ಹೊನ್ನಾವರ ತಾಲೂಕಿನ ಹಿರೇಬೈಲ್ ಹತ್ತಿರದಲ್ಲಿರುವ “ಮುಕ್ತಿಹೊಳೆ ಜಲಪಾತ” ವು ಮುಂಗಾರು ಮಳೆಗೆ ಮೈದುಂಬಿ ಹರಿಯುತ್ತಿದ್ದು, ನಯನ ಮನೋಹರವಾಗಿ ಕಂಗೊಳಿಸುತ್ತಿದೆ.
ಇದು ಪಶ್ಚಿಮ ಘಟ್ಟಗಳ ಕಡಿದಾದ ಮತ್ತು ದಟ್ಟವಾದ ಹಸಿರು ಕಾಡಿನಲ್ಲಿದೆ. ಅಘನಾಶಿನಿ ನದಿಯ ಉಪನದಿ ಈ ಸುಂದರ ಜಲಪಾತವನ್ನು ಸೃಷ್ಟಿಸಿದೆ. ಈ ಉಪನದಿಯು ಮುಕ್ತಿಹೊಳೆ ಜಲಪಾತದ ಕೆಳಗೆ ಸುಮಾರು ಎಂಟು ಕಿಲೋಮೀಟರ್ ಹರಿದು, ಗುಂಡಬಾಳ ನದಿಯನ್ನು ಕೂಡಿ ನಂತರ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಈ ಜಲಪಾತದಲ್ಲಿ ಐದು ಹಂತದಲ್ಲಿ ನೀರಿನ ಧೂಮುಕುವಿಕೆ ಹಾಗೂ ಜಲಪಾತದಿಂದ ರಚಿತವಾದ ಕೊಳವು ನೋಡಲು ರಮಣೀಯವಾಗಿದೆ. ಈ ಸ್ಥಳವು ಬಹಳಷ್ಟು ಜನರಿಗೆ ತಿಳಿದಿಲ್ಲ. ಈ ಜಲಪಾತಕ್ಕೆ ಪ್ರಯಾಣಿಸುವುದು ತುಂಬಾ ಕಷ್ಟ. ಏಕೆಂದರೆ ಜಲಪಾತ ತಲುಪಲು ಐದರಿಂದ ಆರು ಕಿಲೋಮೀಟರ್ ದೂರವನ್ನು, ಸುತ್ತಲೂ ದಟ್ಟವಾದ ಕಾಡಿನಲ್ಲಿ ನದಿಯಲ್ಲೇ ಚಾರಣ ಮಾಡಬೇಕು.
ಮೊಬೈಲ್ ನೆಟ್ವರ್ಕ್ ಸಿಗದ ಪ್ರದೇಶವಾದ್ದರಿಂದ ಸ್ಥಳೀಯರ ಮಾರ್ಗದರ್ಶನ ಪಡೆದು ಚಾರಣ ಮಾಡುವುದು ಸೂಕ್ತ. ಹೊನ್ನಾವರ ಅಥವಾ ಕುಮಟಾದಿಂದ ಬರುವವರು, ಗುಂಡಬಾಳ ಅಥವಾ ಅರೆಅಂಗಡಿ ಮಾರ್ಗದಲ್ಲಿ ಪ್ರಯಾಣಿಸಿ, ಹಿರೇಬೈಲ್ ಬಸ್ಟಾಪ್ ಬಳಿ ವಾಹನ ನಿಲ್ಲಿಸಿ ಕಾಲ್ನಡಿಗೆ ಆರಂಭಿಸಬೇಕು.
ಇನ್ನೂ ಗುಂಡಿಬೈಲ್ – ಹರಡಸೆ ಮಾರ್ಗದಲ್ಲಿ ಪ್ರಯಾಣಿಸಿದರೆ, ಕಡ್ಕಲ್ ಬ್ರಿಡ್ಜ್ ಬಳಿ ವಾಹನ ನಿಲ್ಲಿಸಿ ನಡಿಗೆ ಪ್ರಾರಂಭಿಸಬೇಕು.
ಚಾರಣಪ್ರಿಯರು ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಹಾಗೂ ಇನ್ನಿತರ ವಸ್ತುಗಳನ್ನು ಕೊಂಡೊಯ್ಯದೆ, ಪರಿಸರಕ್ಕೆ ಪೂರಕವಾಗಿ ವರ್ತಿಸಿ, ಜಲಪಾತದ ಸೊಬಗನ್ನು ಸವಿಯಬೇಕೆಂಬುದೇ ಸ್ಥಳೀಯರ ಆಶಯವಾಗಿದೆ.
ವರದಿ: ನರಸಿಂಹ ನಾಯ್ಕ್ ಹರಡಸೆ.
More Stories
ಬಿ.ಎಸ್.ಎಸ್. ಮೈಕ್ರೊ ಪೈನಾನ್ಸ ಲಿಮೆಟಿಡ್ ವತಿಯಿಂದ ಪ್ರವಾಹ ಸಂತ್ರಸ್ಥರಿಗೆ ಪರಿಹಾರ ವಿತರಣೆ
ಮನೆಗೆ ಆಕಸ್ಮಿಕವಾಗಿ ಬೆಂಕಿ
ಹೊನ್ನಾವರದ ಎಸ್.ಡಿ.ಎಂ.ಪದವಿ ಕಾಲೇಜಿನ ಇಂಗ್ಲಿಷ್ ಲಿಟರರಿ ಕ್ಲಬ್ ಆಶ್ರಯದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕೈಬರಹ ಪುಸ್ತಕ ‘ಬ್ಲೂಮ್’ ಬಿಡುಗಡೆ.