಕೆ ತಯಾರಿ ನಡೆಸಿ ಎಂದು ಸೂಚಿಸಿದರು.
ಪಿಂಚಣಿ ನಿಲುಗಡೆಗೆ ಆಕ್ರೋಶ : ತಾಲೂಕಿನಲ್ಲಿ ಸಾವಿರಾರು ಮಂದಿಗೆ ವಿಧವಾ, ಅಂಗವಿಕಲ, ವೃದ್ದಾಪ್ಯ ವೇತನಗಳು ಕಳೆದ 10 ತಿಂಗಳಿನಿoದ ಬರುತ್ತಿಲ್ಲ. ಇದರಿಂದಾಗಿ ಸ್ಥಳೀಯ ಮಟ್ಟದ ಜನಪ್ರತಿನಿಧಿಗಳಿಗೆ ಬೀದಿಯಲ್ಲಿ ಓಡಾಡಲು ಆಗುತ್ತಿಲ್ಲ. ಅಧಿಕಾರಿಗಳ ಮುಂದೆ ಎಷ್ಟೆ ಹೇಳಿದರೂ ಕೂಡಾ ಅರಣ್ಯರೋಧನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದಾಗ ಸಚಿವ ನಾರಾಯಣಗೌಡ ಅವರು ಯಾಕೆ ಈ ರೀತಿಯ ಸಮಸ್ಯೆಯಾಗಿದೆ? ಎಂದು ತಹಸೀಲ್ದಾರ್ ಅವರನ್ನು ಪ್ರಶ್ನಿಸಿ ಕೂಡಲೆ ಈ ಸಮಸ್ಯೆಯನ್ನು ಬಗೆಹರಿಸಿ ಎಂದು ತಾಕೀತು ಮಾಡಿದರು.
ಸಭೆಯಲ್ಲಿ ಹಾಜರಿದ್ದ ಎಲ್ಲಾ ಅಧಿಕಾರಿಗಳಿಗೂ ಕೂಡಾ ಮನವಿ ಮಾಡಿದ ಸಚಿವ ನಾರಾಯಣಗೌಡ ರಾಜಕಾರಣವನ್ನು ನಾನು ಮಾಡುತ್ತೇನೆ. ನೀವು ಮಾಡುವುದು ಬೇಡ. ನನ್ನ ಜೊತೆಯಲ್ಲಿ ನೀವು ತಾಲೂಕಿನ ಅಭಿವೃದ್ಧಿಗೆ ಕೈ ಜೋಡಿಸಿ. ಜನರ ಮುಂದೆ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಡಿ. ನನ್ನ ಹೆಸರು ಹೇಳಿದರೂ ಕೂಡಾ ಕಾನೂನು ಬದ್ದವಾಗಿದ್ದರೆ ಮಾತ್ರ ಕೆಲಸ ಮಾಡಿಕೊಡಿ. ಕಾನೂನಿಗೆ ವಿರುದ್ದವಾದ ಕೆಲಸವನ್ನು ಮಾಡಿದರೆ ನೀವೆ ಹೊಣೆ ಹೊರಬೇಕಾಗುತ್ತದೆ ಎಂದು ಸೂಚಿಸಿದರು.

ಸಭೆಯಲ್ಲಿ ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಷ್, ಪುರಸಭೆ ಮಾಜಿ ಅಧ್ಯಕ್ಷ ಕೆ.ಗೌಸ್‌ಖಾನ್, ತಹಸೀಲ್ದಾರ್ ಎಂ.ವಿ.ರೂಪಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಹೆಚ್.ಎಸ್.ಚಂದ್ರಶೇಖರ್, ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಎಂ.ಕೆ.ದೀಪಕ್, ಕೆ.ಎಸ್.ನಿರಂಜನ್, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು, ಚೆಸ್ಕಾಂ ಇಂಜಿನಿಯರ್‌ಗಳಾದ ಕೃಷ್ಣ, ರಾಜಶೇಖರ್, ತಾಲೂಕು ವೈದ್ಯಾಧಿಕಾರಿ ಮಧುಸೂಧನ್, ವೈದ್ಯಾಧಿಕಾರಿ ಡಾ. ಜಯಪ್ರಕಾಶ್, ಅಬಕಾರಿ ನಿರೀಕ್ಷಕಿ ಸಿ.ಪಿ.ಭವ್ಯ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್, ಸೇರಿದಂತೆ ವಿವಿಧ ತಾಲೂಕಿನ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: