ಭಟ್ಕಳ: ನಮ್ಮ ಸಮಾಜದ ಅಮಾಯಕ ಹಾಗೂ ಬೈಲೂರು ಗ್ರಾಮ ಪಂಚಾಯತ್ ಸದಸ್ಯನ ಮೇಲೆ ಜಿಲ್ಲಾ ಪೊಲೀಸ್ ಸ್ಕ್ವಾಡ್ ಎಂದು ಹೇಳಿಕೊಂಡು 8-10 ಜನರ ಗ್ಯಾಂಗ್ ಮಾರಣಾಂತಿಕ ಹಲ್ಲೆ ನಡೆಸಿದ್ದು ತಕ್ಷಣ ಅವರ ಮೇಲೆ ಇಲಾಖೆಯ ವತಿಯಿಂದ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಭಟ್ಕಳ ಹಾಗೂ ಮಾವಳ್ಳಿ ನಾಮಧಾರಿ ಕೂಟದ ವತಿಯಿಂದ ಬೃಹತ್ ಪ್ರತಿಭಟನೆಯನ್ನು ನಡೆಸುವುದು ಅನಿವಾರ್ಯವಾಗುವುದು ಎಂದು ಭಟ್ಕಳ ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣಾ ನಾಯ್ಕ ಆಸರಕೇರಿ ಹೇಳಿದ್ದಾರೆ.
ಶಿರಾಲಿಯ ಸಾರದಹೊಳೆ ಶ್ರೀ ಹಳೇಕೋಟೆ ಹನುಮಂತ ದೇವಸ್ಥಾನದ ಆವರಣದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.
ಕಳೆದ ಗುರುವಾರ ಮಧ್ಯರಾತ್ರಿಯ ಸುಮಾರು ತನ್ನ ಸಹೋದರನೊಂದಿಗೆ ಕಾರಿನಲ್ಲಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗುತ್ತಿರುವ ಬೈಲೂರು ಗ್ರಾಮ ಪಂಚಾಯತ್ ಸದಸ್ಯ ವಾಸು ನಾಯ್ಕ ಎನ್ನುವ ಯುವಕ ಬಸ್ತಿಮಕ್ಕಿ ಕ್ರಾಸ್ನಲ್ಲಿ ಮೂತ್ರ ಮಾಡುವುದಕ್ಕೆಂದು ಕಾರಿನಿಂದ ಇಳಿಯುತ್ತಲೇ ಏಕಾಎಕಿ ಹಿಂದಿನಿAದ ಬಂದು ಆತನನ್ನು ಹಿಡಿದುಕೊಂಡು ಹಿಗ್ಗಾಮುಗ್ಗಾ ಥಳಿಸಲಾಗಿದೆ. ತಾನು ಗ್ರಾಮ ಪಂಚಾಯತ್ ಸದಸ್ಯ ಎಂದರೂ ಕೂಡಾ ಬಿಡದೇ 8-10 ಜನರು ಸೇರಿಕೊಂಡು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಇದೊಂದು ಅಮಾನವೀಯ ಕೃತ್ಯವಾಗಿದೆ. ಯಾವುದೇ ವ್ಯಕ್ತಿ ತನ್ನ ಗುರುತು ಹೇಳಿದಾಗ ಅವರನ್ನು ವಿಚಾರಿಸಿ ಹತ್ತಿರದ ಠಾಣೆಗೆ ಕರೆದುಕೊಂಡು ಹೋಗಿ ಪರಿಶೀಲನೆ ಮಾಡಬಹುದಿತ್ತು. ಆದರೆ ಅದನ್ನು ಬಿಟ್ಟು ಅಮಾಯಕ, ಅನಾರೋಗ್ಯದಿಂದ ಬಳಲುತ್ತಿರುವವನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪೊಲೀಸ್ ಎಂದು ಹೇಳಿಕೊಳ್ಳುವವರ ಅನಾಗರೀಕ ಕೃತ್ಯವಾಗಿದೆ. ಅವರು ಯಾರೇ ಇರಲಿ ಅವರನ್ನು ತಕ್ಷಣ ಕಾನೂನು ಕ್ರಮಕ್ಕೆ ಒಳಪಡಿಸಿ ಸೂಕ್ತ ನ್ಯಾಯ ವದಗಿಸಿಕೊಡಬೇಕು. ಇಲ್ಲವಾದಲ್ಲಿ ನಾವು ಎರಡೂ ಕೂಟದವರು ಸೇರಿ ಬೃಹತ್ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದೂ ಅವರು ಎಚ್ಚರಿಕೆಯನ್ನು ನೀಡಿದರು.
ಮಾವಳ್ಳಿ ಹೋಬಳಿಯ ಅಧ್ಯಕ್ಷ ಸುಬ್ರಾಯ ನಾಯ್ಕ ಮಾತನಾಡಿ ನಮ್ಮ ಕೂಟದ ಓರ್ವ ಯುವಕನಿಗೆ ಅನ್ಯಾಯವಾಗಿದೆ ಎನ್ನುವಾಗ ನಾವು ಅವನ ಸಹಾಯಕ್ಕೆ ನಿಲ್ಲುವುದು ನಮ್ಮ ಧರ್ಮವಾಗಿದೆ. ಅದೇ ರೀತಿ ವಾಸು ನಾಯ್ಕ ಅವರ ಪೂರ್ವಾಪರ ವಿಚಾರಿಸದೇ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು ಇಂದು ಚಿಕಿತ್ಸೆಯಲ್ಲಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಶಿಫಾರಸು ಮಾಡಿದ್ದು ಅವರ ಆರೋಗ್ಯಕ್ಕೆ ತೀವ್ರ ಹಾನಿಯಾಗಿದೆ. ಆತನಿಗೆ ನ್ಯಾಯ ದೊರಕಿಸಿಕೊಡುವ ತನಕ ನಾವು ಅವನೊಂದಿಗೆ ಇರಲಿದ್ದೇವೆ ಎಂದು ಹೇಳಿದರು.
ಸ್ವತಹ ಹಾಜರಿದ್ದ ವಾಸು ನಾಯ್ಕ ಅವರು ತಮಗಾದ ಅನ್ಯಾಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟರಲ್ಲದೇ, ಸುಮಾರು 10 ರಿಂದ 15 ನಿಮಿಷಗಳ ಕಾಲ ತನ್ನನ್ನು ಹೊಡೆದರು. ನಾನು ಗ್ರಾಮ ಪಂಚಾಯತ್ ಸದಸ್ಯ ಆಸ್ಪತ್ರೆಗೆ ಹೋಗುತ್ತಿದ್ದೇನೆ ಎಂದರೂ ಸಹ ಕೇಳದೇ ಹಲ್ಲೆ ನಡೆಸಿದ್ದಾರೆ. ನೀವು ಯಾರು ಎಂದು ಕೇಳಿದರೂ ಸಹ ಹೇಳಿಲ್ಲ. ನಾನು ಯಾರೋ ದರೋಡೆಕೋರರು ಎಂದು ತಿಳಿದು ಇಂದಿಗೆ ನನ್ನ ಆಯುಷ್ಯ ಮುಗಿಯಿತು ಎಂತಾ ತೀವ್ರ ನೊಂದುಕೊAಡೆ. ಹಲ್ಲೆಯಿಂದ ತೀವ್ರ ಸುಸ್ತಾಗಿ ನೀರು ಕೇಳಿದರೆ ಅದರಲ್ಲಿ ಓರ್ವರು ನನ್ನ ಬಾಯಿಗೆ ಮೂತ್ರ ಮಾಡಲು ಮುಂದಾಗಿದ್ದು ಮಾತ್ರ ನನ್ನ ಜೀವನದಲ್ಲಿ ಮರೆಯಲಾಗದ ಘಟನೆಯಾಗಿದ್ದು ಅಲ್ಲಿ ಇಲ್ಲಿ ಪೊಲೀಸ್ ದೌರ್ಜನ್ಯ ಎಂದು ಕೇಳುತ್ತೇವೆ ಆದರೆ ನಾನು ಅದರ ನರಕಯಾತನೆ ಅನುಭವಿಸಿದ್ದು ಏನೆಂದು ತಿಳಿದು ಕೊಂಡೆ ಎಂದ ಅವರು ನಂತರ 112 ವಾಹನದಲ್ಲಿ ನನ್ನನ್ನು ಮುರ್ಡೇಶ್ವರ ಠಾಣೆಗೆ ಕರೆದೊಯ್ಯಲಾಯಿತು. ಅಲ್ಲಿಂದ ನನ್ನನ್ನು ಬಿಟ್ಟು ಕಳುಹಿಸಿದ್ದು ನಂತರ ನಾನು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಹೊನ್ನಾವರದಲ್ಲಿ ಸಿಟಿ ಸ್ಕಾನಿಂಗ್ ಮಾಡಿಸಿದ್ದೇನೆ. ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಸಲಹೆ ಮಾಡಿದ್ದಾರೆ. ಹಲ್ಲೆಮಾಡಿದವರು ಯಾರೇ ಇದ್ದರೂ ಇಲಾಖೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನಾನು ಹೋರಾಟ ಮಾಡುವುದು ಅನಿವಾರ್ಯವಾಗುವುದು ಎಂದರು.
ಪತ್ರಿಕಾ ಗೋಷ್ಟಿಯಲ್ಲಿ ಸಾರದಹೊಳೆ ದೇವಸ್ಥಾನದ ಧರ್ಮದರ್ಶಿ ಸುಬ್ರಾಯ ನಾಯ್ಕ ಕಾಯ್ಕಿಣಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣಾ ನಾಯ್ಕ, ವಿಜಯಕುಮಾರ ನಾಯ್ಕ, ವೆಂಕಟೇಶ ನಾಯ್ಕ ಶಿರಾಲಿ, ಕುಮಾರ ನಾಯ್ಕ ಮುರ್ಡೇಶ್ವರ, ಈಶ್ವರ ನಾಯ್ಕ ಬೈಲೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
More Stories
ಭಟ್ಕಳದ ಅಂಜುಮಾನ್ ಇಂಜಿನಿಯರಿAಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ – ಡಾ. ದಿನೇಶ್ ಗಾಂವ್ಕರ್
ಭಟ್ಕಳದ ಏಐಟಿಎಮ್ ನಲ್ಲಿ ಕ್ಯೂ ಸ್ಪೈಡರ್ಸ್ ನಿಂದ ಕ್ಯಾಂಪಸ್ ಸಂದರ್ಶನ
ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಉದ್ಘಾಟಿಸಿದರು.