ಕಾರವಾರ: ಪತ್ರಕರ್ತರು ಸಮಾಜಕ್ಕೆ ಅಂಟಿದ ರೋಗಗಳಿಗೆ ಚಿಕಿತ್ಸೆ ಕೊಡುವ ವೈದ್ಯರಿದ್ದಂತೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವಿಶ್ಲೇಷಿಸಿದರು.
ಅವರು ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ಕಾರವಾರದಿಂದ ಸಿದ್ದರ ಶ್ರೀ ನರಸಿಂಹ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ಕೆಲ ಕೆಡುಕುಗಳ ಮೂಲ ಅರಿತು ಜನರಿಗೆ ನೋವೂ ಆಗದಂತೆ, ಕಾಯಿಲೆಯೂ ಗುಣವಾಗುವಂತೆ ಚುಚ್ಚುಮದ್ದು ನೀಡುವ ಸವಾಲಿನ ಜವಾಬ್ದಾರಿ ಮಾಧ್ಯಮಗಳ ಮೇಲಿದೆ. ಉತ್ತರ ಕನ್ನಡ ಜಿಲ್ಲೆಯ ಮಾಧ್ಯಮಗಳು ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತಿವೆ ಎಂದರು.
ಅತಿಥಿಯಾಗಿದ್ದ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ., ಕೃಷಿ ವಲಯ ತುಂಬಾ ಶ್ರಮ ಬೇಡುವಂಥದ್ದು, ಅವರ ಬದುಕನ್ನು ಮೇಲೆತ್ತುವ, ಪ್ರೇರಣೆ ನೀಡುವ ನಿಟ್ಟಿನಲ್ಲಿ ಕಾರವಾರದ ಪತ್ರಕರ್ತರು ಹಮ್ಮಿಕೊಳ್ಳುತ್ತಿರುವ ಕಾರ್ಯ ಶ್ಲಾಘನೀಯ ಎಂದರು. ಉಪವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ ಮಾತನಾಡಿ, ಸತ್ಯಮೇವ ಜಯತೇ ಎಂಬ ಘೋಷ ವಾಕ್ಯವನ್ನು ಪತ್ರಕರ್ತರು ಜಾರಿಗೆ ತರುತ್ತಿದ್ದಾರೆ ಎಂದರು.
ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದಿAದ ನೀಡುವ ಟ್ಯಾಗೋರ್ ಪ್ರಶಸ್ತಿಯನ್ನು ವಿಜಯ ಕರ್ನಾಟಕ ಶಿವಮೊಗ್ಗ ಆವೃತ್ತಿಯ ಮುಖ್ಯಸ್ಥ ವಿವೇಕ ಮಹಾಲೆ, ದಿಗ್ವಿಜಯ ನ್ಯೂಸ್ ಜಿಲ್ಲಾ ವರದಿಗಾರ ಶೇಷಗಿರಿ ಮುಂಡಳ್ಳಿ, ಪ್ರಜಾವಾಣಿ ಜಿಲ್ಲಾ ವರದಿಗಾರ ಸದಾಶಿವ ಎಂ.ಎಸ್.ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿವೇಕ ಮಹಾಲೆ, ಪ್ರಾಮಾಣಿಕತೆ, ಪ್ರಯತ್ನ ಶೀಲತೆ ಇದ್ದಲ್ಲಿ ಉನ್ನತ ಸ್ಥಾನಕ್ಕೇರಬಹುದು. ಸ್ಥಾನ ಸಿಕ್ಕಾಗ ಬೀಗಬಾರದು. ಇಂದು ಪತ್ರಕರ್ತರಲ್ಲೂ ವರ್ಕ ಪ್ರಾಮ್ ಹೋಂ ಸಂಸ್ಕೃತಿ ಹೆಚ್ಚುತ್ತಿದೆ. ಇದು ವಿಷಯದ ಗಂಭೀರತೆ ಹಾಗೂ ಅದರ ಆಳ-ಅಗಲವನ್ನು ಜನರಿಗೆ ಅರ್ಥ ಮಾಡಿಸುವಲ್ಲಿ ವಿಫಲವಾಗುತ್ತಿದೆ ಎಂದರು.
ಹಲವು ಸವಾಲುಗಳ ನಡುವೆ ೫೦ ಎಕರೆ ಭತ್ತದ ಕೃಷಿ ಮಾಡಿ ಸಾಧನೆ ಮಾಡಿದ ಹಳಗಾದ ಧೋಲ ಗ್ರಾಮದ ಪ್ರಗತಿಪರ ರೈತ ಯಶವಂತ ಉಂಡೇಕರ್ ಹಾಗೂ ಸಿದ್ದರ ಗ್ರಾಮದ ಹಿರಿಯ ಕೃಷಿಕ, ನಿವೃತ್ತ ಶಿಕ್ಷಕ ಅನಂತ ಶಾಬು ನಾಯ್ಕ ದಂಪತಿಯನ್ನು ಸಂಘದಿAದ ಸನ್ಮಾನಿಸಲಾಯಿತು. ತಹಸೀಲ್ದಾರ್ ನಿಶ್ಚಲ ನರೋನಾ, ವೈಲವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ ನಾಯ್ಕ, ಉಪಾಧ್ಯಕ್ಷೆ ಮೇಘಾ ಗಾಂವಕರ್, ದೇವಸ್ಥಾನ ಸಮಿತಿ ಮುಕ್ತೇಸರ ದತ್ತಾತ್ರೆಯ ಗಾಂವಕರ್,ಅರ್ಚಕ ವಿಠ್ಠಲ ಜೋಷಿ, ದಿಲೀಪ ದತ್ತಾ ರಾಣೆ, ಸಾಯಿನಾಥ ನಾಯ್ಕ, ಸುರೇಶ ಗುರವ್, ದೇವಿದಾಸ ನಾಯ್ಕ, ಗೋಪಾಳಿ ಕೊಳಂಬಕರ್, ಬಾಬು ನಾಯ್ಕ, ಸುಭಾಷ ರಾಣೆ, ಮಹಾಬಲೇಶ್ವರ ನಾಯ್ಕ, ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ದರ್ಶನ ನಾಯ್ಕ, ಅರವಿಂದ ಗುನಗಿ ವೇದಿಕೆಯಲ್ಲಿದ್ದರು. ಸಂಘದ ಅಧ್ಯಕ್ಷ ಟಿ.ಬಿ.ಹರಿಕಾಂತ ಸ್ವಾಗತಿಸಿದರು. ದೇವರಾಜ ನಾಯ್ಕ ಅತಿಥಿ ಪರಿಚಯ ಮಾಡಿದರು. ಸಂದೀಪ ಸಾಗರ ಕಾರ್ಯಕ್ರಮ ನಿರೂಪಿಸಿದರು. ಸುಭಾಶ್ಚಂದ್ರ ಎನ್.ಎಸ್.ವಂದಿಸಿದರು.ದೇವಸ್ಥಾನ ಸಮಿತಿ ಮುಕ್ತೇಸರ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ರಾಜೇಂದ್ರ ರಾಣೆ ಸಂಪೂರ್ಣ ಕಾರ್ಯಕ್ರಮ ಸಂಘಟಿಸಿದ್ದರು.
ಬಿಳಿ ಲುಂಗಿ, ಕೇಸರಿ ಅಂಗಿ, ಶಲ್ಯ ಧರಿಸಿ ಪಕ್ಕಾ ಗ್ರಾಮೀಣ ಗೆಟಪ್ನಲ್ಲಿ ಕೆಸರು ಗದ್ದೆಗಿಳಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಗೂ ಇತರ ಅಧಿಕಾರಿಗಳು ಭಾನುವಾರ ಭತ್ತದ ಸಸಿಗಳನ್ನು ನಾಟಿ ಮಾಡಿದರು. ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿಯಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ ಸಿದ್ದರದಲ್ಲಿ ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೆ.ಡಿ.ಪೆಡ್ನೇಕರ್ ಅವರ ಜಮೀನಿನಲ್ಲಿ ಸುಮಾರು ಒಂದು ಗಂಟೆಗಳ ಕಾಲ ಡಿಸಿ ಮುಲ್ಲೈ ಮುಗಿಲನ್, ಎಡಿಸಿ ಕೃಷ್ಣಮೂರ್ತಿ ಎಚ್.ಕೆ., ಎಸಿ ವಿದ್ಯಾಶ್ರೀ ಚಂದರಗಿ, ತಹಸೀಲ್ದಾರ್ ನಿಶ್ಚಲ ನರೋನಾ ಭಾಗವಹಿಸಿ, ಕೃಷಿ ಕಾರ್ಯದ ಅನುಭವ ಪಡೆದರು. ಸಸಿಮಡಿಗೆ ಪೂಜೆ ಮಾಡಿ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಸಸಿ ನಾಟಿ ಮಾಡಿದರು. ಈ ಸಂದರ್ಭದಲ್ಲಿ ಜಮೀನಿನ ಮಾಲೀಕ ಕೆ.ಡಿ.ಪೆಡ್ನೇಕರ್ ಅವರು ನಾಟಿ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲ ಅಧಿಕಾರಿಗಳನ್ನು,ರೋಟರಿ ಅಧ್ಯಕ್ಷ, ನರೇಂದ್ರ ದೇಸಾಯಿ, ಮೀನುಗಾರರ ಮುಖಂಡ ಗಣಪತಿ ಉಳ್ವೇಕರ್, ಸೇಂಟ್ ಮಿಲಾಗ್ರಿಸ್ ಕೋ-ಆಪ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಜಾರ್ಜ ಫರ್ನಾಂಡಿಸ್ ಅವರನ್ನು ಸನ್ಮಾನಿಸಿದರು. ಪತ್ರಿಕಾ ಭವನ ನಿರ್ವಹಣಾ ಸಮಿತಿ ಅಧ್ಯಕ್ಷ ಟಿ.ಬಿ.ಹರಿಕಾಂತ, ಉಪಾಧ್ಯಕ್ಷ ಗಿರೀಶ ನಾಯ್ಕ, ಕಾರ್ಯದರ್ಶಿ ದೀಪಕ್ ಗೋಕರ್ಣ ಇದ್ದರು. ನಂತರ ರೋಟರಿ ಕ್ಲಬ್ ನಿಂದ ನೆರೆ ಸಂತ್ರಸ್ತ ೫ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಸ್ತಾಂತರಿಸಿದರು.
More Stories
ಮಹಿಳೆಯರ ಮೇಲೆ ದೌರ್ಜನ್ಯ, ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹ
ಕಾಗೇರಿ ಕಣ್ಣಲ್ಲಿ ರಕ್ತವಿಲ್ಲ, ಬಡಜನರ ಕಾಳಜಿ ಇಲ್ಲ: ಮಾರ್ಗರೇಟ್ ಆಳ್ವಾ ವಾಗ್ದಾಳಿ
ಕಾಂಗ್ರೆಸ್ ಅಭ್ಯರ್ಥಿ ವಿರುದ್ಧದ ಬಿಜೆಪಿಗರ ಆರೋಪ ಅಪ್ಪಟ ಸುಳ್ಳು: ಶಂಭು ಶೆಟ್ಟಿ