ವರದಿ: ವೇಣುಗೋಪಾಲ ಮದ್ಗುಣಿ
ಶಿರಸಿ: ವಿಘ್ನ ವಿನಾಯಕನ ಕುರಿತು ಹೇಳಿದಷ್ಟೂ ಕಡಿಮೆಯೆ. ಗಣಪತಿ ಸೃಷ್ಟಿಗೆ ಮೂಲ. ಪ್ರಕೃತಿ ಪುರುಷರ ಪರವಾಗಿ ನಿಂತ ದೇವರು. ಅನೇಕ ಪುರಾಣಗಳಲ್ಲಿ ಗಣಪತಿಯ ಸ್ತುತಿಯಿದೆ. ಇದು ಜನರಿಗೆ ಆಧ್ಯಾತ್ಮದ ಮೂಲಕ ತಿಳಿದು ಬಂದಿದೆ. ಮೂಲಾಧಾರ ಚಕ್ರಕ್ಕೆ ಆದಿದೇವ. ಎಲ್ಲ ವಿಚಾರಗಳಲ್ಲೂ ಅದು ವಿದ್ಯಾರಂಭವಿರಲಿ, ವಿವಾಹವಿರಲಿ, ನಮ್ಮ ನಿತ್ಯ ಜೀವನದ ಬದುಕು ಸಾಂಗವಾಗಿ ಸಾಗಲು ಗಣಪತಿಯ ಅನುಗ್ರಹ ಬೇಕು. ಶ್ರದ್ದಾ ಭಕ್ತಿಯಿಂದ ಕೂಡಿದ ವೃತದಿಂದ ಭವಬಂಧನದಿAದ ಬಿಡಿಸಿಕೊಂಡು ಮುಕ್ತರಾಗಲು ಗಣೇಶ ಅನುಗ್ರಹ ಬೇಕು ಎಂದು ನಿವೃತ್ತ ಮುಖ್ಯಾಧ್ಯಾಪಕರಾದ ಕೆ. ಎಸ್. ಅಗ್ನಿಹೋತ್ರಿಯವರು ಸಾಹಿತ್ಯ ಸಂಚಲನ ಶಿರಸಿ ಹಾಗೂ ನೆಮ್ಮದಿ ಮಾಸದ ಮಾತುಗಳು ಸಂಯುಕ್ತಾಶ್ರಯದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಡಿಯಲ್ಲಿ “ವಿಘ್ನ ವಿನಾಯಕ” ಕುರಿತು ಮಾತನಾಡಿದರು.
ಮುಂದುವರೆದು ಮಾತನಾಡುತ್ತಾ ವೇದದ ಅಂತರ್ ಭಾವವೇ ಉಪನಿಷತ್ತು ಇದು ವೇದಜ್ಞಾನದಿಂದ ಬಂದಿದೆ. ಬ್ರಹ್ಮನ ವಾಣಿಯನ್ನು ತಮ್ಮ ತಪೋಬಲದಿಂದ ಸಿದ್ಧಿಸಿಕೊಂಡು ಋಷಿಮುನಿಗಳು ನಮಗೆ ನೀಡಿ ಉಪಕೃತರಾಗಿದ್ದಾರೆ. ದ್ವಾಪರಯುಗದಲ್ಲಿ ಇದ್ದಂತೆ ಕಲಿಯುಗದಲ್ಲೂ ಗಣಪತಿಯ ಸ್ತುತಿ ಮಾಡುತ್ತಾರೆ. ಭಕ್ತಿ ಮಾರ್ಗವೇ ಶ್ರೇಷ್ಠವೆಂದು, ಉಪಾಸನೆ, ಅರ್ಚನೆ, ಆರಾಧನೆ ಮುಖ್ಯವೆಂದು ಹೇಳಿದರು. ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಗಣಪತಿ ಭಟ್ಟ ವರ್ಗಾಸರ, ಮಾಬ್ಲೇಶ್ವರ ಭಟ್ಟ ಮಂಚಿಕೇರಿ ಭಾಗವಹಿಸಿದ್ದರು.
ಅಧ್ಯಕ್ಷೀಯ ಭಾಷಣದಲ್ಲಿ ಪ್ರೊ.ಡಿ.ಎಂ.ಭಟ್ಟ ಕುಳವೆಯವರು ಗಣಪತಿಯ ಕುರಿತಾಗಿ ತಾವೇ ರಚಿಸಿದ ‘ಲೋಕವಂದಿತ ಗಣೇಶ’ ಕವನವನ್ನು ಪ್ರಸ್ತುತಪಡಿಸಿ ಪೂರ್ತಿ ಕಾರ್ಯಕ್ರಮವನ್ನು ಗಣಪತಿಮಯಗೊಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಗಣಪತಿ ಪ್ರಾರ್ಥನೆಯನ್ನು ರೋಹಿಣಿ ಹೆಗಡೆ ಸುಶ್ರಾವ್ಯವಾಗಿ ಹಾಡಿದರು. ಸಾಹಿತ್ಯ ಸಂಚಲನದ ಸಂಚಾಲಕರಾದ ಕೃಷ್ಣ ಪದಕಿಯವರು ಎಲ್ಲರನ್ನು ಸ್ವಾಗತಿಸಿ ಪರಿಚಯಿಸಿದರು ಮತ್ತು ಕೊನೆಯಲ್ಲಿ ವಂದಿಸಿದರು. ಗಣಪತಿ ಭಟ್ಟ ವರ್ಗಾಸರ ಪ್ರಸ್ತಾವಿಕ ನುಡಿಗಳನ್ನಾಡಿದರು. ದಾಕ್ಷಾಯಿಣಿ ಪಿ.ಸಿ.ಯವರು ಕಾರ್ಯಕ್ರಮವನ್ನು ಸುಂದರವಾಗಿ ನಿರೂಪಿಸಿದರು
More Stories
ಮೇಸ್ತಾ ಪ್ರಕರಣದಲ್ಲಿ ಕಾಗೇರಿಯಿಂದ ಕೀಳುಮಟ್ಟದ ಹೇಳಿಕೆ ನಿರೀಕ್ಷಿಸಿರಲಿಲ್ಲ: ದೇಶಪಾಂಡೆ
ಶೂನ್ಯ ಸಾಧನೆ ಮುಚ್ಚಿಡಲು ಬಿಜೆಪಿಯಿಂದ ಮತ್ತೆ ಮೇಸ್ತಾ ಪ್ರಕರಣ ಮುನ್ನೆಲೆಗೆ: ಭೀಮಣ್ಣ ನಾಯ್ಕ
ಮೇಸ್ತಾ ಪ್ರಕರಣದಲ್ಲಿ ಯುವಕರ ಮೇಲೆ ಮಾತ್ರ ಯಾಕೆ ಕೇಸ್ ದಾಖಲಾಯಿತು, ಕಾಗೇರಿ ಮೇಲೆ ಯಾಕಾಗಿಲ್ಲ? ಡಾ.ಅಂಜಲಿ ಪ್ರಶ್ನೆ