April 26, 2024

Bhavana Tv

Its Your Channel

ಹನುಮಂತ (ಪುತ್ತು) ಪೈ ರವರ ಶ್ರದ್ದಾಂಜಲಿ ಸಭೆ

ಭಟ್ಕಳ: ಶರಣರ ಗುಣವನ್ನು ಮರಣದಲ್ಲಿ ನೋಡು ಎನ್ನುವ ದಾಸೋಕ್ತಿ ಇದೆ. ಅದರಲ್ಲಿ ಭಟ್ಕಳದ ಪುತ್ತಣ್ಣ ಸಂಸಾರಿಯಾಗಿದ್ದು ಸನ್ಯಾಸಿಯಾಗಿದ್ದು ಎಲ್ಲಾ ಸಮುದಾಯವನ್ನು ಪ್ರೀತಿಯಿಂದ ಕಂಡವರು ಎಂದು ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ ಹೇಳಿದರು.

ಅವರು ಭಟ್ಕಳದಲ್ಲಿ ಹನುಮಂತ ಎಮ್ ಪೈ(ಪುತ್ತಣ್ಣ) ಅವರ ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಯಾರು ಶರಣರಾಗುತ್ತಾರೆ, ಯಾರು ಜವಾಬ್ದಾರಿಯನ್ನು ಪಾಲಿಸುತ್ತಾರೆ. ಅವರ ಜೀವನವನ್ನು ಮರಣದಲ್ಲಿ ನೋಡಬೇಕು. ಮರಣದಲ್ಲಿ ಎರಡು ವಿಧವಿದ್ದು ಅದರಲ್ಲಿ ಭಗವದ್‌ಇಚ್ಚೆಯ ಮರಣ ಒಂದು. ಅದು ನಮ್ಮ ಪುತ್ತಣ್ಣನಿಗೆ ಲಭಿಸಿದೆ. ಅವರಿಗೆ ಉದ್ದಿಮೆ, ವ್ಯಾಪಾರಗಿಂತ ಹೆಚ್ಚು ಸಮಾಜದ ಕುರಿತು ಕಾಳಜಿ ಇತ್ತು. ಭಗವಂತನ ಸೇವೆ ಮಾಡುತ್ತಾ ಅವನ ಪಾದ ಸೇರುವದು ಭಗವಂತನ ಕೃಪೆ ಇದ್ದವರಿಗೆ ಮಾತ್ರ ಲಭ್ಯ. ಇಂದು ಪುತ್ತಣ್ಣ ನಮ್ಮ ಜೊತೆ ಇಲ್ಲದಿರಬಹುದು. ಆದರೆ ಅವರು ರೂಪಿಸಿದ ಆದರ್ಶ, ಅವರು ಹಾಕಿ ಕೊಟ್ಟ ಮಾರ್ಗದರ್ಶನ, ಸಂದೇಶ ಅವರು ನಿರ್ಮಿಸಿದ ಇತಿಹಾಸ ನಮ್ಮ ಜೊತೆ ಇದ್ದು ಅದನ್ನು ನಾವು ಪಾಲಿಸಬೇಕಾಗಿದೆ. ವ್ಯಾಪಾರ ಮತ್ತು ಉದ್ದಿಮೆ ಜಿಎಸ್‌ಬಿ ಸಮುದಾಯಕ್ಕೆ ರಕ್ತಗತವಾಗಿ ಬಂದ ಗುಣ ಅದರ ಜೊತೆಯಲ್ಲಿ ಸಮಾಜ ಮತ್ತು ಇತರ ಸಮುದಾಯವನ್ನು ಪ್ರೀತಿಸುವ ಗುಣವೂ ಜಿಎಸ್‌ಬಿ ಸಮುದಾಯದಲ್ಲಿ ಮಾತ್ರ ಇದೆ. ಅಂದು ಕಷ್ಟದ ಸಮಯದಲ್ಲಿ ಆರ್‌ಎಸ್‌ಎಸ್ ನಲ್ಲಿ ಸಂಚಾಲಕನಾಗಿ ಕೆಲಸ ಮಾಡುವಾಗ ಅಂದು ಊಟ ತಿಂಡಿ ನೀಡಿ ಉಪಚರಿಸಿದವರು ಜಿಎಸ್‌ಬಿ ಸಮಾಜದವರು ಮಾತ್ರ. ಮರಣದ ನಂತರ ಕೆಲವರು ಮತ್ತೆ ಹುಟ್ಟಿ ಬರಲಿ ಎಂದು ಆಶಿಸಿದರೆ ಇನ್ನು ಕೆಲವರು ಮೋಕ್ಷ ದೊರೆಯಲಿ ಎನ್ನುತ್ತಾರೆ. ಆದರೆ ಸಮಾಜ ಸುಧಾರಕ ಪುತ್ತಣ್ಣ ಮತ್ತೆ ಹುಟ್ಟಿ ಬರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ ಎಂದರು.
ಶಾಸಕ ಸುನೀಲ ನಾಯ್ಕ ಮಾತನಾಡಿ ಪುತ್ತು ಪೈ ಸರಳ ಸ್ವಭಾವದವರಾಗಿದ್ದು ಎಲ್ಲರನ್ನು ಪ್ರೀತಿಸುವ ಗುಣ ಹೊಂದಿದ್ದರು. ಅಂದು ಚುನಾವಣೆ ಸಮಯದಲ್ಲಿ ಅವರು ತೋರಿದ ಪ್ರೀತಿ, ನೀಡಿದ ಸಹಕಾರ ಅನನ್ಯ ಎಂದರು.
ಇದೇ ಸಂದರ್ಭದಲ್ಲಿ ಪುತ್ತು ಪೈ ಸಹೋದರ ಸತೀಶ ಪೈ, ಶಿರಾಲಿ ಜಿಎಸ್‌ಬಿ ಸಮಾಜದ ಮುಖಂಡ ಡಿ.ಜೆ ಕಾಮತ, ಭಟ್ಕಳ ಶ್ರೀ ನಾಗಯಕ್ಷೇ ಧರ್ಮದೇವಿ ಸಂಸ್ಥಾನದ ರಾಮದಾಸ ಪ್ರಭು, ಹಾಂಗ್ಯೋ ಐಸ್‌ಕ್ರೀಂ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ ಪೈ, ಹುಬ್ಬಳ್ಳಿ ಜಿಎಸ್‌ಬಿ ಸಮಾಜದ ಅಧ್ಯಕ್ಷ ಪವನ ಪ್ರಭು ಮಾತನಾಡಿದರು. ಭಟ್ಕಳ ಜಿಎಸ್‌ಬಿ ಸಮಾಜದ ಅಧ್ಯಕ್ಷ ಸುಬ್ರಾಯ ಕಾಮತ, ನಾಗೇಶ ಕಾಮತ, ಗೋಕರ್ಣದ ಸುನೀಲ ಪೈ, ಅಚ್ಚುತ ಕಾಮತ, ಸುರೇಶ ವಾಸುದೇವ ಪ್ರಭು ಇತರರು ಇದ್ದರು.
ಆರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪುತ್ತು ಪೈ ಮನೆಗೆ ಬೇಟಿ ನೀಡಿ ಸಹೋದರರಿಗೆ ಸಾಂತ್ವಾನ ಹೇಳಿ, ಪುತ್ತು ಪೈ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ನಮಿಸಿದರು,

error: