April 28, 2024

Bhavana Tv

Its Your Channel

ಹೆಣ್ಣುಮಕ್ಕಳಿಗೆ ಉದ್ಯೋಗ ಸ್ಥಳ, ಶಿಕ್ಷಣ ಮಾತ್ರವಲ್ಲದೇ ಮನೆಗಳಲ್ಲೂ ಸುರಕ್ಷತೆಯನ್ನು ನೀಡುವ ನಿಟ್ಟಿನಲ್ಲಿ ೧೧೨ ಸಹಾಯವಾಣಿ ಉಪಯುಕ್ತ- ಪೊಲೀಸ್ ವರಿಷ್ಠಾಧಿಕಾರಿ ವಿ.ಧನಂಜಯ

ಮಳವಳ್ಳಿ : ಹೆಣ್ಣುಮಕ್ಕಳಿಗೆ ಅವರ ಉದ್ಯೋಗ ಸ್ಥಳ , ಶಿಕ್ಷಣ ಮಾತ್ರವಲ್ಲದೇ ಮನೆಗಳಲ್ಲೂ ಸುರಕ್ಷತೆಯನ್ನು ನೀಡುವ ನಿಟ್ಟಿನಲ್ಲಿ ೧೧೨ ಸಹಾಯವಾಣಿ ಉಪಯುಕ್ತವಾಗಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿ.ಧನಂಜಯ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪುರ ಪೊಲೀಸರು ಆಯೋಜಿಸಿದ್ದ ತುರ್ತು ಸಂದರ್ಭದಲ್ಲಿ ಸಹಾಯಕ್ಕಾಗಿ ೧೧೨ಕ್ಕೆ ಕರೆ ಮಾಡಿ ಎಂಬ ಸಾರ್ವಜನಿಕ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರಂಭಿಕ ಹಂತದಲ್ಲಿಯೇ ಹಲವು ಸಮಸ್ಯೆಗಳನ್ನು ಬಗೆಹರಿಸಿ ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಸಹಾಯವಾಣಿಯ ಒಂದು ವಾಹನದಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಇರುತ್ತಾರೆ. ಎಲ್ಲ ಕರೆಗಳನ್ನು ಸ್ವೀಕರಿಸಿ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತಾರೆ. ಪಟ್ಟಣದ ವ್ಯಾಪ್ತಿಯಲ್ಲಿ ಕೆಲವೇ ನಿಮಿಷ ಹಾಗೂ ಗ್ರಾಮೀಣ ಭಾಗದಲ್ಲಿ ೧೦ರಿಂದ ೧೫ ನಿಮಿಷಗಳಲ್ಲಿ ಸ್ಥಳಕ್ಕೆ ಸಿಬ್ಬಂದಿಗಳ ಬರಲಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಕೋವಿಡ್ ಸಂದರ್ಭದಲ್ಲಿ ನಾನಾ ಕಾರಣಗಳಿಂದ ಹಲವೆಡೆ ಬಾಲ್ಯವಿವಾಹ, ಪೋಕ್ಸೊ ಪ್ರಕರಣಗಳು ಕಂಡು ಬಂದಿದ್ದು, ಅಂತಹ ಘಟನೆಗಳು ನಿಮ್ಮ ಅಕ್ಕ-ಪಕ್ಕದಲ್ಲಿ ನಡೆಯುತ್ತಿದ್ದರೆ ಮಾಹಿತಿ ನೀಡಬಹುದು. ಅಲ್ಲದೇ ಸ್ಥಳೀಯವಾಗಿ ಜನರಿಗೆ ಬಾಲ್ಯವಿವಾಹದಿಂದ ಆಗುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಎಂದು ಕರೆ ನೀಡಿದರು.
ಡಿವೈಎಸ್ಪಿ ಎಚ್. ಲಕ್ಷ್ಮಿ ನಾರಾಯಣ ಪ್ರಸಾದ್ ಮಾತನಾಡಿ ಈಗಾಗಲೇ ಶಾಲಾ ಕಾಲೇಜು ಸೇರಿದಂತೆ ವಿವಿಧೆಡೆ ವಿದ್ಯಾರ್ಥಿನಿಯರಿಗೆ ಮತ್ತು ಮಹಿಳೆಯರಿಗೆ ಜಾಗೃತಿ ಮೂಡಿಸಲಾಗಿದ್ದು ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಯಾರಾದರೂ ಅನಧಿಕೃತವಾಗಿ ವರ್ಗಾವಣೆ ಮಾಡಿಕೊಂಡರೆ ತಕ್ಷಣವೇ ೧೧೨ ಕರೆ ಮಾಡಿ ಮಾಹಿತಿ ನೀಡಬಹುದು. ಇದ್ದರಿಂದ ಮೋಸವಾಗುವುದು ತಪ್ಪುತ್ತದೆ ಎಂದರು.
ಪುರ ಪೊಲೀಸ್ ಠಾಣೆಯ ಪಿಐ ಎಚ್.ಟಿ.ಸುನೀಲ್ ಕುಮಾರ್, ಪಿಎಸ್ಐ ಹನುಮಂತ ಕುಮಾರ್ ಸೇರಿದಂತೆ ಹಲವರು ಇದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: