May 6, 2024

Bhavana Tv

Its Your Channel

ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಎ.ಸಿ.ಎಫ್ ಗುರುದತ್ತ ಶೇಟ್

ಕುಮಟಾ: ಅಳಿವಿನಂಚಿನಲ್ಲಿರುವ ವಿಶೇಷ ತಳಿಗಳ ಗಿಡಗಳನ್ನು ಹೆಚ್ಚೆಚ್ಚು ಬೆಳೆಸುವ ವಿಚಾರವಾಗಿ ಅರಣ್ಯ ಇಲಾಖೆ ಚಿಂತನೆ ನಡೆಸುತ್ತಿದೆ. ಅವುಗಳಿಗೆ ರಕ್ಷಣೆ ಸಿಗುವ ಜಾಗದಲ್ಲಿ ಜನರು ಸಸಿಗಳನ್ನು ನೆಟ್ಟು ಬೆಳೆಸಿದರೆ ನಮ್ಮ ಯೋಜನೆ ಉತ್ತಮ ರೀತಿಯಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ ಎಂದು ಕುಮಟಾ ಎ.ಸಿ.ಎಫ್. ಗುರುದತ್ತ ಶೇಟ್ ಹೇಳಿದರು.
ಅವರು ಭಾನುವಾರ ಕುಮಟಾ ತಾಲ್ಲೂಕಿನ ಹೊಸಾಡ ಗೋಶಾಲೆಯಲ್ಲಿ ಅಮೃತಧಾರಾ ಗೋಬ್ಯಾಂಕ್, ಕುಮಟಾ ಅರಣ್ಯ ಇಲಾಖೆ ಹಾಗೂ ಮೂರೂರು ಕಲ್ಲಬ್ಬೆ ವಲಯದ ಸಹಯೋಗದಲ್ಲಿ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಲ್ಲಿ ಇಲಾಖೆ ನೀಡುವ ಸಸಿಗಳನ್ನು ನೆಟ್ಟು ಆದಾಯ ಗಳಿಸುವ ಅವಕಾಶವೂ ಇದೆ. ರೈತ ಕುಟುಂಬಗಳಿಗೆ ನರೇಗಾ ಯೋಜನೆಯಡಿಯಲ್ಲಿ ಕೂಡ ವಿಶೇಷ ಉಪಯೋಗವಿದೆ. ಪ್ರಚಾರದ ಕೊರತೆಯಿಂದ ಜನರಿಗೆ ಇಂತಹ ಯೋಜನೆಗಳು ಸಂಪೂರ್ಣವಾಗಿ ತಲುಪಿಲ್ಲ ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಗೋಶಾಲೆ ನಿರ್ಮಾಣ ಮಾಡಿದರೆ ಗೋಹತ್ಯೆ ಹೆಚ್ಚಳವನ್ನು ತಡೆಗಟ್ಟಬಹುದು. ಆ ಭಾಗದಲ್ಲಿ ನೀರಿನ ಕೊರತೆ ಹಾಗೂ ಜಾನುವಾರುಗಳನ್ನು ನೋಡಿಕೊಳ್ಳಲು ಅಸಾಧ್ಯವಾದ ಕಾರಣ ಸಾಕಲಾಗದೆ ಮಾರಾಟ ಮಾಡುತ್ತಾರೆ. ಇದು ಗೋಹತ್ಯೆಗೆ ಪ್ರಚೋದನೆ ಸಿಗಲು ಕಾರಣವಾಗಿದೆ. ರಾಘವೇಶ್ವರ ಶ್ರೀಗಳು ಈಗಾಗಲೇ ಹಲವೆಡೆ ಗೋಶಾಲೆಗಳನ್ನು ನಿರ್ಮಿಸಿ ಗೋವುಗಳನ್ನು ರಕ್ಷಣೆ ಮಾಡುವ ಮಹತ್ ಕಾರ್ಯದಲ್ಲಿ ತೊಡಗಿದ್ದಾರೆ. ಹಾಗಾಗಿ ಉತ್ತರಕರ್ನಾಟಕ ಭಾಗದಲ್ಲೂ ಒಂದು ಗೋಶಾಲೆ ನಿರ್ಮಾಣವಾದರೆ ಗೋರಕ್ಷಣೆಗೆ ಅತ್ಯಂತ ಅನುಕೂಲವಾಗಬಹುದು ಎಂದರು.
ಕಾರ್ಯದರ್ಶಿ ಅರುಣ ಹೆಗಡೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಉಪಾಧ್ಯಕ್ಷ ಆರ್.ಜಿ.ಭಟ್ಟ ಸಾಂದರ್ಭಿಕ ಮಾತುಗಳನ್ನಾಡಿದರು. ರವಿ ಹೆಗಡೆ, ಸುಬ್ರಹ್ಮಣ್ಯ ಹೆಗಡೆ ಅಜ್ಜಿಗದ್ದೆ, ಡಾ.ಸುರೇಶ ಹೆಗಡೆ, ಗೋಶಾಲೆ ವ್ಯವಸ್ಥಾಪಕ ಗಣಪತಿ ಹೆಗಡೆ, ರಾಘವೇಂದ್ರ ಹೆಗಡೆ ಕಲ್ಲಬ್ಬೆ ಇದ್ದರು.

error: