May 17, 2024

Bhavana Tv

Its Your Channel

ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಹಮ್ಮಿಕೊಳ್ಳಲಾದ ವಿಶೇಷ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಮಕ್ಕಳ ಪಾಲಕರ ಆಕ್ರೋಶ

ಕುಮಟಾ ಪಟ್ಟಣದ ಪುರಭವನದಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಹಮ್ಮಿಕೊಳ್ಳಲಾದ ವಿಶೇಷ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಮಕ್ಕಳ ಪಾಲಕರ ಆಕ್ರೋಶಕ್ಕೆ ಕಾರಣವಾಯಿತು

ಕಾರವಾರದ ವೈದ್ಯಕೀಯ ಕಾಲೇಜ್ ಮತ್ತು ಜಿಲ್ಲಾ ಆಸ್ಪತ್ರೆಯ ಸಹಕಾರದಲ್ಲಿ ಕುಮಟಾ ಪಟ್ಟಣದ ಪುರಭವನದಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ೦ದಿಂದ ೧೮ ವರ್ಷದೊಳಗಿನ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಆಯೋಜಿಸಲಾದ ಈ ಶಿಬಿರದಲ್ಲಿ ಯಾವುದೇ ಸೂಕ್ತ ವ್ಯವಸ್ಥೆ ಇರಲಿಲ್ಲ. ಇದರಿಂದ ಆಕ್ರೋಶಗೊಂಡ ಮಕ್ಕಳ ಪಾಲಕರು ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಸೂರಜ ನಾಯ್ಕ ಅವರು ವ್ಯವಸ್ಥೆ ಪರಿಶೀಲಿಸಿ, ಶಿಬಿರದಲ್ಲಿ ಸ್ವಚ್ಛತೆ ಇಲ್ಲದೇ ಇರುವುದಕ್ಕೆ ಮತ್ತು ವೈದ್ಯರ ತಂಡದಲ್ಲಿ ತಜ್ಞ ವೈದ್ಯರು ಬಾರದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸೂರಜ ನಾಯ್ಕ ಸೋನಿ ಅವರು, ಇದೊಂದು ಸರ್ಕಾರಿ ಕಾರ್ಯಕ್ರಮ. ಅದರಲ್ಲೂ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರ ಸಂಘಟಿಸಿ, ಅವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಈ ಶಿಬಿರ ಸಂಘಟಿಸುವಾಗ ಅಗತ್ಯ ಸೌಲಭ್ಯಗಳನ್ನು ಶಿಬಿರದಲ್ಲಿ ಕಲ್ಪಿಸಬೇಕಾಗುತ್ತದೆ, ಮುಖ್ಯವಾಗಿ ತಜ್ಞ ವೈದ್ಯರು ಈ ಶಿಬಿರದಲ್ಲಿದ್ದು, ತಪಾಸಣೆ ಮಾಡಬೇಕು. ಆದರೆ ಇಲ್ಲಿನ ವ್ಯವಸ್ಥೆ ಸರಿಯಾಗಿಲ್ಲ. ಶಿಬಿರದಲ್ಲಿ ಅಸ್ವಚ್ಛತೆ ತಾಂಡವಾಡುತ್ತಿದೆ. ಅಲ್ಲದೇ ಈ ಶಿಬಿರದ ಬಗ್ಗೆ ಮಾಹಿತಿಯ ಕೊರತೆ ಇದೆ. ಹಾಗಾಗಿ ತಪಾಸಣೆ ಮಾಡಿಸಿಕೊಳ್ಳಲು ಬರುವ ಮಕ್ಕಳ ಸಂಖ್ಯೆಯೂ ಕಡಿಮೆ ಇದೆ. ಈ ರೀತಿಯ ಶಿಬಿರ ಮಾಡಿ ಪ್ರಯೋಜನವಿಲ್ಲ. ಗ್ರಾಮೀಣ ಭಾಗದಿಂದ ಬರುವ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸೂಕ್ತ ತಪಾಸಣೆ ಮತ್ತು ಚಿಕಿತ್ಸೆ ದೊರೆಯದಿದ್ದರೆ ಮಕ್ಕಳಿಗೆ ಅನಾನುಕೂಲವಾಗುತ್ತದೆ. ಹಾಗಾಗಿ ಈ ಶಿಬಿರವನ್ನು ಸೂಕ್ತ ವ್ಯವಸ್ಥೆಯೊಂದಿಗೆ ಪುನಃ ಸಂಘಟಿಸಬೇಕೆAದು ಒತ್ತಾಯಿಸಿದರು.
ವರದಿ ; ನಟರಾಜ ಗದ್ದೆಮನೆ

error: