
ಭಟ್ಕಳ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್.ಆರ್.ಎಲ್.ಎಂ) ಯೋಜನೆಯು ಕರ್ನಾಟಕದಲ್ಲಿ ಸಂಜೀವಿನಿ ಎಂಬ ಹೆಸರಿನಲ್ಲಿ ಅನುಷ್ಠಾನ ಮಾಡಲಾಗುತ್ತಿದ್ದು, ಗ್ರಾಮೀಣ ಬಡ ಮಹಿಳೆಯರನ್ನು ಸ್ವಸಹಾಯ ಸಂಘಗಳ ಮೂಲಕ ಸಂಘಟಿಸಿ ಹಣಕಾಸಿನ ನೆರವನ್ನು ನೀಡಿ ತನ್ಮೂಲಕ ಮಹಿಳೆಯರಿಗೆ ಆದಾಯ ತರುವ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಪ್ರೋತ್ಸಾಹಿಸಿ ಮಹಿಳಾ ಸಬಲೀಕರಣ ಸಾಧಿಸುವುದು ಯೋಜನೆಯ ಉದ್ದೇಶ ಎಂದು ಶಾಸಕ ಸುನೀಲ್ ನಾಯ್ಕ ಹೇಳಿದರು.
ಅವರು ಸ್ವಸಹಾಯ ಸಂಘಗಳ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ತಾಲೂಕ ಪಂಚಾಯತ ಭಟ್ಕಳ ಹಾಗೂ ಸಂಜೀವಿನಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟಗಳ ಸಹಯೋಗದೊಂದಿಗೆ ಸಂಜೀವಿನಿ ಮಾಸಿಕ ಸಂತೆಯನ್ನು ಇಲ್ಲಿನ ವಾರದ ಸಂತೆ ಮಾರುಕಟ್ಟೆಯಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ ಅವರು ಭಟ್ಕಳ ತಾಲೂಕಿನಲ್ಲಿ ಒಟ್ಟೂ 1025 ಸ್ವಸಹಾಯ ಸಂಘಗಳು ಈ ಯೋಜನೆಯಡಿ ನೋಂದಾವಣಿಯಾಗಿದ್ದು, ಒಟ್ಟೂ 12500 ಸದಸ್ಯರುಗಳಿರುತ್ತಾರೆ. ಈ ಯೋಜನೆಯಡಿ ಸಹಾಯ ಸಂಘಗಳ ಸದಸ್ಯರು ಪ್ರತಿ ಗ್ರಾಮ ಪಂಚಾಯತ ಹಂತದಲ್ಲಿ ಪಾರ್ಥ ಒಕ್ಕೂಟ, ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟಗಳನ್ನು ರಚನೆ ಮಾಡಿಕೊಂಡು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಿಳಾ ಒಕ್ಕೂಟಗಳಿಂದ ನೀಡಲ್ಪಡುವ ಸಮುದಾಯ ನಿಧಿ ಸಾಲ ಪಡೆದು ಗ್ರಹೋದ್ಯಮಗಳಾದ ಸಿಹಿ ತಿಂಡಿ ತಯಾರಿಕೆ, ಲಾವಂಚದಿoದ ತಯಾರಿಸುವ ಕರಕುಶಲ ವಸ್ತುಗಳು, ಭತ್ತದ ತೋರಣ, ಅಲಂಕಾರಿಕಾ ಹೂ ಮಾಲೆ ತಯಾರಿ, ಹೋಳಿಗೆ ತಯಾರಿಕೆ, ಟೈಲರಿಂಗ್, ಚಿಪ್ಪು ತಯಾರಿಕೆ, ಹೈನುಗಾರಿಕೆ, ಬ್ಯೂಟಿ ಪಾರ್ಲರ್, ಬಳೆ ಅಂಗಡಿ, ಬಟ್ಟೆ ವ್ಯಾಪಾರ, ಝೆರಾಕ್ಷ ಸೆಂಟರ್, ಮೇಣದ ಬತ್ತಿ ತಯಾರಿಕೆ, ಸಾಂಬಾರ್ ಪೌಡರ್, ತರಕಾರಿ ಬೆಳೆದು ವ್ಯಾಪಾರ ಮಾಡುವುದು ಇತ್ಯಾದಿ ಚಟುವಟಿಕೆಗಳನ್ನು ಕೈಗೊಂಡು ಸ್ವಾವಲಂಬಿಗಳಾಗಿ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಭಾರ ತಹಸೀಲ್ದಾರ್ ಅಶೋಕ ಭಟ್ಟ, ಎನ್.ಆರ್.ಎಲ್.ಎಂ. ತಾಲೂಕಾ ಸಂಯೋಜಕರುಗಳಾದ ಗೋಪಾಲ ನಾಯ್ಕ, ವೆಂಕಟೇಶ ದೇವಾಡಿಗ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ನಾಗರಾಜ ಕಲ್ಮನೆ, ಸಂಜೀವಿನ ಒಕ್ಕೂಟಗಳ ಅಧ್ಯಕ್ಷರುಗಳು, ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ