
ಭಟ್ಕಳ: ಭಟ್ಕಳ ತಾಲೂಕಾ ಹವ್ಯಕ ಬ್ರಾಹ್ಮಣ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪ್ರತಿಭಾ ಪುರಸ್ಕಾರ, ಸನ್ಮಾನ, ವಾರ್ಷಿಕ ಕಾರ್ಯಕ್ರಮ ಕಡವಿನಕಟ್ಟಾ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವಾರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಉಡುಪಿಯ ಅಧೀಕ್ಷಕ ಇಂಜಿನಿಯರ್ ನರಸಿಂಹ ಪಂಡಿತ್ ಅವರು ಹಿಂದೆ ಎಷ್ಟೇ ಪ್ರತಿಭೆ ಹೊಂದಿದ್ದರೂ ಸಹ ಸಮಾಜದಲ್ಲಿ ಗುರುತಿಸುವಿಕೆ ಕಡಿಮೆ ಇತ್ತು, ಆದರೆ ಇಂದು ಪ್ರತಿಭಾವಂತರನ್ನು ಗುರುತಿಸುವ ಕಾರ್ಯ ಎಲ್ಲೆಡೆಯಿಂದ ಆಗುತ್ತಿದೆ. ಪ್ರತಿಭಾವಂತರನ್ನು ಗುರುತಿಸುವ ಅವಶ್ಯಕತೆ ಕೂಡಾ ಇದೆ ಎಂದರು.
ಇoದು ನಾವು ನಾವಿರುವಷ್ಟನ್ನೇ ತಿಳಿದು ಕೊಂಡಿದ್ದೇವೆ, ಆದರೆ ಪ್ರಪಂಚ ದೊಡ್ಡದಿದ್ದು ಮಕ್ಕಳಿಗೆ ಅವಕಾಶಗಳು ಸಾಕಷ್ಟಿದೆ. ಮಕ್ಕಳಿಗೆ ಯಾವುದೇ ಪರಿಧಿಯನ್ನು ಹಾಕದೇ ಅವರಷ್ಟಕ್ಕೆ ಬಿಟ್ಟು ಬಿಡಬೇಕು, ಪಾಲಕರು ಕೇವಲ ಅವರ ಚಲನವಲನಗಳನ್ನಷ್ಟೇ ನೋಡುತ್ತಾ ಸಮಯ ಸಂದರ್ಭದಲ್ಲಿ ಅವರಿಗೆ ತಿಳಿಹೇಳುತ್ತಿರಬೇಕು ಎಂದರು. ವಿದ್ಯಾರ್ಥಿಗಳು ತಮ್ಮ ವಿದ್ಯೆಯ ಜೊತೆಗೆ ಇತರೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದೂ ಅವರು ಹೇಳಿದರು. ಸಂಘದ ಅಧ್ಯಕ್ಷ ಎಂ. ವಿ. ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ತೆರಿಗೆ ಸಲಹೆಗಾರ ಕೃಷ್ಣಾನಂದ ಯಾಜಿ ಮಾತನಾಡಿ ವಿದ್ಯಾರ್ಥಿಗಳು ಕೇವಲ ಓದಿನ ಕಡೆಗೆ ಮಾತ್ರವಲ್ಲ, ವ್ಯಾವಹಾರಿಕ ಬುದ್ಧಿಮತ್ತೆ ಕಡೆಗೆ ಗಮನ ಹರಿಸಬೇಕು ಎಂದು ಹೇಳಿದ ಅವರು ಪಾಲಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣವನ್ನು ಕಲ್ಪಿಸಬೇಕು ಎಂದೂ ಕರೆ ನೀಡಿದರು.
ಮಕ್ಕಳನ್ನು ಮಾರ್ಕ್ಸ ಎನ್ನುವ ಮಾನದಂಡದಿAದ ಅಳೆಯದೇ ಅವರನ್ನು ಇತರೇ ಚಟುವಟಿಕೆಯಲ್ಲಿಯೂ ತೊಡಗಿಸಿಕೊಳ್ಳುವಂತೆ, ಅನಗತ್ಯ ಒತ್ತಡಕ್ಕೆ ಒಳಗಾಗದಂತೆ ನೋಡಿಕೊಳ್ಳೀ ಎಂದೂ ಕರೆ ನೀಡಿದರು. ಇನ್ನೋರ್ವ ಮುಖ್ಯ ಅತಿಥಿ ಕುಮಟಾದ ತಹಸೀಲ್ದಾರ್ ಗ್ರೇಡ್-೨ ಆಶೋಕ ಎನ್. ಭಟ್ಟ ಮಾತನಾಡಿ ಪ್ರತಿಯೋರ್ವರೂ ಕೂಡಾ ಬದುಕಿನಲ್ಲಿ ಒಂದು ಚೌಕಟ್ಟನ್ನು ಹಾಕಿಕೊಂಡು ಬದುಕುತ್ತೇವೆ, ಆದರೆ ಚೌಕಟ್ಟಿನಿಂದ ಹೊರ ಬಂದು ಯೋಚನೆ ಮಾಡಿದಾಗ ಮಾತ್ರ ಯಶಸ್ಸು ಪಡೆಯುವುದಕ್ಕೆ ಸಾಧ್ಯ. ಸಹಾಯ ಮಾಡುವಾಗ ಅಗತ್ಯವಿದ್ದವರನ್ನೇ ಗುರುತಿಸಿ ಸಹಾಯ ಮಾಡಬೇಕು ಎಂದು ಕರೆ ನೀಡಿದ ಅವರು ಸಮಾಜಕ್ಕೊಂದು ಶಕ್ತಿಯಾಗಿ ನಮ್ಮ ಬದುಕನ್ನು ರೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಭಟ್ಕಳ ಅರ್ಬನ್ ಬ್ಯಾಂಕ್ ನಿವೃತ್ತ ಪ್ರಧಾನ ವ್ಯವಸ್ಥಾಪಕ ಶಂಭು ನಾರಾಯಣ ಹೆಗಡೆ ಮಾತನಾಡಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಸುಧಾ ಭಟ್ಟ, ಜಿ. ಟಿ. ಭಟ್ಟ, ಆತಿಥ್ಯ ವಹಿಸಿದ್ದ ಪ್ರಕಾಶ ಎನ್. ಭಟ್ಟ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ.ಯಲ್ಲಿ ಉತ್ತಮ ಸಾಧನೆ ಮಾಡಿದ, ವೈದ್ಯಕೀಯ ಕೋರ್ಸುಗಳನ್ನು ಯಶಸ್ವೀಯಾಗಿ ಮುಗಿಸಿದ ವಿದ್ಯಾರ್ಥಿಗಳನ್ನು, ನೌಕರಿಯಲ್ಲಿ ಭಡ್ತಿ ಹೊಂದಿದ ಹಾಗೂ ನಿವೃತ್ತರಾದವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಉದಯೋನ್ಮುಖ ಲೇಖಕಿ ಗೀತಾ ಎಸ್. ಭಟ್ಟ ಶಿರಾಲಿ ಅವರು ರಚಿಸಿದ ಸಪ್ನಗೀತ ಹಾಗೂ ಅಮೃತದ ಕೊಕ್ಕರೆ ಕೃತಿಗಳನ್ನು ವೇದಿಕೆಯಲ್ಲಿದ್ದ ಗಣ್ಯರು ಬಿಡುಗಡೆ ಗೊಳಿಸಿದರು. ಗಣೇಶ ಯಾಜಿ ಕೃತಿಗಳನ್ನು ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಮೇಧಾ ಕೆ.ಭಟ್ಟ ಪ್ರಾರ್ಥಿಸಿದರು. ಜಿ.ಟಿ. ಭಟ್ಟ ಸ್ವಾಗತಿಸಿದರು. ಗಜಾನನ ಯಾಜಿ ವಂದಿಸಿದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ