April 26, 2024

Bhavana Tv

Its Your Channel

ಹೊನ್ನಾವರದ ಪ್ರಭಾತವನ ಉದ್ಯಾನವನಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ನಿವಾಸಿಗಳ ಅಗ್ರಹ

ಹೊನ್ನಾವರ ಪಟ್ಟಣದ ಪ್ರಭಾತನಗರದ ಫಾರೆಸ್ಟ್ ಕಾಲೋನಿ ಮತ್ತು ಕೆ ಎಚ್ ಬಿ ಕಾಲೋನಿಯ ಮದ್ಯದಲ್ಲಿರುವ ಅರಣ್ಯ ಇಲಾಖೆಯಿಂದ ನಿರ್ಮಿಸಿದ ಪ್ರಭಾತವನ ಉದ್ಯಾನವನ ವ್ಯವಸ್ಥಿತ ನಿರ್ವಹಣೆ ಕೊರತೆಯಿಂದ ದಿನೇ ದಿನೇ ಸೋರಗುತ್ತಿದ್ದು ಉದ್ಯಾನವನಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಇಲ್ಲಿಯ ನಿವಾಸಿಗಳ ಅಗ್ರಹವಾಗಿದೆ.

ಇಲ್ಲಿಯ ಪ್ರಭಾತನಗರ, ಫಾರೆಸ್ಟ್ ಕಾಲೋನಿ, ಕೆ ಎಚ್ ಬಿ ಕಾಲೋನಿ ಮತ್ತು ರಜತಗಿರಿ ಒಳಗೊಂಡ ಪ್ರದೇಶಗಳು ಹೆಚ್ಚಿನ ಜನವಸತಿ ಪ್ರದೇಶಗಳಾಗಿದ್ದು ಇಲ್ಲಿ ಯಾವದೇ ಉದ್ಯಾನವನ ಇಲ್ಲದಿರುವದನ್ನು ಮನಗಂಡು ಅರಣ್ಯ ಇಲಾಖೆಯವರು ತಮ್ಮ ಸ್ಥಳದಲ್ಲಿ 2015 ರಲ್ಲಿ ಉದ್ಯಾನವನ ನಿರ್ಮಿಸಿ ಉತ್ತಮ ಜಾತಿಯ ಗಿಡಗಳನ್ನು ಹಚ್ಚಿ ಸಾರ್ವಜನಿಕರ ಉಪಯೋಗಕ್ಕಾಗಿ ಬಿಡಲಾಯಿತು. ಪ್ರಾರಂಭದಲ್ಲಿ ಆಗಿನ ಡಿ ಸಿ ಎಫ್ ಶ್ರೀ ಎಸ್ ರಮೇಶ್ ರವರ ಮುತುವರ್ಜಿಯಲ್ಲಿ ಉದ್ಯಾನವನ ಉತ್ತಮವಾಗಿತ್ತು. ಅವರ ವರ್ಗಾವಣೆಯ ನಂತರ ನಿರ್ವಹಣೆ ಕೊರತೆಯಿಂದ ಉತ್ತಮ ಜಾತಿಯ ಗಿಡಗಳು ನಾಶವಾಗುತ್ತ ಹೋದವು. ಪ್ರತಿವರ್ಷ ಉದ್ಯಾನವನದ ಗಿಡಗಂಟಿಗಳನ್ನು ತೆರವು ಗೊಳಿಸುವದೇ ಕಷ್ಟದ ಕೆಲಸವಾಗುತ್ತಿದೆ . ಆದರೂ ಸಾರ್ವಜನಿಕರ ಉಪಯೋಗಕ್ಕಾಗಿ ಸುತ್ತಮುತ್ತಲಿನ ನಿವಾಸಿಗಳ ನೆರವಿನಿಂದ ಮತ್ತು ಪಟ್ಟಣ ಪಂಚಾಯತ ಸಹಕಾರದಿಂದ ಈ ವರ್ಷವೂ ಗಿಡ ಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛಮಾಡಲಾಯಿತು. ಸುತ್ತಲಿನ ತಂತಿ ಬೇಲಿ ಜೀರ್ಣಾವಸ್ತೆಗೆ ಬಂದಿದ್ದು ಉಳಿದ ಗಿಡಗಳು ದನಕರುಗಳ ಪಾಲಾಗುತ್ತಿದೆ. ಉದ್ಯಾನವನಕ್ಕೆ ಮೂಲಭೂತ ಸೌಕರ್ಯಗಳಾದ ವಾಕಿಂಗ್ ಪಾತ್ ಗೆ ನಿವಾಸಿಗಳ ಮನವಿಯ ಮೇರೆಗೆ ಇಂಟರ್ ಲಾಕ್ ಅರ್ಧ ಮಾತ್ರ ಅಳವಡಿಸಿದ್ದು ಉಳಿದ ಭಾಗ ಆಗಬೇಕಾಗಿದೆ. ಮಳೆಗಾಲದಲ್ಲಿ ಕೆಲವರು ಜಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದು ಉಂಟು. ಬೀದಿ ದೀಪ, ಮಕ್ಕಳ ಆಟಿಕೆ, ಹಿರಿಯ ನಾಗರಿಕರಿಗೆ ವ್ಯಾಯಾಮದ ಪರಿಕರ ಅವಶ್ಯಕತೆ ಇದೆ. ಇಲ್ಲಿಯ ಹಿರಿಯ ನಾಗರಿಕರು ಬೆಳಿಗ್ಗೆ ಮತ್ತು ಸಂಜೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆದ್ದಾರಿಯಲ್ಲಿ ನಡೆದು ಬದಿಯ ಕಟ್ಟೆಯ ಮೇಲೆ ಕುಳಿತಿರುವದನ್ನು ನೋಡಬಹುದು.ಈ ಕುರಿತು ಮಾನ್ಯ ಶಾಸಕರಲ್ಲಿ, ಅರಣ್ಯ ಇಲಾಖೆ ಮತ್ತು ಪಟ್ಟಣ ಪಂಚಾಯತಕ್ಕೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದು ಇರುತ್ತದೆ.
ಉದ್ಯಾನವನದಲ್ಲಿರುವ ಪ್ಯಾರಗೋಲ್ ದಲ್ಲಿ ಕಾಲೇಜು ವಿದ್ಯಾರ್ಥಿಗಳು ಜನ್ಮದಿನ ಎಂದು ಕೇಕ್ ಕತ್ತರಿಸಿ ಪ್ಲಾಸ್ಟಿಕ್ ತ್ಯಾಜ್ಯ ಅಲ್ಲಿಯೇ ಬಿಸಾಕಿ ಹೋಗುತ್ತಿದ್ದು ಸಮಿತಿಯ ಅಧ್ಯಕ್ಷರಾದ ನಿವೃತ್ತ ಆರ್ ಎಫ್ ಓ ಶ್ರೀ ಜಿ ವಿ ನಾಯ್ಕ್ ಇವರು ಅದನ್ನು ಸ್ವಚ್ಛ ಮಾಡುವದೇ ನಿತ್ಯದ ಕೆಲಸವಾಗಿದೆ.
ಪ್ರಭಾತವನ ಉದ್ಯಾನವನ ದಿನದಿಂದ ದಿನಕ್ಕೆ ಕಳೆಗುಂದುತ್ತಿರುವದು ವಿಷಾದದ ಸಂಗತಿಯಾಗಿದೆ. ಕಾಲಕಾಲಕ್ಕೆ ಉದ್ಯಾನವನ ಸ್ವಚ್ಛಗೊಳಿಸಿ ಸುಂದರವಾಗಿ ಇರಿಸುವದು ಸಂಬAಧಪಟ್ಟ ಅರಣ್ಯ ಇಲಾಖೆಯ ಜವಾಬ್ದಾರಿಯಾಗಿದೆ. ಪಟ್ಟಣ ಪಂಚಾಯತ್ ಕೂಡ ಇಲ್ಲಿಯ ನಿವಾಸಿಗಳ ಆರೋಗ್ಯದ ಹಿತದ್ರಷ್ಟಿಯಿಂದ ಉದ್ಯಾನವನದ ಅಭಿವೃದ್ಧಿಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಅಗ್ರಹಿಸುತ್ತಿದ್ದಾರೆ.

error: