
ಭಟ್ಕಳ ತಾಲೂಕಿನ ಬಂದರ ಸಮೀಪದ ಮಾವಿನಕುರ್ವೆಯ ಶ್ರೀ ಕುಟುಮೇಶ್ವರ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವರ ವಾರ್ಷಿಕ ವರ್ಧಂತಿ ಉತ್ಸವವು ವಿಜೃಂಭಣೆಯಿAದ ನೆರವೇರಿತು. ಚಂಡೆವಾದನ ಹಾಗೂ ಕುಣಿತ ಭಜನೆ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.
ಭಟ್ಕಳದ ಬಂದರಿನ ಎತ್ತರದ ಶಿಖರದಂಥ ಸ್ಥಳದಲ್ಲಿ ಪರಮ ಶಿವನು, ಭಕ್ತರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುತ್ತಾ ಕುಟುಮೇಶ್ವರನಾಗಿ ನೆಲೆಸಿದ್ದಾನೆ. ಇನ್ನೂ ತಗ್ಗಿನ ಬಂದರು ಬಳಿಯಲ್ಲಿ ತಾಯಿ ಜಗನ್ಮಾತೆಯು, ಭಕ್ತರ ದುಃಖ ದುಮ್ಮಾನಗಳನ್ನು ದೂರ ಮಾಡುವ ದುರ್ಗಾಪರಮೇಶ್ವರಿಯಾಗಿ ನೆಲೆಸಿರುವುದು ಈ ಕ್ಷೇತ್ರದ ವಿಶೇಷ.
ವರ್ಧಂತಿ ಉತ್ಸವದ ಅಂಗವಾಗಿ ಶ್ರೀ ದೇವರ ಉತ್ಸವ ಮೂರ್ತಿಯು ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ಗ್ರಾಮದಲ್ಲಿ ಸಂಚರಿಸಿ, ಭಜಕರಿಂದ ಪೂಜೆ ಪುನಸ್ಕಾರಗಳನ್ನು ಪಡೆಯುವ ಕ್ಷಣ ನಯನ ಮನೋಹರವಾಗಿದೆ.
ಮೆರವಣಿಗೆಯುದ್ಧಕ್ಕೂ ಶ್ರೀಮುಖ್ಯಪ್ರಾಣ ಚಂಡೆ ಬಳಗ ಹೊನ್ನಾವರ ದವರಿಂದ ಆಕರ್ಷಕ ಕೇರಳ ಶೈಲಿಯ ಚಂಡೆವಾದನ, ಹಾಗೂ ಶ್ರೀ ನಾಗಚೌಡೇಶ್ವರಿ ಮಹಿಳಾ ಕುಣಿತ ಭಜನಾ ಬಳಗ ಬೆಳ್ನಿ ಯವರ ಭಜನಾ ಕಾರ್ಯಕ್ರಮವು ಎಲ್ಲರ ಗಮನ ಸೆಳೆಯಿತು.
ಚಂಡೆ ಬಳಗದ ನರಸಿಂಹ ನಾಯ್ಕ್ ಮಾತನಾಡಿ ಚಂಡೆ ಗುರುಗಳಾದ ಗಣೇಶ ದೇವಾಡಿಗರ ಸಹಕಾರ ಹಾಗೂ ದೇವಾಲಯದ ಆಡಳಿತ ಕಮಿಟಿಯವರ ಪ್ರೋತ್ಸಾಹದಿಂದ ನಮಗಿಲ್ಲಿ ಚಂಡೆ ವಾದನಕ್ಕೆ ಅವಕಾಶ ದೊರಕಿದೆ. ಇವತ್ತಿನ ಕಾರ್ಯಕ್ರಮ ನಮಗೆ ಹೆಚ್ಚಿನ ಖುಷಿ ನೀಡಿದೆ. ಕಾರಣ... ನಮ್ಮ ವಾದನಕ್ಕೆ ಪೂರಕವಾಗಿ ಪುಟಾಣಿಗಳಿಂದ ಹಿಡಿದು ವಯೋವೃದ್ಧರ ತನಕ ಕುಣಿದು ಸಂಭ್ರಮಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಕಮಿಟಿಯವರು ಮತ್ತು ಭಕ್ತಾದಿಗಳು ಆಗಾಗ ಪಾನಕ ಹಾಗೂ ತಂಪು ಪಾನೀಯದ ವ್ಯವಸ್ಥೆ ಮಾಡಿ ದಣಿವಾಗದಂತೆ ನೋಡಿಕೊಂಡಿದ್ದಾರೆ ಎಂದರು.
ರಾತ್ರಿ ಪೆರ್ಡೂರು ಮೇಳದ ಕವಿರತ್ನ ಕಾಳಿದಾಸ ಯಕ್ಷಗಾನ ಬಯಲಾಟ ನೋಡುವುದರೊಂದಿಗೆ, ಭಕ್ತರು ಶ್ರೀ ದೇವರ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಕೃಪೆಗೆ ಪಾತ್ರರಾದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ