May 3, 2024

Bhavana Tv

Its Your Channel

ನಮ್ಮನೆ ಹಬ್ಬದಲ್ಲಿ ಘೋಷಿಸಿದ ಸೌರ ಬೆಳಕು ಭಾಗ್ಯ , ಕರ್ಣಾಟಕ ಬ್ಯಾಂಕ್ ಶಿಕ್ಷಣಕ್ಕಾಗಿ ಬೆಳಕು ಅಡಿ ಅನುಷ್ಠಾನ ಘೋಷಿಸಿದ್ದು ಐದು, ಸಿಕ್ಕಿದ್ದು ಹತ್ತು ಕುಟುಂಬಗಳಿಗೆ ! ‘

ಶಿರಸಿ: ಬೆಳಕೇ ಇಲ್ಲದ, ಬೆಳಕಿದ್ದೂ ಮಳೆಗಾಲದಲ್ಲಿ ನಿರಂತರ ವಿದ್ಯುತ್ ಪೂರೈಕೆಯ ಸಮಸ್ಯೆಯಲ್ಲಿದ್ದ ಪ್ರತಿಭಾವಂತ ಮಕ್ಕಳಿದ್ದ ಮನೆಗಳಿಗೆ ಕರ್ಣಾಟಕ ಬ್ಯಾಂಕ್ ಹಾಗೂ ಭಾರತೀಯ ವಿಕಾಸ ಟ್ರಸ್ಟ್ ಜತೆಯಾಗಿ ಸೆಲ್ಕೋ ಸೋಲಾರ್ ಸಂಸ್ಥೆ ಉಚಿತವಾಗಿ ಬೆಳಕಿನ ಭಾಗ್ಯ ಒದಗಿಸಿದೆ.

ಶಿರಸಿ, ಸಿದ್ದಾಪುರ, ಯಲ್ಲಾಪುರ, ಅಂಕೋಲಾ ತಾಲೂಕಿನ ಹತ್ತು ಕುಟುಂಬಗಳಿಗೆ ಸೌರ ವಿದ್ಯುತ್ ಕೊಡಲಾಗುತ್ತಿದೆ. ಗಣೇಶ ಹಬ್ಬದ ಮೊದಲೇ ಐದಕ್ಕೂ ಅಧಿಕ ಕುಟುಂಬಗಳಿಗೆ ಸೌರ ಬೆಳಕು ನೀಡಲಾಗಿದ್ದು, ಮಾಸಾಂತ್ಯದೊಳಗೆ ಉಳಿದ ಫಲಾನುಭವಿ ಮನೆಗಳಿಗೂ ಸೆಲ್ಕೋ ಸೌರ ಬೆಳಕು ಬೆಳಗಲಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ ನಡೆಸಿದ ನಮ್ಮನೆ ಹಬ್ಬದ ದಶಮಾನೋತ್ಸವದಲ್ಲಿ ನಮ್ಮನೆ ಪ್ರಶಸ್ತಿ ಸ್ವೀಕರಿಸಿದ್ದ ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ ಅವರು ಟ್ರಸ್ಟ್ ಆಯ್ಕೆ ಮಾಡಿಕೊಟ್ಟ ಓದುವ ಮಕ್ಕಳಿರುವ ಐದು ಕುಟುಂಬಗಳಿಗೆ ಉಚಿತವಾಗಿ ಸೌರ ಬೆಳಕಿನ ನೆರವು ಒದಗಿಸುವದಾಗಿ ಪ್ರಕಟಿಸಿದ್ದರು. ವಿದ್ಯುತ್ ಇಲ್ಲದ ಅಥವಾ ಕೊರತೆ ಅನುಭವಿಸುತ್ತಿರುವ ಕುಟುಂಬಗಳಿಗೆ ನಮ್ಮನೆ ಹಬ್ಬದ ಬೆಳಕಾಗಿಸುವ ಭರವಸೆ ನೀಡಿದ್ದರು. ಆ ಬೆಳಕಿನ ಯೋಜನೆ ಕರ್ನಾಟಕ ಬ್ಯಾಂಕ್ ನೆರವಿನಲ್ಲಿ ಅನುಷ್ಠಾನಕ್ಕೆ ಬಂದಿದೆ. ಬರಲಿರುವ ಡಿಸೆಂಬರ್‌ನಲ್ಲಿ ನಡೆಯಲಿರುವ ಹನ್ನೊಂದನೇ ವರ್ಷದ ನಮ್ಮನೆ ಹಬ್ಬದೊಳಗೆ ಬೆಳಕಿನ ಭಾಗ್ಯ ಈಡೇರುತ್ತಿದೆ ಎಂಬುದು ವಿಶೇಷವಾಗಿದೆ.

ಸೆಲ್ಕೊ ಸಂಸ್ಥೆಯ ಸಿಇಓ ಮೋಹನ ಹೆಗಡೆ ಅವರು ಕರ್ಣಾಟಕ ಬ್ಯಾಂಕ್ ಹಾಗೂ ಭಾರತೀಯ ವಿಕಾಸ ಟ್ರಸ್ಟ್, ಶಿಕ್ಷಣಕ್ಕಾಗಿ ಬೆಳಕು ಯೋಜನೆ ಅಡಿಯಯಲ್ಲಿ ಐದು ಕುಟುಂಬಗಳಿಗೆ ಬೆಳಕು ನೀಡುವ ಪ್ರಸ್ತಾಪ ಮಾಡಿದ್ದರು. ಆದರೆ, ಆಯ್ಕೆ ವೇಳೆ ಐದಕ್ಕಿಂತ ಅಧಿಕ ಕುಟುಂಬಗಳು ಸಿಕ್ಕ ಕಾರಣಕ್ಕೆ ಇನ್ನೂ ಹೆಚ್ಚುವರಿಯಾಗಿ ಒಟ್ಟೂ ಹತ್ತು ಕುಟುಂಬಗಳಿಗೆ ನೆರವಾಗುವ ವಾಗ್ದಾನ ನೀಡಿದರು. ಘೊಷಿಸಿದ್ದು ಐದು ಕುಟುಂಬಕ್ಕೆ ಬೆಳಕಾದರೂ ಈಗ ಕೊಡುತ್ತಿರುವದು ಹತ್ತು ಕುಟುಂಬಕ್ಕೆ ಆಗಿದೆ! ಕಾಡಿನ ನಡುವೆ ಇರುವ ಮನೆಗೆ ಬೆಳಕಿಲ್ಲದೇ, ಮಕ್ಕಳನ್ನು ಬಂಧುಗಳ ಮನೆಯಲ್ಲಿ ಉಳಿಸಿ ಕಳಿಸುತ್ತಿರುವವರು, ಓದಲು ಸೀಮೆ ಎಣ್ಣೆ ದೀಪಕ್ಕೂ ತತ್ವಾರ ಪಡುವ ಕುಟುಂಬಗಳು, ಪಕ್ಕದ ಮನೆಯಿಂದ ವಿದ್ಯುತ್ ಸಂಪರ್ಕ ಪಡೆದು ಒಂದು ಬಲ್ಬ ಹಾಕಿಕೊಂಡವರು, ವೃದ್ಧರಾದ ಅಜ್ಜಿ, ಮೊಮ್ಮಕ್ಕಳು ಇದ್ದರೂ ತಾಂತ್ರಿಕ ಕಾರಣದಿಂದ ಬೆಳಕು ಸಿಗದವರು, ಆಧಾರ ಕಾರ್ಡಿನ ಹೆಸರು ವ್ಯತ್ಯಾಸದಿಂದ ಬೆಳಕು ಸಿಗದವರು, ಕುಟುಂಬದ ಆಧಾರದ ಅಪ್ಪನಿಗೇ ಆರೋಗ್ಯ ಸಮಸ್ಯೆ ಇದ್ದೂ
ಸಾಧನೆ ಮಾಡಿದ ವಿದ್ಯಾರ್ಥಿನಿ, ಕರೆಂಟ್ ಇದ್ದೂ ಗಾಳಿ ಮಳೆ ಬಂದರೆ ಕೈಕೊಡುವ ಬೆಳಕಿನ
ಮನೆಗೆ, ಹೀಗೆ ಎಲ್ಲ ಬಗೆಯ ಸಮಸ್ಯೆ ಉಳ್ಳವರೂ ಫಲಾನುಭವಿ ಆಯ್ಕೆ ಪಟ್ಟಿಯಲ್ಲಿ ಇದ್ದರು.
ನಾಲ್ಕಕ್ಕೂ ಅಧಿಕ ಮಕ್ಕಳ ಕುಟುಂಬಕ್ಕೆ ಬೆಳಕಿಲ್ಲ, ಬೆಳಕಿನ ತೊಂದರೆ ಇರುವದನ್ನು
ಸ್ವತಃ ಆಯಾ ಶಾಲಾ ಮುಖ್ಯಾಧ್ಯಾಪಕರೂ ಶಿಫಾರಸ್ಸು ಮಾಡಿದ್ದೂ ವಿಶೇಷವೇ ಆಗಿದೆ.

ಶಿರಸಿ ನಗರದಿಂದ ದೂರ ಇರುವ ಶಿರಗುಣಿ ಸಮೀಪದ ರಾಯರಮನೆ ಮಂಜುನಾಥ ಗೌಡ, ಸುಮಿತ್ರಾ ಮರಾಠಿ ಬಾಳೆಕಾಯಿಮನೆ, ದಿನೇಶ ಅರಸಿಕೆರೆ, ರಮ್ಯಾ ಮರಾಠಿ ಬಾಳೆಕಾಯಿಮನೆ, ಶಿರಸಿ, ಕರಿಗುಂಡಿ ಸೀತಾ ಜೋಗಳೇಕರ್, ಸಿದ್ದಾಪುರದ ಕಲಾವಿದ, ಗೃಹೋದ್ಯೋಗಿ ವೆಂಕಟ್ರಮಣ ಹೆಗಡೆ ಮಾದಿನಕಳ್ಳು, ಯಲ್ಲಾಪುರ ಹೆಮ್ಮಾಡಿ ಸಿಂಧೂ ಮಧುಕೇಶ್ವರ ನಾಯ್ಕ, ಬನವಾಸಿ ಭಾಸಿ ಸಣ್ಮನೆ ಸಂದೇಶ ಕಾಳೇನರ್, ರಮ್ಯಾ ಬಂದಿಗೇರ ಸಣ್ಮನೆ, ಅಂಕೋಲಾದ ಅಚವೆ ತಿಮ್ಮಾ ಗೌಡ ಹುಡಗೋಡ ಕುಟುಂಬ ಆಯ್ಕೆ ಆಗಿದೆ.
ಕರೆಂಟ್ ಇಲ್ಲದೇ ಮಕ್ಕಳಿಗೆ ಓದುವ ಸಮಸ್ಯೆ ಆಗುತ್ತಿತ್ತು. ಪರೀಕ್ಷೆ ಎದುರಿಗೇ ಕರೆಂಟ್ ಇರುತ್ತಿರಲಿಲ್ಲ, ಬೆಳಕು ನೀಡಿ ಉಪಕಾರ ಆಗಿದೆ ಎಂದು ಫಲಾನುಭವಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಕರ್ಣಾಟಕ ಬ್ಯಾಂಕ್ ಹಾಗೂ ಸೆಲ್ಕೋ ಸಂಸ್ಥೆಯ ನೆರವಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.

error: