April 27, 2024

Bhavana Tv

Its Your Channel

ಶಾಸಕರು ಒದಗಿಸಿದ ಅನುದಾನವನ್ನು ಆಯಾ ಕ್ಷೇತ್ರದ ಅಚ್ಚುಕಟ್ಟು ಅಭಿವೃದ್ದಿಗೆ ವಿನಯೋಗಿಸುತ್ತೇನೆ -ಪವಿತ್ರ ರಾಮಯ್ಯ

ಶಿವಮೊಗ್ಗ:ಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಗೆ ಸುಮಾರು ೩೦ ಮಂದಿ ವಿಧಾನ ಸಭಾ ಸದಸ್ಯರು ಪ್ರತಿನಿಧಿಸುತ್ತಾರೆ, ಅವರೆಲ್ಲರೂ ಭದ್ರಾ ಕಾಡಾ ಪ್ರಾಧಿಕಾರಕ್ಕೆ ಪ್ರತಿವರ್ಷ ೨ ಕೋಟಿಯಂತೆ ಅನುದಾನ ಒದಗಿಸಿ ಕೊಟ್ಟರೆ ಇದರಿಂದ ೬೦ಕೋಟಿ ಅನುದಾನ ಲಭ್ಯವಾಗುತ್ತದೆ ಈ ಅನುದಾನದಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಎದುರಿಸುತ್ತಿರುವ ನೂರಾರು ಸಮಸ್ಯೆಗಳು ಪರಿಹರಿಸುವುದರ ಜೊತೆಗೆ ಪ್ರಾಧಿಕಾರವನ್ನು ಮಾದರಿಯಾಗಿ ಅಭಿವೃದ್ದಿ ಪಡಿಸಲು ಅನುಕೂಲವಾಗುತ್ತದೆ ಎಂದರು.

ಚನ್ನಗಿರಿ ತಾಲ್ಲೂಕು ಕತ್ತಲಗೆರೆ ಗ್ರಾಮದಲ್ಲಿರುವ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಅಧ್ಯಯನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಭದ್ರಾ ಕಾಡಾ ಪ್ರಾಧಿಕಾರದ ಅಧ್ಯಕ್ಷರಾದ ಪವಿತ್ರ ರಾಮಯ್ಯ ಅವರು, ಅಚ್ಚುಕಟ್ಟು ವ್ಯಾಪ್ತಿಯ ಪ್ರತಿಯೊಂದು ಅಭಿವೃದ್ದಿ ಕೆಲಸಗಳು ಪ್ರಾಧಿಕಾರದ ವತಿಯಿಂದ ಮಾಡಬೇಕು ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಶಾಸಕರು ಆಲೋಚನೆ ಮಾಡಿ ನಮ್ಮೊಂದಿಗೆ ಕೈಜೋಡಿಸಿದರೆ ರೈತರು ಎದುರಿಸುತ್ತಿರುವ ಸಾಕಷ್ಟು ಸಮಸ್ಯೆಗಳು ಬಗೆ ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಜೊತೆಗೆ ಆಯಾ ಶಾಸಕರು ಒದಗಿಸಿದ ಅನುದಾನವನ್ನು ಆಯಾ ಕ್ಷೇತ್ರದ ಅಚ್ಚುಕಟ್ಟು ಅಭಿವೃದ್ದಿಗೆ ವಿನಯೋಗಿಸುತ್ತೇನೆ ಎಂದು ಭರವಸೆ ನೀಡಿದರು.

ನನ್ನ ದುರದೃಷ್ಟ ಎಂಬAತೆ ನಾನು ಭದ್ರಾ ಕಾಡಾ ಅಧ್ಯಕ್ಷರಾಗಿ ನೇಮಕಗೊಂಡ ಸಮಯದಲ್ಲಿ ಕೋವಿಡ್-೧೯ ಲಗ್ಗೆಯಿಟ್ಟಿತು, ಅದನ್ನು ವ್ಯಕ್ತಿಯಿಂದ ವ್ಯಕ್ತಿಗೆ ಹರಡದಂತೆ ತುಂಡರಿಸಲು ಲಾಕ್ ಡೌನ್ ಮಾಡಬೇಕಾದ ಅನಿವಾರ್ಯತೆ ರಾಜ್ಯ ಸರ್ಕಾರಕ್ಕೆ ಎದುರಾಯಿತು ಪರಿಣಾಮ ಎಲ್ಲಾ ರಂಗಗಳು ಮುಚ್ಚುವಾಂತಾಗಿ ಬೊಕ್ಕಸಕ್ಕೆ ಕೊಡಲಿ ಪೆಟ್ಟು ಬಿದ್ದ ಪರಿಣಾಮ ಅಭಿವೃದ್ದಿಯ ಕಾರ್ಯಗಳಿಗೆ ಅನುದಾನದ ಕೊರತೆ ಎದುರಾಗುವ ಸಂದಿಗ್ಧ ಪರಿಸ್ಥಿತಿ ನಾವೆಲ್ಲರೂ ಕಾಣಬೇಕಾಯಿತು, ಕೇವಲ ಸರ್ಕಾರ ಕೊಡುವ ಗೌರವಧನ ಪಡೆಯಲು ಕಚೇರಿಗೆ ಪ್ರತಿದಿನ ಬಂದು ಕೂರಲು ಮನಸ್ಸು ಒಪ್ಪಲಿಲ್ಲ, ಇಂತಹ ಸಮಯದಲ್ಲಿ ಸರ್ಕಾರದೊಂದಿಗೆ ನಿಲ್ಲಬೇಕು ಸರ್ಕಾರದ ಮೇಲೆ ಒತ್ತಡ ತರಬಾರದು ಎಂದು ನಿರ್ಧರಿಸಿ ಪರ್ಯಾಯ ಮಾರ್ಗದೆಡೆಗೆ ಆಲೋಚನೆ ಮಾಡಿದಾಗ ನರೇಗಾ ಅನುದಾನ ಬಳಸಿಕೊಳ್ಳುವ ಆಲೋಚನೆ ಒಳೆಯಿತು, ಇದರಿಂದ ಕೊನೆಯ ಭಾಗಕ್ಕೆ ನೀರು ಕೊಡಲು ಅನುಕೂಲವಾಯಿತು ಎಂದು ಹೇಳಿದರು.

ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ ನಿರ್ದೇಶಕರಾದ ನಾಗರಾಜಪ್ಪ ಮಾತನಾಡಿ, ಪವಿತ್ರ ರಾಮಯ್ಯ ಅವರು ಮೂಲತಃ ರೈತ ಸಂಘದಿAದ ಬಂದವರು ಅವರಿಗೆ ರೈತರ ಪ್ರತಿಯೊಂದು ಸಮಸ್ಯೆಗಳ ಬಗ್ಗೆ ಅರಿವಿದೆ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಬರುವ ಅನುದಾನ ಒದಗಿಸಲು ಕೈಜೋಡಿಸುತ್ತೆವೆ ಒಬ್ಬ ಹೆಣ್ಣು ಮಗಳಾಗಿ ಮಾಡುತ್ತಿರುವ ಸಾಧನೆ ಎಲ್ಲರೂ ಮೆಚ್ಚುವಂತಹದ್ದು ಎಂದು ಹೇಳಿದರು, ಇದರೊಂದಿಗೆ ಈ ಸ್ಥಳದಲ್ಲಿ ಕೃಷಿ ಪದವಿ ಕಾಲೇಜು ಮಾಡಲು ಎಲ್ಲಾ ರೀತಿಯ ಅನುಕೂಲವಿದ್ದು ಸ್ಥಳೀಯ ಜನಪ್ರತಿನಿಧಿ ಗಳೊಂದಿಗೆ ಮಾತನಾಡಿ ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿ, ರಾಜ್ಯ ಸರ್ಕಾರ ಅನುದಾನ ನೀಡಿದರೆ ಅಚ್ಚುಕಟ್ಟು ಅಭಿವೃದ್ದಿಗೆ ಅಧ್ಯಕ್ಷರು ಹಗಲು ರಾತ್ರಿ ಶ್ರಮಿಸುತ್ತಾರೆ, ಯಾವುದೇ ಭ್ರಷ್ಟಾಚಾರ ವಿಲ್ಲದೆ ಆಡಳಿತ ನಡೆಸುತ್ತಾರೆ ಗುಣಮಟ್ಟದ ಕಾಮಗಾರಿಗೆ ಮೊದಲ ಆದ್ಯತೆ ನೀಡುತ್ತಾರೆ ಉದಾಹರಣೆಯೊಂದಿಗೆ ಹೇಳುವುದಾದರೆ ೧ ರೂಪಾಯಿ ಅವರ ಕೈಗೆ ನೀಡಿದರೆ ೧ ರೂಪಾಯಿ ೨೦ ಪೈಸೆ ಕೆಲಸ ಮಾಡುವ ಚಾಕಚಕ್ಯತೆ ಅವರಲ್ಲಿದೆ ಎಂಬ ಮಾತನ್ನು ಹಂಚಿಕೊAಡರು.

ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಸಂಶೋಧನಾ ಕೇಂದ್ರದ ಪ್ರಾಂಶುಪಾಲರಾದ ಆನಂದ್ ಕುಮಾರ್ ಮಾತನಾಡಿ, ನಿಮ್ಮ ಭಾಷಣ ಕೇಳಿದರೆ ನಿಮ್ಮ ರೈತರೊಂದಿಗಿನ ಒಡನಾಟ ಯಾವ ಮಟ್ಟದಲ್ಲಿದೆ ಎಂಬುದು ತೋರ್ಪಡಿಸುತ್ತದೆ, ಕೃಷಿಯ ಬಗ್ಗೆ ಇರುವ ಅಪಾರವಾದ ಜ್ಞಾನ ರೈತರ ಬಗೆಗಿನ ಕಾಳಜಿ ನಿಜಕ್ಕೂ ನನಗೆ ಅಚ್ಚರಿಗೆ ನೂಕಿದೆ, ನೀವು ಖಂಡಿತ ಕೃಷಿ ವಿಜ್ಞಾನಿಗಳಿಗೆ ಸರಿಸಮನಾಗಿ ನಿಲ್ಲುತ್ತೀರಿ ನಿಮ್ಮ ಅನುಭವ ನಮ್ಮೆಲ್ಲರಿಗೂ ಮಾದರಿ ಎಂದು ಅಭಿಮಾನ ವ್ಯಕ್ತ ಪಡಿಸಿದರು ನಂತರ ವಿಶ್ವವಿದ್ಯಾಲಯ ಪ್ರಾಂಗಣದಲ್ಲಿ ಕಾಡಾ ವತಿಯಿಂದ ಅಭಿವೃದ್ದಿ ಕೆಲಸಗಳು ಅಗಬೇಕಿದ್ದು ಅನುದಾನ ನೀಡುವಂತೆ ಮನವಿ ಮಾಡಿ ಒತ್ತಾಯಿಸಿದರು.

ಗ್ರಾಮದ ರೈತರು ಮಾತನಾಡಿ, ನಮ್ಮ ಗ್ರಾಮದಲ್ಲಿ ಬಟ್ಟೆ ತೊಳೆಯಲು ಸೋಪಾನ ಕಟ್ಟೆ ವ್ಯವಸ್ಥೆ ಇಲ್ಲ ಎಂದಾಗ ನರೇಗಾ ಯೋಜನೆಯಡಿ ಅದನ್ನು ಮಾಡಲು ಅವಕಾಶವಿದ್ದು ಯೋಜನೆ ಬಳಸಿಕೊಳ್ಳುವಂತೆ ಕಿವಿ ಮಾತು ಹೇಳಿದರು ಜೊತೆಗೆ ಪ್ರತಿಯೊಬ್ಬ ರೈತರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನರೇಗಾ ಯೋಜನೆಯಡಿ ದೊರಕುವ ಯೋಜನೆಗಳ ಕುರಿತು ಅಧ್ಯಯನ ನಡೆಸುವಂತೆ ಸೂಚನೆ ಕೊಟ್ಟರು.

ಈ ಸಂದರ್ಭದಲ್ಲಿ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಪ್ರಾಧ್ಯಾಪಕರು, ಗ್ರಾಮಸ್ಥರು, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಧನಂಜಯ್ ಉಪಸ್ಥಿತರಿದ್ದರು.

error: