May 13, 2024

Bhavana Tv

Its Your Channel

ಅನುಕಂಪ ಆಧಾರಿತ ನೌಕರಿ ಕೊಡಿಸುವುದಾಗಿ ಭರವಸೆ ನೀಡಿ ಕೊನೆಗೂ ನಿರಾಸೆ ಮೂಡಿಸಿದ ಶಾಸಕ.
ಪತ್ರಿಕಾಗೋಷ್ಟಿಯಲ್ಲಿ ಕಣ್ಣಿರಿಟ್ಟ ಶಶಿಕಲಾ ಗಣಪತಿ ಅಂಬಿಗ.

ಹೊನ್ನಾವರ: ತಾಲೂಕಿನ ಕಾಸರಕೋಡ ಗ್ರಾ.ಪಂ. ವ್ಯಾಪ್ತಿಯ ಅಂಬಿಗರಕೇರಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಶಾಸಕ ಸುನೀಲ್ ನಾಯ್ಕ ಅವರು ಅನುಕಂಪ ಆಧಾರಿತ ನೌಕರಿ ಕೊಡಿಸುವುದಾಗಿ ಭರವಸೆ ನೀಡಿ ಕೊನೆಗೂ ನಮಗೆ ನಿರಾಸೆ ಮೂಡಿಸಿದ್ದಾರೆ' ಎಂದು ಶಶಿಕಲಾ ಗಣಪತಿ ಅಂಬಿಗ ಕಣ್ಣೀರು ಹಾಕಿದರು. ಪಟ್ಟಣದ ಖಾಸಗಿ ಹೋಟೇಲ್‌ನಲ್ಲಿ ಈ ಕುರಿತು ಮೃತ ಅಂಗನವಾಡಿ ಕಾರ್ಯಕರ್ತೆ ನೇತ್ರಾವತಿ ಅಂಬಿಗ ಅವರ ಸಹೋದರಿ ಶಶಿಕಲಾ ಗಣಪತಿ ಅಂಬಿಗ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ನನ್ನ ಅಕ್ಕ ನೇತ್ರಾವತಿ ಅಂಬಿಗ ಅವರು ಅಂಬಿಗರಕೇರಿ ಅಂಗನವಾಡಿ ಕಾರ್ಯಕರ್ತೆ ಆಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ೨೦೧೯ ರಲ್ಲಿ ನೇತ್ರಾವತಿ ಅಂಬಿಗ ಅವರು ಅಕಾಲಿಕ ನಿಧನ ಹೊಂದಿದ್ದರು. ಅವರ ನಿಧನದಿಂದಾಗಿ ಅವರ ಪುಟ್ಟ ಮಗ ತಬ್ಬಲಿಯಾಗಿದ್ದಾನೆ. ಆತನಿಗೂ ಹೃದಯ ಸಂಬAಧಿ ಖಾಯಿಲೆಯಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ನೇತ್ರಾವತಿ ಅವರ ಪತಿಗೂ ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಇದಲ್ಲದೆ ನನ್ನ ತಂದೆ-ತಾಯಿ ಇಬ್ಬರೂ ದೋಣಿ ದುರಂತದಲ್ಲಿ ಮೃತಪಟ್ಟಿದ್ದಾರೆ. ಈತನ್ಮಧ್ಯೆ ನಾನು ಜೀವನ ನಡೆಸುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ತನ್ನ ಅಕ್ಕನ ಹುದ್ದೆಯನ್ನು ನನಗೆ ವಹಿಸಿಕೊಡಿ ಎಂದು ಶಾಸಕ ಸುನೀಲ್ ನಾಯ್ಕ ಅವರ ಬಳಿ ಹೇಳಿಕೊಂಡಿದ್ದೆವು. ಈ ಬಗ್ಗೆ ಹಲವಾರು ಬಾರಿ ಅವರಿದ್ದಲ್ಲಿಗೆ ಹೋಗಿ ಮನವಿ ಮಾಡಲಾಗಿತ್ತು. ಇದಕ್ಕೆ ಪ್ರತಿಯಾಗಿ ಸುನೀಲ್ ನಾಯ್ಕ ಅವರುನೀವು ಕಾಳಜಿ ಮಾಡಬೇಡಿ ಅನುಕಂಪದ ಆಧಾರದ ಮೇಲೆ ನಿಮ್ಮನ್ನೇ ನೇಮಿಸುತ್ತೇನೆ. ಅಕ್ಕನ ಸಾವಿಗೂ ನ್ಯಾಯ ಕೊಡಿಸಲಾಗುವುದು. ೫ ಲಕ್ಷ ಪರಿಹಾರವನ್ನೂ ಕೊಡಲಾಗುವುದು ಎಂದಿದ್ದರು. ಸುಮಾರು ೯ ತಿಂಗಳುಗಳ ಕಾಲ ಸುಮ್ಮನಿದ್ದು, ಇದೀಗ ಬೇರೊಬ್ಬರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಇದು ನಮಗಾದ ದೊಡ್ಡ ಅನ್ಯಾಯವಾಗಿದೆ ಎಂದು ಭಾವೂಕರಾದರು.
ಮಾದೇವ ಅಂಬಿಗ ಮಾತನಾಡಿ, `ಶಶಿಕಲಾ ಅಂಬಿಗ ಅವರ ಕುಟುಂಬ, ನೇತ್ರಾವತಿ ಅವರನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ತನ್ನ ತಂದೆ-ತಾಯಿಯನ್ನೂ ಕಳೆದುಕೊಂಡು ಈಗ ಆ ಪುಟ್ಟ ಬಾಲಕನಿಗೆ ಶಶಿಕಲಾ ಆಸರೆಯಾಗಿದ್ದಾಳೆ. ಬದುಕು ಎಷ್ಟೇ ಭಾರವಾಗಿದ್ದರೂ ಆರ್ಥಿಕವಾಗಿ ನೇತ್ರಾವತಿ ಅವರು ಬದುಕಿನ ರಥವನ್ನು ಎಳೆಯುತ್ತಿದ್ದರು. ಆದರೆ ಅಂಗನವಾಡಿ ಕಾರ್ಯಕರ್ತೆಯಾಗಿದ್ದ ನೇತ್ರಾವತಿ ತಮ್ಮ ಜೀವನದ ಪಯಣವನ್ನೇ ಮುಗಿಸಿದರು. ಇದರಿಂದ ಶಶಿಕಲಾ ಅವರಿಗೆ ಎಲ್ಲವೂ ಭಾರವಾಗಿ ಹೋಗಿದೆ. ನೇತ್ರಾವತಿ ಅವರ ಸಾವಿಗೂ ನ್ಯಾಯ ಇಲ್ಲ ಇತ್ತ ಕುಟುಂಬಕ್ಕೂ ನೆರವಿನ ಹಸ್ತ ಚಾಚುವವರಿಲ್ಲದಂತಾಗಿದೆ. ಪುಟ್ಟ ಬಾಲಕನ ಆರೋಗ್ಯ ಸ್ಥಿತಿಯೂ ಕಷ್ಟಕರವಾಗಿದೆ. ಮಗುವಿನ ಮತ್ತು ಕುಟುಂಬದ ಸ್ಥಿತಿಗತಿಯನ್ನೂ ಸುನೀಲ್ ಅವರಲ್ಲಿ ಹೇಳಿಕೊಂಡಿದ್ದೇವೆ. ಅವರು ಸಿಗುವ ಸ್ಥಳಕ್ಕೂ ಹೋಗಿ ಪರಿಸ್ಥಿತಿಯನ್ನು ಹೇಳಿಕೊಂಡಿದ್ದೇವೆ. ಎಲ್ಲದಕ್ಕೂ ಭರವಸೆ ನೀಡಿ ನಮ್ಮನ್ನು ಬೆನ್ನು ತಟ್ಟಿದರೇ ಹೊರತು ನ್ಯಾಯ ಕೊಡಿಸಲಿಲ್ಲ. ಈ ಬಗ್ಗೆ ಶಶಿಕಲಾ ಜೊಲ್ಲೆ ಅವರೂ ನ್ಯಾಯ ಕೊಡಿಸುವುದಾಗಿ ಹೇಳಿದ್ದರು. ಯಾರ ಮಾತೂ ಈಡೇರಲಿಲ್ಲ. ನಾನು ಶಾಸಕ ಸುನೀಲ್ ನಾಯ್ಕ ಅವರನ್ನು ನನ್ನ ಒಡಹುಟ್ಟಿದವರಂತೆ ನಂಬಿಕೊAಡು ಬಂದೆ. ಆದರೆ ಆ ನಂಬಿಕೆಗೆ ದ್ರೋಹ ಮಾಡಿದ್ದಾರೆ ಎಂದು ಕಣ್ಣೀರು ಹಾಕಿದರು.
ಬೇರೊಬ್ಬರ ನೇಮಕ: ಇನ್ನು ಕಾಸರಕೋಡದ ಅಂಬಿಗರಕೇರಿಯಲ್ಲಿ ಖಾಲಿಯಿದ್ದ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಈಗಾಗಲೇ ಬೇರೊಬ್ಬರನ್ನು ನೇಮಕ ಮಾಡಲಾಗಿದೆ. ಗೌಡ್ರಕೇರಿಯಲ್ಲಿ ಸಧ್ಯ ಕಾರ್ಯಕರ್ತೆ ಹುದ್ದೆ ಖಾಲಿಯಿದ್ದು, ಆ ಜಾಗಕ್ಕಾದರೂ ಶಶಿಕಲಾ ಅಂಬಿಗ ಅವರನ್ನು ನೇಮಕ ಮಾಡಬೇಕು ಎಂಬುದು ಅಲ್ಲಿನ ರಾಜೇಶ ಅಂಬಿಗ, ವಿಘ್ನೇಶ್ವರ ಅಂಬಿಗ, ಗೋವಿಂದ ಅಂಬಿಗ, ಶ್ರೀಧರ ಅಂಬಿಗ, ನೇತ್ರಾವತಿ ಅಂಬಿಗ, ಶಾರದಾ ಅಂಬಿಗ ಅವರು ಆಗ್ರಹಿಸಿದ್ದಾರೆ.

error: