
ಹೊನ್ನಾವರ:– ಪಂಜಾಬ್ ರಾಜ್ಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪಂಜಾಬ್ ನ ಫಿರೋಜ್ಪುರ ಪ್ರವಾಸದ ಸಂದರ್ಭದಲ್ಲಿ ನಡೆದ ಭದ್ರತಾ ವೈಫಲ್ಯ ಮತ್ತು ಹತ್ಯೆಯ ಸಂಚಿನ ತನಿಖೆಯನ್ನು ಅತೀ ಶೀಘ್ರದಲ್ಲಿ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಿಜೆಪಿ ಯುವ ಮೋರ್ಚಾ ಹೊನ್ನಾವರ ಘಟಕದಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಬಿಜೆಪಿ ಮಂಡಲಾಧ್ಯಕ್ಷ ರಾಜು ಭಂಡಾರಿ ಮಾತನಾಡಿ ಪ್ರಧಾನಿಯವರ ಪಂಜಾಬ್ ಪ್ರವಾಸದ ವೇಳೆ ದೇಶದ ಯಾವುದೇ ಪ್ರಧಾನ ಮಂತ್ರಿಗೆ ಆಗದ ಅವಮಾನ ಅಲ್ಲಿನ ಸರ್ಕಾರ ಮಾಡಿದೆ. ಪ್ರಧಾನಿ ಮೋದಿಯವರ ಜೀವದ ಜೊತೆ ಚೆಲ್ಲಾಟವಾಡಿದ್ದಾರೆ. ಅವರ ಸಂಚಾರ ತಡೆದು ಅವರ ಪ್ರಾಣ ಅಪಾಯ ಸ್ಥಿತಿಗೆ ತಳ್ಳಿದ್ದಾರೆ. ಇದಕ್ಕೆ ನೇರ ಹೊಣೆ ಸೋನಿಯಾಗಾಂಧಿ , ರಾಹುಲ್ ಗಾಂಧಿ ಹಾಗೂ ಅವರ ಕೃಪೆಯಿಂದ ಆಡಳಿತ ನಡೆಸುತ್ತಿರುವ ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚಿನ್ನಿ ಎಂದು ದೂರಿದರು. ಶಿಷ್ಟಾಚಾರದ ಪ್ರಕಾರ ಪಂಜಾಬ್ ಮುಖ್ಯಮಂತ್ರಿ ವಿಮಾನ ನಿಲ್ದಾಣಕ್ಕೆ ಬಂದು ಸ್ವಾಗತಿಸಬೇಕಿತ್ತು. ಅದರ ಬಗ್ಗೆ ಕೇಳಿದಾಗ ತಾನು ಕರೋನಾ ಸೋಕಿತನ ಸಂಪರ್ಕಕ್ಕೆ ಬಂದಿದ್ದೆ ಎಂದು ಉತ್ತರಿಸುತ್ತಾರೆ, ಅದೇ ದಿನ ಸಾಯಂಕಾಲ ಪತ್ರಿಕಾಗೋಷ್ಠಿ ನಡೆಸುತ್ತಾರೆ, ಮಾರನೇ ದಿನ ತನ್ನ ಕಾರಿನಲ್ಲಿ ಪತ್ರಕರ್ತನೊಬ್ಬನನ್ನು ಪಕ್ಕದಲ್ಲಿ ಕೂರಿಸಿ ಸಂದರ್ಶನವನ್ನು ನೀಡುತ್ತಾರೆ. ಕಾಂಗ್ರೆಸ್ಸಿನ ಎಲ್ಲರೂ ಕೂಡ ಬಾಲಿಶತನದ ಹೇಳಿಕೆ ನೀಡುತ್ತಾರೆ, ರಾಷ್ಟ್ರಪತಿಯವರ ಮಧ್ಯಪ್ರವೇಶಿಸಿ ಪಂಜಾಬ್ ಸರ್ಕಾರವನ್ನು ಕಿತ್ತೆಸೆದು ರಾಷ್ಟ್ರಪತಿ ಆಡಳಿತ ಜಾರಿ ತರಬೇಕೆಂದು ವಿನಂತಿಸುತ್ತೇನೆ ಎಂದರು.
ಪ್ರಧಾನಮAತ್ರಿ ಅಥವಾ ಯಾವುದೇ ಗಣ್ಯ ವ್ಯಕ್ತಿಗಳು ಸಂಚರಿಸುತ್ತಿದ್ದಾರೆ ಎಂದರೆ ಅಲ್ಲಿನ ಡಿಜಿ ಸಂಪೂರ್ಣ ಜವಾಬ್ದಾರಿ ಹೊರಬೇಕು. ಪಂಜಾಬಿನಲ್ಲಿ ಖಾಯಂ ಡಿಜಿ ಇಲ್ಲ. ಅಲ್ಲಿರುವವರು ಕೆರ್ ಟೆಕರ್ ಡಿಜಿ, ಪ್ರಧಾನಿಯವರು ಯಾವಾಗ ವಾಯು ಮಾರ್ಗದಲ್ಲಿ ಹೋಗಲು ಸಾಧ್ಯವಾಗಲಿಲ್ಲವೋ ಆಗ ರಸ್ತೆ ಮಾರ್ಗ ಆಯ್ಕೆ ಮಾಡಿಕೊಂಡಿದ್ದರು. ವಿಶೇಷ ರಕ್ಷಣಾ ದಳ ಹಾಗೂ ರಾಜ್ಯ ಪೊಲೀಸ್ ಅವರ ಸಮನ್ವಯದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಅವರ ಸಂಚಾರಕ್ಕೆ ಸಂಪೂರ್ಣ ಸುರಕ್ಷತೆ ಇದೆ ಎಂದು ಹೇಳಿರುವ ಕಾರಣಕ್ಕೆ ರಸ್ತೆಮಾರ್ಗ ಆಯ್ಕೆ ಮಾಡಿದ್ದರು. ಆದರೆ ಪಾಕಿಸ್ತಾನದಿಂದ ಹತ್ತು ಕಿಲೋಮೀಟರ್ ದೂರದಲ್ಲಿರುವ ಹುಸೇನಿವಾಲದ ಮೇಲ್ಸೇತುವೆಯಲ್ಲಿ ಪ್ರಧಾನಿಯವರ ಕಾರು ಅಡ್ಡಹಾಕಿ ಸಂಚಾರ ನಿಲ್ಲಿಸಿದ್ದರು. ಇದು ದುರುದ್ದೇಶದಿಂದ ಮಾಡಿರುವ ಕುತಂತ್ರ ಎಂದರು.
ತಹಶೀಲ್ದಾರ ನಾಗರಾಜ ನಾಯ್ಕಡ್ ಮನವಿ ಸ್ವೀಕರಿಸಿದರು. ಈ ಸಂದರ್ಬದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಶಿವರಾಜ ಮೇಸ್ತ, ಮುಖಂಡರಾದ ಎಂ.ಎಸ್.ಹೆಗಡೆ ಕಣ್ಣಿ, ಯುವಾಮೋರ್ಚಾ ತಾಲೂಕಾಧ್ಯಕ್ಷ ಸಚಿನ್ ಶೇಟ್, ಪ್ರಧಾನ ಕಾರ್ಯದರ್ಶಿ ಕೃಷ್ಣ ಜೋಶಿ, ಕೇಶವ ಗೌಡ, ಪದಾಧಿಕಾರಿಗಳಾದ ಶಿವರಾಜ ನಾಯ್ಕ, ಪ್ರದೀಪ ನಾಯ್ಕ, ಸಂದೇಶ, ಶಿವಾನಂದ್ ಮರಾಠಿ, ವಿನೋದ್ ಗೌಡ, ಶಿವರಾಜ ಗುನಗಾ ಮತ್ತಿತರರು ಉಪಸ್ಥಿತರಿದ್ದರು.
ವರದಿ: ವೆಂಕಟೇಶ ಮೇಸ್ತ ಹೊನ್ನಾವರ

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ