

ಭಟ್ಕಳ: ಭಟ್ಕಳ: ಯುಟ್ಯೂಬ್ ಚಾನೆಲ್ ನಡೆಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಪರಿಚಿತರ ಗುಂಪೊOದು ಅಡ್ಡಗಟ್ಟಿ ಕಾಲು ಮತ್ತು ಕೈಗೆ ಗಂಭೀರ ಸ್ವರೂಪದ ಹಲ್ಲೆ ಮಾಡಿದ ಘಟನೆ ಗುರುವಾರ ಸಂಜೆ ಬೆಳಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಭಟ್ಕಳದಿಂದ ತನ್ನ ಕೆಲಸ ಮುಗಿಸಿ ಮನೆಗೆ ಬೈಕಿನಲ್ಲಿ ಬರುತ್ತಿದ್ದ ಪತ್ರಕರ್ತ ರಾಘು ಯಾನೆ ಅರ್ಜುನ್ ಮಲ್ಯ(೩೦)ನ ಮೇಲೆ ಹಿಂದಿನಿAದ ಮೂರು ಬೈಕುಗಳಲ್ಲಿ ಬಂದ ಮುಸುಕುಧಾರಿ ಗೂಂಡಾಗಳು ರಸ್ತೆಗೆ ತಳ್ಳಿ ಬೀಳಿಸಿ ಹಲ್ಲೆ ನಡೆಸಿದ್ದಾರೆ. ದುಷ್ಕರ್ಮಿಗಳು ಮರದ ರೀಪು ಹಾಗೂ ರಾಡ್ ಗಳಿಂದ ದಾಳಿ ನಡೆಸಿದ್ದು, ಅರ್ಜುನ್ ಅವರ ಎಡಗೈ ನಾಲ್ಕು ಕಡೆಗಳಲ್ಲಿ ಮೂಳೆ ಮುರಿತಗೊಂಡಿದೆ. ಎಡಗಾಲೂ ಮುರಿತವಾಗಿದೆ. ರಾಡ್ ನಿಂದ ತಲೆಗೆ ಹಲವಾರು ಬಾರಿ ದಾಳಿ ನಡೆಸಿದ್ದು, ಅರ್ಜುನ್ ಧರಿಸಿದ್ದ ಹೆಲ್ಮೆಟ್ ತಲೆಯಿಂದ ಜಾರದೆ ಇದ್ದ ಕಾರಣ ಹಾನಿಯಾಗಿಲ್ಲ.

ಬೆಳಕೆಯ ನಿವಾಸಿ ಅರ್ಜುನ್ ಯಾನೆ ರಾಘು ಕಳೆದ ಕೆಲವು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದರು.ಭಟ್ಕಳದ ಪುರಸಭೆ ಕಟ್ಟಡದಲ್ಲಿ ಕಚೇರಿ ಹೊಂದಿರುವ ಅರ್ಜುನ್ “ಕರಾವಳಿ ಸಮಾಚಾರ್” ಎನ್ನುವ ವೆಬ್ ಪೋರ್ಟಲ್ ಸಂಪಾದಕರಾಗಿದ್ದಾರೆ. ಕೆಲವು ದಿನಗಳ ಹಿಂದೆ ರಿಕ್ರಿಯೇಷನ್ ಕ್ಲಬ್ ನಿಂದಾಗುವ ಸಮಸ್ಯೆಗಳ ಬಗ್ಗೆ ನಿಷ್ಪಕ್ಷಪಾತ ವರದಿ ಮಾಡಿದ್ದರು.
ಕಳೆದ ಎರಡು ದಿನಗಳಿಂದ ಕೆಲವು ವ್ಯಕ್ತಿಗಳು ಅರ್ಜುನ್ನನ್ನು ಹಿಂಬಾಲಿಸುತ್ತಿರುವುದನ್ನು ಗಮನಿಸಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಗುರುವಾರ ಸಂಜೆ ಕೆಲಸ ಮುಗಿಸಿ ಬೈಕಿನಲ್ಲಿ ವಾಪಾಸಾಗುತ್ತಿದ್ದರು.ಮನೆಯಿಂದ ಸುಮಾರು ಮುನ್ನೂರು ಮೀಟರ್ ದೂರದಲ್ಲಿ ನಿರ್ಜನ ಪ್ರದೇಶದಲ್ಲಿ ಬರುತ್ತಿದ್ದ ವೇಳೆ, ಹಿಂದಿನಿAದ ಓವರ್ ಟೇಕ್ ಮಾಡಿ ಬಂದ್ ಬೈಕುಗಳಲ್ಲಿ ಹಿಂದೆ ಕುಳಿತವರ ಪೈಕಿ ಒಬ್ಬ ಬಲವಾಗಿ ಅರ್ಜುನ್ ಬೈಕನ್ನು ತಳ್ಳಿದ್ದಾನೆ. ನಿಯಂತ್ರಣ ಕಳೆದುಕೊಂಡ ಅರ್ಜುನ್ ಬೈಕ್ ಸಮೇತ ರಸ್ತೆಗೆ ಬಿದ್ದಾಗ ಆರು ಜನರೂ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಾರೆ. ಬೊಬ್ಬೆ ಕೇಳಿ ಸ್ಥಳೀಯರು ಓಡಿ ಬಂದಾಗ ರಾಡ್, ರೀಪುಗಳನ್ನು ಅಲ್ಲಿಯೇ ಬಿಟ್ಟು ಬೈಕಿನಲ್ಲಿ ಪರಾರಿಯಾಗಿದ್ದಾರೆ.
ಹಲ್ಲೆಗೊಳಗಾದ ಅರ್ಜುನನ್ನು ಸ್ಥಳೀಯರು ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿನ ಎಲುಬು ಮತ್ತು ಮೂಳೆ ತಜ್ಞ ದಿನೇಶ್ ಕುಮಾರ್ ಶುಕ್ರವಾರ ಶಸ್ತ್ರಚಿಕಿತ್ಸೆ ನಡೆಸುವುದಾಗಿ ತಿಳಿಸಿದ್ದಾರೆ.
ಭಟ್ಕಳ ಗ್ರಾಮೀಣ ಠಾಣೆ ಎಸೈ ಭರತ್ ಹಾಗೂ ಸಿಬ್ಬಂದಿ ಮಲ್ಲಿಕಾರ್ಜುನ್ ನಾಯ್ಕ್ ಆಸ್ಪತ್ರೆಗೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಖಂಡನೆ: ಅರ್ಜುನ ಮಲ್ಯ ಅವರ ಮೇಲೆ ಅಪರಿಚಿತ ದುಷ್ಕರ್ಮಿಗಳು ನಡೆಸಿದ ಹಲ್ಲೆಯನ್ನು ಭಟ್ಕಳ, ಹಾಗೂ ಉತ್ತರ ಕನ್ನಡ ಮತ್ತು ಕುಂದಾಪುರದ ಪತ್ರಕರ್ತರು ತೀವ್ರವಾಗಿ ಖಂಡಿಸಿದ್ದಾರೆ. ಪತ್ರಕರ್ತರು ತಮ್ಮ ಕರ್ತವ್ಯವನ್ನು ನಿರ್ಭೀತಿಯಿಂದ ಮಾಡಲು ಅವಕಾಶ ಸಿಗಬೇಕು. ಹೀಗೆ ದುಷ್ಕರ್ಮಿಗಳು ಕಾನೂನನ್ನು ಪದೇ ಪದೇ ಕೈಗೆ ತೆಗೆದು ಕೊಂಡು ಹಲ್ಲೆ ನಡೆಸಿದರೆ ಕರ್ತವ್ಯ ನಿರ್ವಹಿಸುವುದು ಪತ್ರಕರ್ತರಿಗೆ ಕಷ್ಟವಾಗುತ್ತದೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳು ಗಮನಹರಿಸಿ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ