April 26, 2024

Bhavana Tv

Its Your Channel

ಟಿವಿ ವಾಹಿನಿಯ ಸುದ್ದಿ ನಿರೂಪಕ ಉತ್ತರಕನ್ನಡದ ಗಜಾನನ ಹೆಗಡೆ ಇನ್ನಿಲ್ಲ

ಬೆಂಗಳೂರು: ಟಿವಿ ವಾಹಿನಿಯ ಸುದ್ದಿ ನಿರೂಪಕ, ಹಿರಿಯ ಪತ್ರಕರ್ತ ಗಜಾನನ ಹೆಗಡೆ (೪೯) ಅವರು ಮಂಗಳವಾರ ನಿಧನರಾಗಿದ್ದಾರೆ. ಕೆಲದಿನಗಳ ಹಿಂದೆ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದ ಅವರನ್ನು ಬೆಂಗಳೂರಿನ ಜೆ.ಪಿ.ನಗರದ ಪಿ ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ಮೃತರಿಗೆ ಪತ್ನಿ, ಓರ್ವ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದಾರೆ.
ಉತ್ತರ ಕನ್ನಡ ಮೂಲದವರಾದ ಗಜಾನನ ಹೆಗಡೆಯವರು ಹೊನ್ನಾವರ ತಾಲೂಕಿನ ಕವಲಕ್ಕಿ ಗ್ರಾಮದವರು. ಮಾಧ್ಯಮ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂದು ಇಪ್ಪತ್ತು ವರ್ಷಗಳ ಹಿಂದೆ ಮನೆ ಬಿಟ್ಟು ಹೊರ ಬಂದಿದ್ದರು. ೨೦೦೧ರಲ್ಲಿ ಈ ಟಿವಿ ಕನ್ನಡ ಸುದ್ದಿ ವಾಹಿನಿ ಮೂಲಕ ನ್ಯೂಸ್ ಆಂಕರ್ ಆಗಿದ್ದವರು. ಬಳಿಕ ಕನ್ನಡ ವಾಹಿನಿ ಕಸ್ತೂರಿ ೨೪ನಲ್ಲಿ ಆಂಕರ್ ಚೀಫ್ ಆಗಿ ಕಾರ್ಯ ನಿರ್ವಹಿಸಿದರು. ಅಲ್ಲಿಂದ ಮತ್ತೊಂದು ಖಾಸಗಿ ಸುದ್ದಿ ವಾಹಿನಿಯಾದ ಪ್ರಜಾ ಟಿವಿಯಲ್ಲಿ ಮುಖ್ಯ ಸುದ್ದಿ ನಿರೂಪಕರಾಗಿ ಮನೆ ಮಾತಾಗಿದ್ದರು. ಪ್ರಚಲಿತ ವಿದ್ಯಮಾನಗಳ ಕುರಿತು ಗಂಟೆಗಟ್ಟಲೇ ಚರ್ಚೆ ನಡೆಸಿ ತೆಗೆದುಕೊಂಡ ವಿಷಯದ ಮೇಲೆ ಬೆಳಕು ಚೆಲ್ಲುತ್ತಿದ್ದರು. ಮಾಧ್ಯಮ ರಂಗದಲ್ಲಿ ಅನೇಕ ಮಿತ್ರರನ್ನು ಸಂಪಾದಿಸಿದ್ದರು. ಜೊತೆಗೆ ಅನೇಕ ಶಿಷ್ಯರಿಗೂ ಅವರು ಮಾರ್ಗದರ್ಶಕರಾಗಿದ್ದರು.
ಗಜಾನನ ಹೆಗಡೆ ಕನ್ನಡ ಸುದ್ದಿ ನಿರೂಪಕರಲ್ಲಿ ಎದ್ದು ಕಾಣುವಂಥ ವ್ಯಕ್ತಿತ್ವವುಳ್ಳವರು. ಅವರದು ಕಂಚಿನ ಕಂಠ. ಕನ್ನಡವನ್ನು ಬಹುವಾಗಿ ಪ್ರೀತಿಸುತ್ತಿದ್ದ ಹೆಗಡೆ ಕನ್ನಡವನ್ನು ಅಷ್ಟೇ ಸೊಗಸಾಗಿ ಮತ್ತು ಸ್ಪಷ್ಟವಾಗಿ ಮಾತನಾಡುತ್ತಿದ್ದರು.

error: