May 19, 2024

Bhavana Tv

Its Your Channel

ಒಣ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಒಟ್ಟು 50 ಸಮಗ್ರ ಘನತ್ಯಾಜ್ಯ ನಿರ್ವಹಣಾ ಘಟಕ ಆರಂಭಿಸಲಾಗುವುದು- ಸಚಿವ ಕೆ.ಎಸ್.ಈಶ್ವರಪ್ಪ

ಕಾರ್ಕಳ: ರಾಜ್ಯದಾದ್ಯಂತ ಗ್ರಾಮಗಳಲ್ಲಿ ಸಂಗ್ರಹವಾಗುವ ಒಣ ತ್ಯಾಜ್ಯವನ್ನುಸಮರ್ಪಕವಾಗಿ ವಿಲೇವಾರಿ ಮಾಡಲು ಒಟ್ಟು 50 ಸಮಗ್ರ ಘನತ್ಯಾಜ್ಯ ನಿರ್ವಹಣಾ ಘಟಕಗಳನ್ನು (ಎಂ.ಆರ್.ಎಫ್ ) ಈ ವರ್ಷ ಆರಂಭಿಸಲಾಗುವುದು ಎಂದು ರಾಜ್ಯ ಗ್ರಾಮೀಣಾಭಿವೃಧ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಅವರು ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪದವುನಲ್ಲಿ, ಗ್ರಾಮೀಣಾಭಿವೃಧ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಕಾರ್ಕಳ, ಗ್ರಾಮ ಪಂಚಾಯತ್ ಕಾರ್ಕಳ ಇವರಸಂಯುಕ್ತ ಆಶ್ರಯದಲ್ಲಿ, ಸ್ವಚ್ಛ ಬಾರತ್ ಮಿಷನ್(ಗ್ರಾಮೀಣ) ಯೋಜನೆಯಡಿ ನಿರ್ಮಾಣವಾದ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ನಿಟ್ಟೆ ಗ್ರಾ.ಪಂ ವ್ಯಾಪ್ತಿಯಲ್ಲಿ ಆರಂಭವಾದ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರದ ಕಾರ್ಯವೈಖರಿ ಅತ್ಯುತ್ತಮವಾಗಿದ್ದು, ಇದರಿಂದ ಗ್ರಾಮ ಪಂಚಾಯತ್ ಗಳು ಎದುರಿಸುತ್ತಿರುವ ಘನ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಸಮರ್ಪಕ ಪರಿಹಾರ ದೊರೆಯಲಿದ್ದು, ಇಂತಹ 50 ಘಟಕಗಳನ್ನು ರಾಜ್ಯಾದ್ಯಂತ ಈ ವರ್ಷ ಆರಂಭಿಸಲಾಗುವುದು, ಈ ಘಟಕಗಳ ಸ್ಥಾಪನೆಯಿಂದ ಸ್ಥಳೀಯ ಜನತೆಗೆ ಉದ್ಯೋಗ ಸೃಷ್ಠಿಯಾಗುವ ಜೊತೆಗೆ ಪ್ರಧಾನಮಂತ್ರಿಗಳ ಸ್ವಚ್ಛ ಭಾರತ್ ಕಲ್ಪನೆಯ ಕನಸನ್ನು ರಾಜ್ಯದಲ್ಲಿ ಸಾಕಾರಗೊಳಿಸಲಾಗುವುದು ಎಂದರು.
ದೇಶದ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕ ವಲಯದಿಂದ ಪ್ರಪ್ರಥಮವಾಗಿ ನಿರ್ಮಾಣಗೊಂಡಿರುವ ನಿಟ್ಟೆಯ ಗ್ರಾ.ಪಂ ವ್ಯಾಪ್ತಿಯ ಎಂ.ಆರ್.ಎಫ್ ಘಟಕವನ್ನು ರಾಜ್ಯದ ಎಲ್ಲಾ ಜಿ.ಪಂ. ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಆಗಮಿಸಿ ವೀಕ್ಷಿಸಿ , ತಮ್ಮ ಜಿಲ್ಲೆಗಳಲ್ಲಿ ಇದನ್ನು ಅಳವಡಿಸಿಕೊಳ್ಳವಂತೆ ತಿಳಿಸಿದ ಸಚಿವರು, ದೆಹಲಿಯಲ್ಲಿ ನಡೆಯವ ಎಲ್ಲಾ ರಾಜ್ಯಗಳ ಗ್ರಾಮೀಣಾಭಿವೃದ್ಧಿ ಸಚಿವರ ಸಭೆಯಲ್ಲಿ ಈ ಎಂ.ಆರ್.ಎಫ್ ಘಟಕದ ಕಾರ್ಯದ ಕುರಿತು ಪ್ರದರ್ಶಿಸಿ, ಕೇಂದ್ರ ಸರ್ಕಾರದಿಂದ ಈ ಘಟಕಗಳ ಆರಂಭಕ್ಕೆ ಆರ್ಥಿಕ ನೆರವು ಪಡೆಯಲಾಗುವುದು ಎಂದರು.
ಜಿಲ್ಲೆಯಲ್ಲಿ ಥರ್ಮಾಕೋಲ್ ತ್ಯಾಜ್ಯ ವಿಲೇವಾರಿ ಸಮಸ್ಯೆಯ ಕುರಿತಂತೆ, ಇದನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು 50 ಲಕ್ಷ ರೂ ವೆಚ್ಚದಲ್ಲಿ ಘಟಕ ಸ್ಥಾಪಿಸಲು ಶೀಘ್ರದಲ್ಲಿ ಅನುಮತಿ ನೀಡಲಾಗುವುದು , ಹೆಬ್ರಿ ತಾಲೂಕು ಪಂಚಾಯತ್ ನ ನೂತನ ಕಟ್ಟಡಕ್ಕೆ 2 ಕೋಟಿ ಅನುದಾನ ಹಾಗೂ ಜಿಲ್ಲೆಯ ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ಕೇAದ್ರದ ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಕೇಂದ್ರ ಸರ್ಕಾರ ಸ್ವಚ್ಛ ಭಾರತ್ ಮಿಷನ್ ಮೂಲಕ ದೇಶದ ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶಗಳಲ್ಲಿ ಶೌಚಾಲಯಗಳ ನಿರ್ಮಾಣ ಸೇರಿದಂತೆ ಸಂಗ್ರಹವಾಗುವ ಎಲ್ಲಾ ರೀತಿಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಕುರಿತ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಿದೆ. ಹಸಿ ಕಸವನ್ನು ಗೊಬ್ಬರವನ್ನಾಗಿ ಮತ್ತು ಒಣ ಕಸವನ್ನು ಸಂಪನ್ಮೂಲವನ್ನಾಗಿ ಬಳಕೆ ಮಾಡುವ ಬಗ್ಗೆ ಯೋಜನೆಗಳನ್ನು ರೂಪಿಸಿದ್ದು, ನಿಟ್ಟೆಯ ಎಂ.ಆರ್.ಎಫ್ ಘಟಕ ದೇಶಕ್ಕೇ ಮಾದರಿಯಾಗಿದೆ ಎಂದ ಅವರು, ಕಾರ್ಕಳ ಕ್ಷೇತ್ರದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಕೇಂದ್ರದಿAದ ಹೆಚ್ಚಿನ ಅನುದಾನ ಮಂಜೂರಾಗಿದ್ದು, ಸಿ.ಆರ್.ಎಫ್ ನಿಧಿ ಮೂಲಕ ರಸ್ತೆಗಳ ಅಭಿವೃದ್ದಿ, ಪ್ರಧಾನ ಮಂತ್ರಿ ಗ್ರಾಮ ಸಡಕ್ ರಸ್ತೆಗಳ ನಿರ್ಮಾಣ,ಒಳಾಂಗಣ ಕ್ರೀಡಾಂಗಣ ಮತ್ತು ಇತ್ತಿಚೆಗೆ
ಮಾಳ ಗೇಟ್ ನಿಂದ ಕಾರ್ಕಳದವರೆಗೆ ಚತುಷ್ಪಥಗೊಳಿಸಲು 180 ಕೋಟಿ ರೂ ಬಿಡುಗಡೆಗೊಳಿಸಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಮಾತನಾಡಿ, ಈ ಎಂ.ಆರ್.ಎಫ್ ಘಟಕ ಆರಂಭಕ್ಕೆ ಸಾಕಷ್ಟು ವಿರೋಧಗಳು ಬಂದರೂ ಸಾರ್ವಜನಿಕರ ಸಹಕಾರದಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ,
ಕಾರ್ಕಳ ತಾಲೂಕಿನಲ್ಲಿ ಸಂಗ್ರಹವಾಗುವ ದ್ರವ ತ್ಯಾಜ್ಯ ಮತ್ತು ಮಲ ತ್ಯಾಜ್ಯದ ಸಮರ್ಪಕ ನಿರ್ವಹಣೆ ಸವಾಲಾಗಿದ್ದು, ಈ ತ್ಯಾಜ್ಯದ ಸದ್ಬಳಕೆ ಮಾಡುವ ಯೋಜನಾ ಪ್ರಕ್ರಿಯೆ ನಡೆಯುತ್ತಿದೆ , ಕಾರ್ಕಳ ತಾಲೂಕು ಎಲ್ಲಾ ರೀತಿಯಲ್ಲೂ ಪರಿಪೂರ್ಣ ಆಗುವಂತೆ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ, ಅಭಿವೃದ್ಧಿ ಕಾರ್ಯಕ್ರಮಗಳ ಪುಸ್ತಕ ಬಿಡುಗಡೆ, ವಸ್ತು ಪ್ರದರ್ಶನ ಮಳಿಗೆಗಳಿಗೆ ಚಾಲನೆ, ಗೋಬರ್ ಧನ್ ಘಟಕದ ಉದ್ಘಾಟನೆ ನಡೆಯಿತು.

ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ವಿಧಾನ ಪರಿಷತ್ ಶಾಸಕ ಮಂಜುನಾಥ್ ಭಂಡಾರಿ, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಕರ್ನಾಟಕ ಗೇರು ಅಭಿವೃಧ್ದಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ,ನಿಟ್ಟೆ ಗ್ರಾ.ಪಂ.ಅಧ್ಯಕ್ಷ ಸತೀಶ್ ಪೂಜಾರಿ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಮಂಗಳೂರು ರಾಮಕೃಷ್ಣ ಮಿಷನ್ ನ ಸ್ವಾಮಿ ಏಕಗಮ್ಯಾನಂದ ಜೀ ಹಾಜರಿದ್ದರು.

ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಸ್ವಾಗತಿಸಿದರು. ಕಾರ್ಕಳ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಗುರುದತ್ ವಂದಿಸಿದರು.

ವರದಿ:ಅರುಣ ಭಟ್ಕ ಕಾರ್ಕಳ

error: