ಭಟ್ಕಳ: ಇಲ್ಲಿನ ಆನಂದ ಆಶ್ರಮ ಕಾನ್ವೆಂಟ್ ಶಿಕ್ಷಣ ಸಂಸ್ಥೆಯ ಸ್ವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಮುಂಡಳ್ಳಿಯ ಅವರ್ ಲೇಡಿ ಆಫ್ ಲೂರ್ಡ್ಸ ಚರ್ಚನ ಪ್ಯಾರಿಸ್ ಪ್ರೀಸ್ಟ್ ರೆ. ಫಾ. ಪ್ರೇಮಕುಮಾರ್ ಡಿಸೋಜ ಅವರು ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ಪ್ರಾಂತದ ಸುಪೀರಿಯರ್ ರೆ. ಸಿಸ್ಟರ್ ಕ್ಲಾರಾ ಮೆನೆಜಸ್ ಮಾತನಾಡಿ ಆನಂದ ಆಶ್ರಮ ಕಾನ್ವೆಂಟ್ ಶಾಲೆಯು ಈ ಭಾಗದ ಜನತೆಗೆ ಉತ್ತಮ ಶಿಕ್ಷಣ ನೀಡುವ ಸದುದ್ದೇಶದಿಂದ ಆರಂಭವಾಗಿದ್ದು ಇಂದು ಹಲವಾರು ಶಿಕ್ಷಕರ, ಊರ ನಾಗರೀಕರ ಹಾಗೂ ಪಾಲಕರ ಸಹಕಾರದಿಂದ ಹೆಮ್ಮರವಾಗಿ ಬೆಳೆದಿದೆ. ಪ್ರತಿಯೋರ್ವರಿಗೂ ಭಗವಂತ ಉತ್ತಮ ಬುದ್ಧಿಮತ್ತೆಯನ್ನು, ಜೀವನವನ್ನು ಕರುಣಿಸುತ್ತಾನೆ. ಜೀವನದಲ್ಲಿ ದೊರಕಿದ ಈ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಯಶಸ್ಸನ್ನು ಪಡೆಯುವಂತಾಗಬೇಕು ಎಂದರು. ಯಾರೂ ಕೂಡಾ ಸೋಲಿಗೆ ಹೆದರದೇ ಮುಂದುವರಿದಲ್ಲಿ ಯಶಸ್ಸು ಸಾಧ್ಯ ಎಂದೂ ಅವರು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಸ್ವರ್ಣ ಮಹೋತ್ಸವದ ಸುಂದರ ಲಾಂಛನ ಬಿಡುಗಡೆಗೊಳಿಸಿದ ಮಂಗಳೂರಿನ ಅಸುರ್ಲೈನ್ ಫ್ರಾನ್ಸಿಸ್ಕಾನ್ ಉಪ ಕಾರ್ಯದರ್ಶಿ ರೆ. ಸಿಸ್ಟರ್ ಜೂಲಿಯಾನಾ ಡಿಸೋಜ ಮಾತನಾಡಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಲಿತು ಅನೇಕ ಉನ್ನತ ಹುದ್ದೆಯಲ್ಲಿರುವವರು ಹಾಗೂ ಅನೇಕ ವಿದ್ಯಾರ್ಥಿಗಳು ಉನ್ನತ ವ್ಯಾಸಾಂಗ ಮಾಡುತ್ತಿರುವುದನ್ನು ನೋಡಿ ನಮಗೇ ಅತ್ಯಂತ ಸಂತಸವಾಗುತ್ತದೆ ಎಂದರು.
ಸನ್ಮಾನ ಸ್ವೀಕರಿಸಿದ ಶಾಲೆಯ ಪ್ರಥಮ ಬ್ಯಾಚಿನ ವಿದ್ಯಾರ್ಥಿಗಳಾದ ಅಫ್ತಾಬ್ ಹುಸೇನ್ ಕೋಲಾ, ಸಲ್ಮಾನ್ ಅಹಮ್ಮದ್ ಮಾತನಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಅತಿಥಿಗಳಾಗಿ ರೆ. ಸಿಸ್ಟರ್ ಬರ್ಬರಾ ಫ್ರಾಂಕೋ, ರೆ. ಸಿಸ್ಟರ್ ಬಿಬಿಯಾನಾ ನೋರೊನ್ನ ಹಾಗೂ ಶಿಕ್ಷಕ-ರಕ್ಷಕ ಸಮಿತಿಯ ಉಪಾಧ್ಯಕ್ಷ ನಾಗರಾಜ ಈ.ಎಚ್., ಸಿಸ್ಟರ್ ಲೂಸಿ ಡಿಸೋಜ, ಅನಿತಾ ಪಿಂಟೋ, ವಿನಿತಾ ಡಿಸೋಜ, ಸಿಸ್ಟರ್ ಐರಿನ್ ಮಥಾಯಿಸ್ ಮುಂತಾದವರು ಉಪಸ್ಥಿತರಿದ್ದರು.
ಪ್ರಥಮವಾಗಿ 7ನೇ ತರಗತಿಯ ಬ್ಯಾಚ್ನಲ್ಲಿ ಉತ್ತೀರ್ಣರಾದ ಅಫ್ತಾಬ್ ಹುಸೇನ್ ಕೋಲಾ, ಸಲ್ಮಾನ್ ಅಹಮ್ಮದ್, ನದೀಮ್ ಅಹಮ್ಮದ್ ಮೊಹಮ್ಮದ್ ಗೌಸ್, ಸೆಬೆಸ್ಟಿನ್ ಜಾನಿ ಡಿಸೋಜ, ಅಸ್ಮಾ ರ್ಹಾನ್ ಡಿ. ಅಬ್ದುಲ್ ವಹಾಬ್, ಫರ್ಜಾನಾ ಅಬ್ದುಲ್ ಹಾದಿ ಸೌದಾಗರ್, ಪರ್ವೀನ್ ಮೊಹಮ್ಮದ್ ಯುಸುಫ್ ಚಿತ್ರಗಿ ಇವರುಗಳನ್ನು ಸ್ವರ್ಣ ಮಹೋತ್ಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಆನಂದ ಆಶ್ರಮ ಕಾನ್ವೆಂಟ್ ಶಾಲೆಯ ಮುಖ್ಯಾಧ್ಯಾಪಕಿ ರೆ. ಸಿಸ್ಟರ್ ಸರಿತಾ ಥೋರಸ್ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿಗಳ ಬಹು ಸಂಸ್ಕೃತಿಯ ಸ್ವಾಗತ ನೃತ್ಯ ಎಲ್ಲರ ಗಮನ ಸೆಳೆಯಿತು. ಸಿಸ್ಟರ್ ವಿನುತಾ ಡಿಸೋಜ 50 ವರ್ಷಗಳಿಂದ ಶಾಲೆ ನಡೆದುಬಂದ ವರದಿಯನ್ನು ಪ್ರಸ್ತುತ ಪಡಿಸಿದರು. ಸಿಸ್ಟರ್ ಜೂಲಿಯಟ್ ಹಾಗೂ ಇತರರು ನಿರ್ವಹಿಸಿದರು.
More Stories
ಅಕ್ಷಯ ತೃತೀಯ ದಿನದಂದು ಮನೆಗೆ ನುಗಿದ ಕಳ್ಳರು:
ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ನ ೪೧ ನೇ ವಾರ್ಷಿಕ ಅಥ್ಲೆಟಿಕ್ ಮೀಟ್
ಸಿದ್ದಾರ್ಥ ಆಂಗ್ಲ ಮಾದ್ಯಮ ಪ್ರೌಢಶಾಲೆ ಶಿರಾಲಿ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಉತ್ತಮ ಸಾಧನೆ