
ಕೆಆರ್ಪೇಟೆ : ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮವಾದ ಸಂಸ್ಕಾರ ಹಾಗೂ ಮಾನವಿಯ ಮೌಲ್ಯಗಳನ್ನು ತುಂಬುವ ಮೂಲಕ ಭವಿಷ್ಯದ ನಾಯಕರನ್ನಾಗಿ ರೂಪಿಸುವುದು ಇಂದಿನ ಅಗತ್ಯವಾಗಿದೆ ಎಂದು ಸಾಂಸ್ಕೃತಿಕ ಸಂಘಟಕ ವೇದಬ್ರಹ್ಮ ಶ್ರೀಗೋಪಾಲಕೃಷ್ಣ ಅವಧಾನಿಗಳು ಹೇಳಿದರು ..

ಅವರು ಕೆ.ಆರ್.ಪೇಟೆ ಪಟ್ಟಣದ ಜಯನಗರ ಬಡಾವಣೆಯಲ್ಲಿ ನೂತನವಾಗಿ ಆರಂಭವಾಗಿರುವ ಫಸ್ಟ್ ಕ್ರೈ ಇಂಟೆಲಿಟಾಟ್ಸ್ ಪ್ರಿಸ್ಕೂಲ್ ನಲ್ಲಿ ಪೋಷಕರು ಮತ್ತು ಮಕ್ಕಳಿಗೆ ಆಯೋಜಿಸಿದ್ದ ಫಾರಂ ಪಾರ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು..
ಪುಟಾಣಿ ಮಕ್ಕಳಿಗೆ ಬಾಲ್ಯದಿಂದಲೇ ನಮ್ಮ ಪರಿಸರ, ಭೂಮಿ, ಗಿಡಮರಗಳು ಹಾಗೂ ಪ್ರಾಣಿಗಳ ಬಗ್ಗೆ ಅರಿವಿನ ಜಾಗೃತಿ ಮೂಡಿಸುವ ಈ ವಿಶೇಷ ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಬೀಜಗಳು ಹಾಗೂ ಗಿಡಗಳ ಬಗ್ಗೆ ಅರಿವು ಮೂಡಿಸುವ ಜೊತೆಗೆ ಮಕ್ಕಳ ಕೈಯಿಂದಲೇ ಭೂಮಿಯಲ್ಲಿ ಬೀಜವನ್ನು ಬಿತ್ತುವ ಕೆಲಸವನ್ನು ಮಾಡಿಸಲಾಗುತ್ತಿದೆ. ಕೆಲಸದೊಂದಿಗೆ ಆಟ, ಆಟದೊಂದಿಗೆ ವಿದ್ಯಾಭ್ಯಾಸ ಎಂಬ ಸರಳ ತತ್ವವನ್ನು ಅನುಸರಿಸಿ ಮಕ್ಕಳಿಗೆ ಹಾಗೂ ಮಕ್ಕಳ ಪೋಷಕರಿಗೆ ವಿವಿಧ ಸರಳ ಆಟೋಟಗಳನ್ನು ಆಯೋಜಿಸಿ ಮನಸ್ಸಿಗೆ ಸಂತೋಷ ತುಂಬಿ, ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಹೇಳಿದ ಗೋಪಾಲಕೃಷ್ಣ ಅವಧಾನಿಗಳು ನಮ್ಮ ಮಕ್ಕಳಿಗೆ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಅರಿವು ಮೂಡಿಸಿ ಪರಿಸರ ಹಾಗೂ ಗಿಡಮರಗಳ ಬಗ್ಗೆ ಬಾಲ್ಯದಿಂದಲೇ ಪ್ರೀತಿಯನ್ನು ಹಾಗೂ ಉತ್ತಮವಾದ ಸಂಸ್ಕಾರವನ್ನು ಬೆಳೆಸಿಕೊಳ್ಳುವಂತೆ ಉತ್ತೇಜಿಸಲಾಗುತ್ತಿದೆ. ಈ ಕಾರ್ಯಕ್ಕೆ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು..
ಮಕ್ಕಳಿಗೆ ದೇಶ ಪ್ರೇಮವನ್ನು ತುಂಬುವ ದಿಕ್ಕಿನಲ್ಲಿ ಸ್ವಾತಂತ್ರವನ್ನು ತಂದುಕೊಡಲು ಹೋರಾಡಿ ಮಡಿದ ಮಹನೀಯರ ವೇಷ ಭೂಷಣಗಳನ್ನು ತೊಡಿಸಿಕೊಂಡು ಬಂದಿರುವ ಪೋಷಕರು ಶಾಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಭಾವನೆಗೆ ಪೂರಕವಾಗಿ ಸ್ಪಂದಿಸುತ್ತಿದ್ದಾರೆ. ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಸಂಪರ್ಕ ಸೇತುವೆಯಂತೆ ಕೆಲಸ ಮಾಡುತ್ತಿರುವ ಪೋಷಕರ ಸಹಕಾರವನ್ನು ಸದಾ ಸ್ಮರಿಸುವುದಾಗಿ ಶಾಲೆಯ ವ್ಯವಸ್ಥಾಪಕಿ ತೇಜಸ್ವಿನಿ ಹೇಳಿದರು.
ಶಿಕ್ಷಕರಾದ ಸುಚಿತ್ರ, ಪವಿತ್ರ, ಸೌಮ್ಯ, ಸಿಂಧೂ, ಗಂಗಾ, ಶಾಲಾ ಆಡಳಿತ ಮಂಡಳಿಯ ನಿರ್ದೇಶಕ ಅರ್ಜುನ್ ಸೇರಿದಂತೆ ಮಕ್ಕಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..
ಆಡು, ದನ, ಎತ್ತುಗಳು, ಕುದುರೆ, ಎತ್ತಿನಗಾಡಿ, ಟ್ರಾಕ್ಟರ್ ವಿವಿಧ ಕೃಷಿ ಸಲಕರಣೆಗಳು ಹಾಗೂ ವಿವಿಧ ಬಗೆಯ ಹಣ್ಣು ತರಕಾರಿಗಳ ಬೀಜವನ್ನು ಮಕ್ಕಳಿಗೆ ಪರಿಚಯ ಮಾಡಿಕೊಡಲಾಯಿತು.
ವರದಿ: ಡಾ.ಕೆ.ಆರ್.ನೀಲಕಂಠ ಕೃಷ್ಣರಾಜಪೇಟೆ, ಮಂಡ್ಯ .
More Stories
ತಮಟೆಯ ಸದ್ದಿಗೆ ಲಯಬದ್ದವಾಗಿ ಹೆಜ್ಜೆ ಹಾಕಿ ರಂಗ ಕುಣಿದು ಸಂಭ್ರಮಿಸಿದ ಗ್ರಾಮಸ್ಥರು..
ಇಂಧನ ದಕ್ಷ ಪಂಪ್ ಉಪಕರಣಗಳ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ
ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಚುನಾವಣಾಧಿಕಾರಿ ಚಂದ್ರಯ್ಯ ಮನವಿ