April 20, 2024

Bhavana Tv

Its Your Channel

ಚಿಕ್ಕ ಮಕ್ಕಳನ್ನು ಶಿಸ್ತುಸಂಯಮದ ದೇಶಪ್ರೇಮಿಗಳನ್ನಾಗಿ ತಿದ್ದುವ ಕೆಲಸವನ್ನು ಸ್ಕೌಟ್ಸ್-ಗೈಡ್ಸ್ ಮಾಡುತ್ತಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಕುಮಟಾ :ಅವರು ಡಯಟ್ ಸಭಾಭವನದಲ್ಲಿ ಶುಕ್ರವಾರ ಸ್ಕೌಟ್ಸ್-ಗೈಡ್ಸ್ ಜಿಲ್ಲಾ ರ‍್ಯಾಲಿ ಉದ್ಘಾಟಿಸಿ, ಸಮವಸ್ತ್ರ ವಿತರಿಸಿ ಮಾತನಾಡಿದರು. ದೇಶ ಅಮೇರಿಕಾ, ಜಪಾನ್, ರಷ್ಯಾ ಮುಂತಾದ ಮುಂದುವರಿದ ದೇಶಗಳಂತೆ ಸೂಪರ್ ಪವರ್ ಆಗುವಲ್ಲಿ ಯುವ ಜನತೆಯ ಪಾತ್ರ ಮಹತ್ವದ್ದಿರುತ್ತದೆ. ಆದರೆ ಇಲ್ಲಿನ ಪ್ರತಿಭೆಗಳು ಪಲಾಯನವಾಗಬಾರದು. ಇಲ್ಲಿನ ಪ್ರತಿಭೆಗಳು, ಯುವಶಕ್ತಿಯ ಸದ್ಬಳಕೆ ದೇಶಕಟ್ಟುವ ಕಾರ್ಯಕ್ಕೆ ಬದ್ಧವಾಗಬೇಕು. ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳು ಭವಿಷ್ಯದಲ್ಲಿ ದೇಶಕ್ಕಾಗಿ ದುಡಿಯಿರಿ. ಸ್ಕೌಟ್ಸ್-ಗೈಡ್ಸ್ಗೆ ಶಿಕ್ಷಣ ಇಲಾಖೆ ಹಾಗೂ ಸರ್ಕಾರದ ಸಹಕಾರ ಅತ್ಯುತ್ತಮವಾಗಿದೆ ಎಂದರು.
ಮುಖ್ಯ ಅತಿಥಿ ಡಾ. ಜಿ.ಜಿ.ಹೆಗಡೆ ಮಾತನಾಡಿ, ಜೀವನದ ನೆಮ್ಮದಿಗಾಗಿ ನಿಯಮಪಾಲನೆ ಬೇಕು. ಬದುಕಿನಲ್ಲಿ ಜೀವ ಶುದ್ಧತೆ ಬೇಕು. ಸ್ಕೌಟ್ಸ್-ಗೈಡ್ಸ್ ಪ್ರತಿಯೊಂದು ಶಾಲೆಯಲ್ಲಿ ನಡೆಯಬೇಕು. ಮಕ್ಕಳು ಚಾರಿತ್ರ‍್ಯವಂತರಾಗಿ ಚಟ ಹಾಗೂ ಮೊಬಲ್ ಅತಿಬಳಕೆಯಿಂದ ದೂರವಿರಬೇಕು. ರಾಷ್ಟ್ರಪ್ರೇಮವೊಂದೇ ಈ ದೇಶಕಟ್ಟುವ ಸಾಧನ ಎಂದರು.

ಜಿಪಂ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ ಮಾತನಾಡಿ, ಸ್ಕೌಟ್ಸ್-ಗೈಡ್ಸ್ನಲ್ಲಿ ಜೀವನ ಪರ್ಯಂತ ಕಾಯಾ ವಾಚಾ ಮನಸಾ ಸೇವೆಯ ಧ್ಯೇಯ ತುಂಬಿದೆ. ಇಲ್ಲಿನ ಪ್ರೇರಣೆ ಪಡೆದ ಮಕ್ಕಳು ದೇಶದ ಸತ್ಪ್ರಜೆಗಳಾಗಬಲ್ಲರು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸ್ಕೌಟ್ಸ್-ಗೈಡ್ಸ್ ಪ್ರಮಾಣಪತ್ರ ಹೊಂದಿದವರಿಗೆ ೫% ಮೀಸಲು ಇರುವುದು ಅವಕಾಶದಾಯಕ ಎಂದರು.

ಡಾ.ಜಿ.ಜಿ.ಸಭಾಹಿತ ಅಧ್ಯಕ್ಷತೆ ವಹಿಸಿದ್ದರು.ಡಯಟ್ ಪ್ರಾಚಾರ್ಯ ಈಶ್ವರ ನಾಯ್ಕ, ಡಿಡಿಪಿಐ ಹರೀಶ ಗಾಂವಕರ, ಬಿಇಓ ಆರ್.ಎಲ್.ಭಟ್, ಜಿಲ್ಲಾ ನೋಡಲ್ ಅಧಿಕಾರಿ ನಾಗರಾಜ ನಾಯಕ, ಸ್ಕೌಟ್ಸ್-ಗೈಡ್ಸ್ನ ಪದಾಧಿಕಾರಿಗಳಾದ ರಾಜು ಹೆಬ್ಬಾರ, ಶೋಭಾ ಕುಲಕರ್ಣಿ, ಕೆ.ಪಿ.ಭಂಡಾರಿ, ಬಿ.ಡಿ.ಫರ್ನಾಂಡಿಸ್, ಕರಿಸಿದ್ದಪ್ಪ ಟಿ., ಹೇಮಂತಕುಮಾರ ಗಾಂವಕರ, ಪಲ್ಲವಿ ಮಡಿವಾಳ, ಜಿ.ಆರ್.ನಾಯ್ಕ, ವಿವೇಕ ಭಂಡಾರಿ, ಎಚ್.ವಿ.ಗೌಡ ಇನ್ನಿತರರು ಉಪಸ್ಥಿತರಿದ್ದರು.
ಡಾಕ್ಟರೇಟ್ ಗೌರವ ಪಡೆದ ಶಿಕ್ಷಕ, ನಿರೂಪಕ ರವೀಂದ್ರ ಭಟ್ಟ ಸೂರಿ ಅವರಿಗೆ ಸನ್ಮಾನಿಸಲಾಯಿತು.
ಗಾಯತ್ರಿ ಶಿರೋಡ್ಕರ್ ಪ್ರಾರ್ಥಿಸಿದರು. ತಾಲೂಕು ಘಟಕದ ಅಧ್ಯಕ್ಷ ಸುಧಾ ಗೌಡ ಸ್ವಾಗತಿಸಿದರು. ಬಿ.ಎಂ.ಭಟ್ಟ ಪ್ರಾಸ್ತಾವಿಕ ಮಾತನಾಡಿದರು. ಮಧ್ಯಾಹ್ನ ಭಾರತ್ ಸ್ಕೌಟ್ಸ್-ಗೈಡ್ಸ್ನ ಕಬ್ಸ್, ಬುಲ್ ಬುಲ್ಸ್, ರೇಂಜರ್ಸ್, ರೋವರ್ಸ್ಗಳ ರ‍್ಯಾಲಿ ಪಟ್ಟಣದ ಬೀದಿಗಳಲ್ಲಿ ಸಂಚರಿಸಿ ಜನಜಾಗೃತಿ ಮೂಡಿಸಿದರು.

error: