April 26, 2024

Bhavana Tv

Its Your Channel

ಪ್ರಾಂತ ರೈತ ಸಂಘದ ಆಶ್ರಯದಲ್ಲಿ ಸಾಗ್ಯ ಗ್ರಾಮಸ್ಥರಿಂದ ಪ್ರತಿಭಟನೆ

ಮಳವಳ್ಳಿ : ಮಳವಳ್ಳಿ ತಾಲೂಕಿನ ಸಾಗ್ಯ ಗ್ರಾಮದಲ್ಲಿನ ಸರ್ಕಾರಿ ಶಾಲಾ ಜಾಗವನ್ನು ಖಾಸಗಿ ವ್ಯಕ್ತಿಯೋರ್ವ ಒತ್ತುವರಿ ಮಾಡಿಕೊಂಡಿದ್ದು ಈ ಶಾಲಾ ಆಸ್ತಿಯನ್ನು ರಕ್ಷಣೆ ಮಾಡುವಲ್ಲಿ ವಿಫಲರಾಗಿರುವ ತಹಸೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಧೋರಣೆ ಯನ್ನು ಖಂಡಿಸಿ ಪಟ್ಟಣದಲ್ಲಿ ಇಂದು ಪ್ರಾಂತ ರೈತ ಸಂಘದ ಆಶ್ರಯದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಪ್ರಾಂತ ರೈತ ಸಂಘದ ಕಚೇರಿ ಆವರಣದಿಂದ ಮೆರವಣಿಗೆ ಹೊರಟ ಸಂಘಟನೆಯ ಮುಖಂಡರು ಹಾಗೂ ಗ್ರಾಮಸ್ಥರು ದಾರಿಯುದ್ದಕ್ಕೂ ತಹಸೀಲ್ದಾರ್ ಹಾಗೂ ಬಿಇಒ ಅವರ ವಿರುದ್ಧ ಘೋಷಣೆ ಗಳನ್ನು ಕೂಗಿದರಲ್ಲದೆ ತಾಲೂಕು ಕಚೇರಿ ತಲುಪಿ ಅಲ್ಲಿ ಪ್ರತಿಭಟನೆ ಮುಂದುವರಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಾಂತ ರೈತ ಸಂಘದ ಅಧ್ಯಕ್ಷ ಭರತ್ ರಾಜ್ ಅವರು ಸಾಗ್ಯ ಗ್ರಾಮದ ಸರ್ಕಾರಿ ಶಾಲೆಗೆ ಸೇರಿದ 01.04 ಗುಂಟೆ ಜಾಗವನ್ನು ಖಾಸಗಿ ವ್ಯಕ್ತಿ ಒತ್ತುವರಿ ಮಾಡಿಕೊಂಡಿದ್ದು ಈ ಒತ್ತುವರಿ ಜಾಗವನ್ನು ಅಳತೆ ಮಾಡುವಂತೆ ಗ್ರಾಮಸ್ಥರ ಒತ್ತಾಯದಂತೆ ಅಳತೆ ಮಾಡಿದ ಸರ್ವೆ ಅಧಿಕಾರಿಗಳು ಒತ್ತುವರಿಯಾಗಿರುವ ಜಾಗವನ್ನು ಗುರುತಿಸಿ ನೆಟ್ಟಿದ್ದ ಕಲ್ಲನ್ನು ಒತ್ತುವರಿದಾರ ಕಿತ್ತುಹಾಕಿ ತಾಲ್ಲೂಕು ಆಡಳಿತಕ್ಕೆ ಸವಾಲು ಹಾಕಿದ್ದರು ಸಹ ಅಧಿಕಾರಿಗಳು ಯಾವುದೇ ಕಾನೂನು ಕ್ರಮಕ್ಕೆ ನಿರ್ಲಿಪ್ತರಾಗಿದ್ದಾರೆ ಎಂದು ಅಧಿಕಾರಿಗಳ ನಡೆಯನ್ನು ಖಂಡಿಸಿದರು.
ಈ ಮಧ್ಯ ಒತ್ತುವರಿ ತೆರವಿಗೆ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ನ್ಯಾಯಾಲಯ ರದ್ದು ಪಡೆದಿದ್ದರು ಸಹ ರಾಜಕೀಯ ಒತ್ತಡಕ್ಕೆ ಮಣಿದ ಅಧಿಕಾರಿಗಳು ಸದರಿ ಒತ್ತುವರಿ ಜಾಗವನ್ನು ಈವರೆಗೆ ಜಾಗವನ್ನು ಇಲಾಖಾ ವಶಕ್ಕೆ ಪಡೆಯದಿರುವುದು ಅಧಿಕಾರಿಗಳ ಧೋರಣೆ ಬಗ್ಗೆ ಅನುಮಾನ ಮೂಡುವಂತಾಗಿದೆ ಎಂದು ಟೀಕಿಸಿದರು.
ಕೂಡಲೇ ಒತ್ತುವರಿ ಜಾಗವನ್ನು ವಶಕ್ಕೆ ಪಡೆದು ಅಳತೆ ಕಲ್ಲು ಕಿತ್ತು ಹಾಕಿರುವ ಒತ್ತುವರಿದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಭರತ್ ರಾಜ್ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ಕೃಷ್ಣಪ್ಪ, ರಾಜಣ್ಣ, ಶಿವಲಿಂಗೇಗೌಡ, ಮಹದೇವ, ಈರೇಗೌಡ ಮತ್ತಿತರರು ಪಾಲ್ಗೊಂಡಿದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: