
ಭಟ್ಕಳ: ಪ್ರಜಾಪ್ರಭುತ್ವದಲ್ಲಿ ಟೀಕೆಯನ್ನು ಎದುರಿಸದೇ ಇರುವುದು ಕೂಡಾ ಅಪಾಯಕಾರಿಯಾಗಿದ್ದು ಕಾಂಗ್ರೆಸ್, ಜೆ.ಡಿ.ಎಸ್. ಪಕ್ಷದವರು ಟೀಕೆ ಮಾಡುವುದಕ್ಕೋಸ್ಕರವೇ ಮಾತನಾಡುತ್ತಿದ್ದಾರೆ ಎಂದು ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಸಚಿವ ಹಾಗೂ ಉ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಭಟ್ಕಳದ ಬಿ.ಜೆ.ಪಿ. ಕಚೇರಿಯಲ್ಲಿ ಕಾರ್ಯಕರ್ತರ ಅಹವಾಲುಗಳ ಸ್ವೀಕಾರಕ್ಕೂ ಮುನ್ನ ಮಾತನಾಡುತ್ತಿದ್ದರು.
ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪ್ರತಿಪಕ್ಷಗಳ ಟೀಕೆಗಳ ನಡುವೆಯೇ ಉತ್ತಮವಾಗಿ ಕೆಲಸಗಳನ್ನು ಮಾಡುತ್ತಿವೆ. ರಾಜ್ಯ ಸರಕಾರ ಸುಗ್ರೀವಾಜ್ಞೆಯ ಮೂಲಕ ತಂದಿರುವ ಮತಾಂತರ ಕಾಯಿದೆಯನ್ನು ವಿರೋಧಿಸಿ ಸಿದ್ಧರಾಮಯ್ಯ, ಬಿ.ಕೆ.ಹರಿಪ್ರಸಾದ್ ಟೀಕಿಸುತ್ತಿರುವುದಕ್ಕೆ ಆರ್ಥವೇ ಇಲ್ಲ. ಹಾಗಾದರೆ ಮತಾಂತರ ಕಾಯಿದೆಯಿಂದ ಇವರಿಗೇನು ತೊಂದರೆ ಎನ್ನುವುದನ್ನು ಸಾರ್ವಜನಿಕವಾಗಿ ಹೇಳಲಿ. ಮತಾಂತರ ಕಾಯಿದೆಯಲ್ಲಿ ಬಲವಂತದ, ಮೋಸದ, ಆಮಿಷದ, ಅಪ್ರಾಪ್ತರನ್ನು ಮದುವೆಯಾಗುವ ಆಸೆ ತೋರಿಸಿದರೆ, ತಮ್ಮ ದೇವರು ಶ್ರೇಷ್ಟ ಕಾಯಿಲೆ ಗುಣಪಡಿಸುತ್ತಾನೆ ಎನ್ನುವ ಆಮಿಷದಿಂದ ಮತಾಂತರ ಇವೆಲ್ಲವೂ ಅದರಲ್ಲಿದೆ. ಇವುಗಳಲ್ಲಿ ಕಾಂಗ್ರೆಸ್ನವರು ಯಾವುದನ್ನು ವಿರೋಧಿಸುತ್ತಾರೆ ಯಾವುದು ಇವರಿಗೆ ತೊಂದರೆಯಾಗಿರುವುದು ಎನ್ನುವುದನ್ನು ಸಾರ್ವಜನಿಕರಿಗೆ ತಿಳಿಯಪಡಿಸಲಿ ಎಂದರು.
ನಾರಾಯಣ ಗುರುಗಳ ಹೆಸರನ್ನು ಪಠ್ಯದಿಂದ ಕೈಬಿಡಲಾಗಿದೆ ಎನ್ನುವ ಕುರಿತು ಹೇಳಿಕೆ ನೀಡುವ ಈ ನಾಯಕರುಗಳಿಗೆ ಹೆಸರು ಕೈಬಿಟ್ಟಿರುವ ಕುರಿತು ಯಾರು ಹೇಳಿದರು ಎನ್ನುವುದನ್ನು ಸ್ಪಷ್ಟಪಡಿಸಬೇಕು. ನಾರಾಯಣಗುರುಗಳ ಮೂಲ ಸ್ಥಾನಕ್ಕೆ ಇಲ್ಲಿಯ ತನಕ ಯಾರೂ ಭೇಟಿ ಕೊಟ್ಟಿರಲಿಲ್ಲ. ಕೇಂದ್ರದ ಪ್ರಧಾನಿ ಮೋದಿ ಅವರು ಭೇಟಿ ನೀಡಿ 70 ಕೋಟಿ ರೂಪಾಯಿ ಅಭಿವೃದ್ಧಿಗೆ ಮಂಜೂರಿಸಿದ್ದಾರೆ. ರಾಜ್ಯ ಸರಕಾರ ನಾರಾಯಣ ಗುರುಗಳ ಹೆಸರಿನಲ್ಲಿ ನಾಲ್ಕು ವಸತಿ ಶಾಲೆಗಳನ್ನು ಮಂಜೂರು ಮಾಡಿದೆ. ಅವುಗಳಲ್ಲಿ ಒಂದನ್ನು ಭಟ್ಕಳಕ್ಕೆ ಕೊಟ್ಟಿದ್ದೇನೆ ಎಂದ ಅವರು ಉಡುಪಿಗೆ, ಮಂಗಳೂರಿಗೆ, ಶಿವಮೊಗ್ಗಕ್ಕೆ ಒಂದೋದು ವಸತಿ ಶಾಲೆ ನೀಡಲಾಗಿದೆ. ಇಲ್ಲಿ ಬಡ ಹಿಂದುಳಿದ ವರ್ಗಗಳ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ, ವಸತಿ ದೊರೆಯಲಿದೆ ಎಂದರು.
ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದಾಗಿ ಅಪಾರ ಹಾನಿಯಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ನೀತಿ ಸಂಹಿತೆ ಜ್ಯಾರಿಯಲ್ಲಿರುವುದರಿಂದ ಜಿಲ್ಲಾಧಿಕಾರಿಗಳು, ತಹಸೀಲ್ದಾರ್ ಹಾಗೂ ಆಯಾಯ ಶಾಸಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದ್ದೇವೆ ಎಂದರು.
ಆರ್.ಎಸ್.ಎಸ್. ಚೀನಾ ಯುದ್ಧದ ಸಂದರ್ಭದಲ್ಲಿ ದೇಶ ರಕ್ಷೆಣೆಗೋಸ್ಕರ ಮಾಡಿದ ಕಾರ್ಯವನ್ನು ನೋಡಿ ಅಂದಿನ ಪ್ರಧಾನಿ ನೆಹರೂ ಅವರು ಗಣರಾಜ್ಯೋತ್ಸವದಂದು ಪೆರೇಡ್ಗೆ ಆಹ್ವಾನ ನೀಡಿದ್ದರು. ಸಿದ್ಧರಾಮಯ್ಯ ನೆಹರೂ ಅವರನ್ನು ವಿರೋಧಿಸುತ್ತಾರೆಯೇ? ಎಂದ ಅವರು ಅವರನ್ನು ಗೌರವಿಸುವುದಾದರೆ, ಅವರು ಗೌರವಿಸಿದ ಆರ್.ಎಸ್.ಎಸ್.ನ್ನು ಗೌರವಿಸಬೇಕು ಎಂದರು.
ಈ ಸಂದರ್ಭದಲ್ಲಿ ಶಾಸಕ ಸುನಿಲ್ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ