May 19, 2024

Bhavana Tv

Its Your Channel

ಕಾವೇರಿ ವರಪುತ್ರ ಜಿ ಮಾದೇಗೌಡರಿಗೆ ಶ್ರದ್ಧಾಂಜಲಿ

ಮಳವಳ್ಳಿ : ಇತ್ತೀಚೆಗೆ ಅಗಲಿ ಜಿಲ್ಲೆಯ ಹಿರಿಯ ಚೇತನ. ಕಾವೇರಿ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷರು ಕಾವೇರಿಯ ವರಪುತ್ರ ಜಿ ಮಾದೇಗೌಡರಿಗೆ ಶ್ರದ್ಧಾಂಜಲಿ ಅರ್ಪಿಸುವುದರ ಜೊತೆಗೆ ಗ್ರಾಮದ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವ ದಾಖಲಾತಿ ಆಂದೋಲನ ಕಾರ್ಯಕ್ರಮವೊಂದು ತಾಲೂಕಿನ ತಳಗವಾದಿ ಗ್ರಾಮದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು ಹಾಗೂ ಗ್ರಾಮದ ಮುಖಂಡರು ಅಗಲಿದ ಹಿರಿಯ ಚೇತನರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಜೊತೆಗೆ ಮೌನಾಚರಣೆ ಮೂಲಕ ಮಾದೇಗೌಡರಿಗೆ ಗೌರವ ಸಲ್ಲಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಾಹಿತಿ ಹಾಗೂ ಅಧ್ಯಾಪಕ ಮಾ ರಾಮಕೃಷ್ಣ ಅವರು ರಾಜಕೀಯ ಭೀಷ್ಮ ಎಂದೇ ಹೆಸರಾಗಿದ್ದ ಜಿ ಮಾದೇಗೌಡರು ರಾಜ್ಯಕ್ಕೆ ಮಾದರಿಯಾದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಕಾಳಮುದ್ದನ ದೊಡ್ಡಿಯನ್ನು ಭಾರತೀನಗರ ಮಾಡಿದ ಮಹಾನ್ ಸಾಧಕರು ಮಾದೇಗೌಡ ಎಂದು ಬಣ್ಣಿಸಿದರು.
ಇಂದು ಜಿಲ್ಲೆಯ ಪ್ರತೀ ಮನೆಯ ಮಕ್ಕಳಷ್ಟೇ ಅಲ್ಲದೇ ನಾಡಿನ ಮೂಲೆ ಮೂಲೆಯಿಂದ ಆಗಮಿಸುವ ಮಕ್ಕಳು ಉನ್ನತ ಶಿಕ್ಷಣ ಪಡೆದು ದೇಶ ವಿದೇಶಗಳಲ್ಲಿ ಉನ್ನತ ಉದ್ಯೋಗ ಅಲಂಕರಿಸಿದ್ದು ಆ ಮೂಲಕ ಲಕ್ಷಾಂತರ ಕುಟುಂಬಕ್ಕೆ ಬೆಳಕಾಗಿರುವ ಜಿ ಮಾದೇಗೌಡರು ಆತ್ಮಲಿಂಗೇಶ್ವರ ದೇವಾಲಯ ನಿರ್ಮಿಸಿ ಧಾರ್ಮಿಕವಾಗಿಯೂ ಜಿಲ್ಲೆಗೆ ಬೆಳಕಾಗಿದ್ದಾರೆ ಎಂದು ಬಣ್ಣಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಅವರು ಮಾತನಾಡಿ ಜಿಲ್ಲೆಯ ಅಭಿವೃದ್ಧಿ ಹರಿಕಾರರಾಗಿದ್ದ ಮಾದೇಗೌಡರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯ ಎಂದರು.
ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಇಳಿಮುಖ ವಾಗಿದ್ದು ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಲು ನೆರವಾಗಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಮಾಜಿ ತಾ ಪಂ ಅಧ್ಯಕ್ಷ ಚೌಡಯ್ಯ, ಕಾಳಪ್ಪ, ಟಿ ಎಂ ಪ್ರಕಾಶ್ ಸೇರಿದಂತೆ ಹಲವಾರು ಮುಖಂಡರು ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು.

ವರದಿ: ಮಲ್ಲಿಕಾರ್ಜುನ ಮಳವಳ್ಳಿ

error: