ವರದಿ:ನಟರಾಜ ಗದ್ದೆಮನೆ
ಕುಮಟಾ: ನಿವೃತ್ತ ವೇತನ ಸಿಗದೇ ತೊಂದರೆಗೆ ಒಳಗಾಗಿದ್ದ ಇಬ್ಬರು ನಿವೃತ್ತ ಶಿಕ್ಷಕರಿಗೆ ಒಂದೇ ದಿನದಲ್ಲಿ ವೇತನ ಸಿಗವಂತೆ ಅನುಕೂಲ ಕಲ್ಪಿಸಿದ ಶಾಸಕ ದಿನಕರ ಶೆಟ್ಟಿ .
ಪ್ರತಿ ಶುಕ್ರವಾರ ತಹಸೀಲ್ದಾರ ಕಚೇರಿಗೆ ತೆರಳಿ ಶಾಸಕರು ಅಲ್ಲಿ ಜನರ ಅಹವಾಲು ಸ್ವೀಕರಿಸಿ, ತ್ವರಿತಗತಿಯಲ್ಲಿ ಕೆಲಸ ಆಗುವ ರೀತಿ ಅಧಿಕಾರಿಗಳಿಗೆ ಸೂಚನೆ ನೀಡುತ್ತಾರೆ. ಇದೇ ಸಂದರ್ಭದಲ್ಲಿ ಇಬ್ಬರು ನಿವೃತ್ತ ಶಿಕ್ಷಕರು ನಿವೃತ್ತ ವೇತನ ದೊರೆಯುತ್ತಿಲ್ಲ ಎಂದು ಶಾಸಕರ ಗಮನಕ್ಕೆ ತಂದರು. ತಕ್ಷಣ ಸ್ಪಂದಿಸಿದ ಅವರು, ಪತ್ರಾಂಕಿತ ಉಪ ಖಜಾನೆ ಅಧಿಕಾರಿ ಬಿ.ಡಿ.ನಾಯ್ಕ ಅವರನ್ನು ಸಂಪರ್ಕಿಸಿ, ಇಬ್ಬರು ನಿವೃತ್ತ ಶಿಕ್ಷಕರಿಗೆ ಕೂಡಲೇ ವೇತನ ನೀಡುವಂತೆ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು. ಕಾರ್ಯೋನ್ಮುಖವಾದ ಉಪಖಜಾನೆ ಅಧಿಕಾರಿ, ಕೆಳ ಹಂತದ ಅಧಿಕಾರಿ ಹಾಗೂ ಸಿಬ್ಬಂದಿಗಳ ನೆರವಿನಿಂದ ತೊಂದರೆ ಸರಿಪಡಿಸಿ, ನಿವೃತ್ತ ವೇತನ ದೊರೆಯುವಂತೆ ಮಾಡಿದ್ದಾರೆ.
ಈ ಕುರಿತು ಶಾಸಕ ದಿನಕರ ಶೆಟ್ಟಿ ಪ್ರತಿಕ್ರಿಯಿಸಿ, ಪ್ರತಿ ಶುಕ್ರವಾರ ತಹಸೀಲ್ದಾರ ಕಚೇರಿಗೆ ಭೇಟಿ ನೀಡಿ, ಅಲ್ಲಿನ ಸಾರ್ವಜನಿಕರ ಸಮಸ್ಯೆ ಆಲಿಸಿ, ಅವರಿಗೆ ಪರಿಹಾರ ಸೂಚನೆ ನೀಡುವ ಕಾರ್ಯ ನಿರಂತರವಾಗಿ ಮಾಡುತ್ತಿದ್ದೇನೆ. ಇಬ್ಬರು ನಿವೃತ್ತ ಶಿಕ್ಷಕರಿಗೆ ನಿವೃತ್ತ ವೇತನ ದೊರೆಯಲು ತೊಂದರೆಯಾಗಿದೆ ಎಂದು ನನ್ನ ಗಮನಕ್ಕೆ ತಂದರು. ಆ ಕೂಡಲೇ ಅಧಿಕಾರಿಗಳಿಗೆ ಸೂಚನೆ ನೀಡಿ, ವೇತನ ಸಿಗುವಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಅವರು ಉಳಿದ ಅಧಿಕಾರಿ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಒಂದೇ ದಿನದಲ್ಲಿ ವೇತನ ದೊರೆಯುವಂತೆ ಮಾಡಿದ್ದಾರೆ. ನನ್ನ ಕ್ಷೇತ್ರದಲ್ಲಿ ಇದೇ ರೀತಿಯಲ್ಲಿ ಸಾರ್ವಜನಿಕರ ಕೆಲಸ ಆಗಬೇಕಾಗಿದೆ. ಸೂಚನೆಗೆ ಸ್ಪಂದಿಸಿ ಉಪಖಜಾನೆ ಅಧಿಕಾರಿ ಬಿ.ಡಿ.ನಾಯ್ಕ ಹಾಗೂ ಇತರ ಅಧಿಕಾರಿ, ಸಿಬ್ಬಂದಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪತ್ರಾಂಕಿತ ಉಪಖಜಾನೆ ಅಧಿಕಾರಿ ಬಿ.ಡಿ.ನಾಯ್ಕ, ಕಲ್ಲಬ್ಬೆ ಗ್ರಾ.ಪಂ ಸದಸ್ಯ ರವಿ ಹೆಗಡೆ ಸೇರಿದಂತೆ ಮತ್ತಿತರರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ