May 6, 2024

Bhavana Tv

Its Your Channel

ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಭಾಗು ಕೊಳಾಪ್ಟೆಯವರನ್ನು ಸನ್ಮಾನಿಸಿದ ಕನ್ನಡ ಸಾಹಿತ್ಯ ಪರಿಷತ್ತು

ಹಳಿಯಾಳ: ಪ್ರಸಕ್ತ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ಹಳಿಯಾಳದ ಹಿರಿಯ ಜನಪದ ಕಲಾವಿದ ದನಗರ ಗೌಳಿ ಸಮುದಾಯದ ಹಿರಿಯ ಮುಖಂಡ ಭಾಗು ಧಾಕು ಕೊಳಾಪ್ಟೆಯವರನ್ನು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅವರ ಮನೆಗೆ ಭೇಟಿ ನೀಡಿ ಸನ್ಮಾನಿಸಿ ಗೌರವಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ. ಎನ್. ವಾಸರೆಯವರು ಕರ್ನಾಟಕ ಜನಪದ ಅಕಾಡೆಮಿಯವರು ಬುಡಕಟ್ಟು ದನಗರ ಗೌಳಿ ಸಮುದಾಯದ ಹಿರಿಯ ಪ್ರತಿಭೆಯನ್ನು ಹುಡುಕಿ ಪ್ರಶಸ್ತಿ ನೀಡುವ ಮೂಲಕ ನೆಲಮೂಲ ಸಂಸ್ಕೃತಿಗೆ ಗೌರವವನ್ನು ನೀಡುವ ಕೆಲಸವನ್ನು ಮಾಡಿದೆ. ನಿಜಕ್ಕೂ ಇದು ಸ್ವಾಗತಾರ್ಹ ಕಾರ್ಯವಾಗಿದೆ. ಇಂದು ಬುಡಕಟ್ಟು ಸಮುದಾಯದಲ್ಲಿ ಅತ್ಯಂತ ವಿಶಿಷ್ಟವಾದ ಹಾಗೂ ಅಷ್ಟೆ ಶ್ರೀಮಂತವಾದ ಕಲೆಗಳುದ್ದು, ಆ ಕಲೆಗಳನ್ನು ಉಳಿಸುವ ಹಾಗೂ ಬೆಳೆಸುವ ಕೆಲಸಗಳಾಗಬೇಕಿದೆ. ಭಾಗು ಕೊಳಾಪ್ಟೆಯವರು ತಮ್ಮ ಜನಪದ ಹಾಡುಗಳ ಮೂಲಕ ಹಾಗೂ ಜನಪದ ವಾದ್ಯಗಳ ಮೂಲಕ ಗಮನ ಸೆಳೆದವರು. ಅವರಲ್ಲಿರುವ ಜನಪದ ಕಲೆಗಳನ್ನು ಮುಂದಿನ ತಲೆಮಾರಿಗೆ ದಾಟಿಸುವ ನಂತರ ಕೆಲಸ ಆಗಬೇಕಾಗಿದೆ ಎಂದರು.

ಸಾಹಿತಿಗಳು, ಪ್ರಾಧ್ಯಾಪಕರು ಆದ ಡಾ. ಆರ್. ಜಿ. ಹೆಗಡೆಯವರು ಮಾತನಾಡಿ ಶ್ರಮಜೀವಿಗಳಾಗಿರುವ
ದನಗರ ಗೌಳಿ ಸಮುದಾಯದ ಕಲಾವಿದ ಭಾಗು ಕೊಳಾಪ್ಟೆಯವರಿಗೆ ಜನಪದ ಅಕಾಡೆಮಿಯ ಪ್ರಶಸ್ತಿ ಬಂದಿರುವುದು ನಮಗೆಲ್ಲರಿಗೂ ಹೆಮ್ಮೆ ತರುವಂಥದ್ದಾಗಿದೆ. ಇದು ಅವರ ಸುದೀರ್ಘ ಜನಪದ ಸೇವೆಗೆ ಸಂದ ಗೌರವವಾಗಿದೆ. ಅವರಿಗೆ ಇನ್ನೂ ಹೆಚ್ಚಿನ ಗೌರವಗಳು ದೊರೆಯುವಂತಾಗಲಿ ಎಂದು ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಭಾಗು ಕೊಳಾಪ್ಟೆಯವರು ಕನ್ನಡ ಸಾಹಿತ್ಯ ಪರಿಷತ್ತಿನವರು ತಮ್ಮ ಮನೆಯವರೆಗೂ ಬಂದು ಸನ್ಮಾನಿಸಿ ಗೌರವಿಸಿರುವುದು ನನಗೆ ಮತ್ತೊಂದು ಪ್ರಶಸ್ತಿ ಬಂದಷ್ಟು ಖುಷಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯರಾದ ಯು.ಎಸ್. ಪಾಟೀಲ, ಹಿರಿಯ ಸಾಹಿತಿ ಮುರ್ತುಜಾ ಹುಸೇನ, ಆನೆಹೊಸೂರ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರುಗಳಾದ ಕೀರ್ತಿ ಗಾಂವಕರ್, ಪ್ರಾಥಮುಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ನಾಯಕ, ಭಾವಿಕೇರಿ, ಯಲ್ಲಪ್ಪ ಶೇರಖಾನೆ ಮುಂತಾದವರಿದ್ದರು. ಇದೇ ಸಂದರ್ಭದಲ್ಲಿ ಕನ್ನಡ

ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಭಾಗು ಕೊಳಾಪ್ಟೆ ಹಾಗೂ ಅವರ ಕುಟುಂಬದವರಿಗೆ ಸಿಹಿ ತಿನಿಸಿ ಸಂಭ್ರಮಿಸಿದರು.

error: