ಭಟ್ಕಳ: ಜುಲೈ ೨ರಂದು ಬೆಳಗಿನಜಾವ ಬೆಂಕಿ ಹೊತ್ತಿಕೊಂಡು ಭಟ್ಕಳ ನ್ಯಾಯಾಲಯದ ಕಟ್ಟಡದ ಒಂದು ಭಾಗ ಸುಟ್ಟು ಹೋಗಿರುವುದನ್ನು ಕಾರವಾರದ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ರಾಜಶೇಖರ ಅವರು ಪರಿಶೀಲಿಸಿದರು.
ಪರಿಶೀಲನೆಯ ವೇಳೆಯಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಂ.ಜಿ.ನಾಯ್ಕ ಅವರನ್ನು ಸ್ಥಳಕ್ಕೆ ಕರೆಯಿಸಿಕೊಂಡು ಹಾನಿಯಾದ ಕಟ್ಟಡದ ಭಾಗವನ್ನು ಅತಿ ಶೀಘ್ರದಲ್ಲಿ ರಿಪೇರಿ ಮಾಡಿ ಯಥಾ ಸ್ಥಿತಿಗೆ ತರುವಂತೆ ತಿಳಿಸಿದರು. ಕನಿಷ್ಟ ಒಂದು ವಾರದೊಳಗಾಗಿ ಕಟ್ಟಡ ಮೇಲ್ಚಾವಣಿಯು ರಿಪೇರಿಯಾಗಿ ಕಕ್ಷಿದಾರರಿಗೆ ಹಾಗೂ ವಕೀಲರಿಗೆ ಯಾವುದೇ ರೀತಿಯ ತೊಂದರೆಯಾಗದAತೆ ನೋಡಿಕೊಳ್ಳಬೇಕು ಎಂದೂ ಅವರು ಸೂಚಿಸಿದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಇಲೆಕ್ಟ್ರಿಕಲ್ ಇಂಜಿನಿಯರ್ ಪಂಡಿತ್ ಅವರಿಗೆ ಅಗತ್ಯದ ಇಲೆಕ್ಟ್ರಿಕ್ ವಯರಿಂಗ ಹಾಗೂ ಕಂಪ್ಯೂಟರ್ಗೆ ಅಗತ್ಯವಿರುವ ಲಾನ್ ವ್ಯವಸ್ಥೆಯನ್ನು ಮರುಸ್ಥಾಪಿಸುವಂತೆ ಸೂಚಿಸಿದ ಜಿಲ್ಲಾ ನ್ಯಾಯಾಧೀಶರು ಎಲ್ಲಾ ಕೆಲಸಗಳನ್ನು ಕೂಡಾ ಶೀಘ್ರವಾಗಿ ಮಾಡಬೇಕು ಎಂದೂ ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಜಗದೀಶ ಶಿವಪೂಜಿ, ಡಿ.ವೈ.ಎಸ್.ಪಿ. ಕೆ.ಯು. ಬೆಳ್ಳಿಯಪ್ಪ, ಸಬ್ ಇನ್ಸಪೆಕ್ಟರ್ ಸುಮಾ ಆಚಾರ್ಯ ಮುಂತಾದವರು ಇದ್ದರು.
ನ್ಯಾಯಾಲಯದ ಸಂಕೀರ್ಣಕ್ಕೆ ಭೇಟಿ ನೀಡಿದ ಜಿಲ್ಲಾ ನ್ಯಾಯಾಧೀಶ ರಾಜಶೇಖರ ಅವರು ಭಟ್ಕಳ ವೃತ್ತ ನಿರೀಕ್ಷಕ ದಿವಾಕರ ಅವರಿಗೆ ಘಟನೆಯ ಕುರಿತು ಸೂಕ್ತ ತನಿಖೆಯನ್ನು ನಡೆಸಿ ಘಟನೆಯ ಹಿಂದಿರುವ ಕಾರಣವನ್ನು ತಿಳಿಸುವಂತೆ ಸೂಚಿಸಿದರು. ಬೆಂಕಿ ಹೊತ್ತಿಕೊಂಡು ಉರಿಯಲು ಕಾರಣ ಏನು, ಘಟನೆಯ ಸೂಕ್ತ ತನಿಖೆಯನ್ನು ನಡೆಸಿ ವರದಿಯನ್ನು ನೀಡುವಂತೆಯೂ ತಿಳಿಸಿದರು.
ಹೊಸದಾಗಿ ನ್ಯಾಯಾಲಯ ಸಂಕೀರ್ಣ ಕಟ್ಟಲು ಈಗಾಗಲೇ ಅಂದಾಜು ಪಟ್ಟಿಯನ್ನು ತಯಾರಿಸಿ ಕಳುಹಿಸಲಾಗಿದ್ದು ನ್ಯಾಯಾಲಯದ ಕಟ್ಟಡ ವಿನ್ಯಾಸ, ಕಟ್ಟಡದ ನಿರ್ಮಾಣ ಶೀಘ್ರ ಆಗಬೇಕು ಎಂದು ವಕೀಲರ ಸಂಘದ ವತಿಯಿಂದ ಮನವಿ ಮಾಡಲಾಯಿತು. ಇದಕ್ಕೆ ಉತ್ತರಿಸಿದ ನ್ಯಾಯಾಧೀಶರು ಹೊಸ ನ್ಯಾಯಾಲಯ ಸಂಕೀರ್ಣದ ಕುರಿತು ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಭಟ್ಕಳ ವಕೀಲರ ಸಂಘದ ಅಧ್ಯಕ್ಷ ಎಂ.ಎಲ್. ನಾಯ್ಕ, ಹಿರಿಯ ನ್ಯಾಯವಾದಿ ಮಾಜಿ ಶಾಸಕ ಜೆ.ಡಿ.ನಾಯ್ಕ, ನೋಟರಿ ಆರ್. ಆರ್. ಶ್ರೇಷ್ಟಿ, ಕೆ.ಎಸ್.ರೈ, ವಕೀಲರ ಸಂಘದ ಕಾರ್ಯದರ್ಶಿ ಜೆ.ಡಿ.ಭಟ್ಟ, ಹಿರಿಯ ಹಾಗೂ ಕಿರಿಯ ವಕೀಲರುಗಳು, ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.
More Stories
ಹೊಳೆಯಲ್ಲಿ ಆಕಸ್ಮಿಕವಾಗಿ ಮುಳುಗಿ ಇಬ್ಬರ ಸಾವು.
ಮೊಬೈಲ್ ಹ್ಯಾಕ್ ಮಾಡಿ ಖಾತೆಯಲ್ಲಿದ್ದ ಲಕ್ಷಾಂತರ ಹಣ ಕ್ಷಣಾರ್ಧದಲ್ಲಿ ಮಾಯ,
ಅಕ್ಷಯ ತೃತೀಯ ದಿನದಂದು ಮನೆಗೆ ನುಗಿದ ಕಳ್ಳರು: