April 28, 2024

Bhavana Tv

Its Your Channel

ಇತಿಹಾಸವನ್ನು ತಿರುಚುವ, ಸತ್ಯವನ್ನು ಮರೆಮಾಚುವ ಕೆಲಸ ಇಂದಿನ ಪ್ರಜ್ಞಾವಂತರಿ0ದ ಆಗುತ್ತದೆ – ನಿವೃತ್ತ ಪ್ರಾಧ್ಯಾಪಕ ಎಂ.ಜಿ.ನಾಯ್ಕ

ಕುಮಟಾ ; ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ಕುಮಟಾದ ವಿವೇಕಾ ನಗರದ ಶಿವರಾಮ ನಿಲಯದಲ್ಲಿ ನಡೆದ ದಿವಂಗತ ಶಿವರಾಮ ಹೊಸಬಯ್ಯ ನಾಯಕ ಇವರ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಹಿತ್ಯದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಹಿರಿಯ ತಲೆಮಾರಿನ ಸಾಧಕರನ್ನು ನೆನಪಿಸುವ ಕಾರ್ಯ ಶ್ಲಾಘನೀಯ ಎಂದರು. ಪ್ರಾಚೀನ ಕಾಲದಿಂದಲೂ ರಾಜಮಹಾರಾಜರ, ಆಳರಸರ ಕಾಲದಿಂದಲೂ ಸಾಹಿತ್ಯ ರಚನೆಯಾಗುತ್ತಿದ್ದು ಒಂದು ಚೌಕಟ್ಟಿನಲ್ಲಿ ವಿಷಯವನ್ನು ಹಿಡಿದಿಟ್ಟು ಓದುಗನಿಗೆ ನೀಡಿ ಸಂತೋಷ ಪಡುವ ಕಾಲವೊಂದಿತ್ತು. ಆ ಕಾಲ ದೂರವಾಗುತ್ತಿದೆ ಎಂದು ವಿಷಾದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಎಡ ಮತ್ತು ಬಲ ಪಂಥಗಳು ಯಾವುದೋ ಒಂದು ರಾಜಕೀಯ ಶಕ್ತಿಗೆ ಬಳಕೆಯಾದಾಗ ಅದು ಸಂಘರ್ಷಕ್ಕೆ ಕಾರಣವಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಪಂಥಕ್ಕೆ ಸೇರಿರುವುದಿಲ್ಲ. ಜನಪಂಥವಾಗಿ ವಿಚಾರ ಮಾಡಿದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು. ಅನಗತ್ಯ ವಿಚಾರಗಳನ್ನು ಜನಸಮುದಾಯ ಅಥವಾ ಯುವಕರ ಮುಂದೆ ಎಳೆದು ತಂದು ಚರ್ಚಿಸಿ,ವೈಭವಿಕರಿಸಿ ದಾಗ ಇಡೀ ಸಮಾಜದ ಮೇಲೆ ದುಷ್ಪರಿಣಾಮ ಬೀರಲು ಸಾಧ್ಯ. ಟೇಬಲ್ ಸ್ಟೋರಿ ಸಂಘರ್ಷಕ್ಕೆ ಕಾರಣ. ಅನುಭವದ ಸಾಹಿತ್ಯ ಜನರ ಬದುಕನ್ನು ಕಟ್ಟಿಕೊಡಲು ಸಾಧ್ಯ ಎಂದರು.
ಕಥಾಸಾಹಿತ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯ ಕೊಡುಗೆಗಳ ಕುರಿತು ಡಾಕ್ಟರ ಶ್ರೀಧರ ಬಳಗಾರ ಮಾತನಾಡಿ, ಎಡ ಮತ್ತು ಬಲ ಪಂಥವು ಬೌದ್ಧಿಕ ದಬ್ಬಾಳಿಕೆಯನ್ನು ಜನಸಾಮಾನ್ಯರ ಮೇಲೆ ಒತ್ತಡ ಹೇರಿ ಜೀತದಾಳಾಗಿ ಮಾಡಿಕೊಂಡಿದೆ. ಅವರು ಮಂಡಿಸುವ ವಿಚಾರ ಒಪ್ಪಿಕೊಳ್ಳದಿದ್ದರೆ ಅವರನ್ನು ಅಸ್ಪೃಸ್ಯರನ್ನಾಗಿ ನೋಡಿ ಇತಿಹಾಸದ ಭೂತವನ್ನು ಪ್ರಚೋದಿಸಿ ಸಾಮಾನ್ಯ ಜನರನ್ನು ಬಲಿಪಶುವನ್ನಾಗಿ ಮಾಡಲಾಗುತ್ತಿದೆ.ಜಾತಿಯತೆ ಒಂದು ರೋಗ ಎಂದು ವಿವಿಧ ಕಥಾ ಘಟನೆಗಳನ್ನು ಉದಾಹರಿಸಿ ಮಾರ್ಮಿಕವಾಗಿ ಮಾತನಾಡಿದರು.
ಮುಖ್ಯಅತಿಥಿ ಡಾಕ್ಟರ್ ಡಿ.ಡಿ.ಭಟ್ ಮಾತನಾಡಿ ಶಿಕ್ಷಣವಷ್ಟೇ ಪಡೆದರೆ ಸಾಲದು. ಉತ್ತಮವಾದ ಸಂಸ್ಕಾರ ಮುಂದಿನ ಪೀಳಿಗೆಗೆ ದಾರಿದೀಪವಾಗಬಲ್ಲದು. ಬುದ್ಧಿಶಕ್ತಿ ಎಲ್ಲವನ್ನು ಮೀರಿ ನಿಲ್ಲಿಸುತ್ತದೆ ಎಂದರು.
ದತ್ತಿನಿಧಿ ಸ್ಥಾಪಕ ರೋಹಿದಾಸ ನಾಯಕ ಪ್ರಾಸ್ತಾವಿಕ ಮಾತನಾಡಿ, ಕಳೆದ ೧೭ ವರ್ಷಗಳಿಂದ ನನ್ನ ತಂದೆಯವರಾದ ದಿವಂಗತ ಶಿವರಾಮ ಹೊಸಬಯ್ಯ ನಾಯಕರವರ ದತ್ತಿ ಕಾರ್ಯಕ್ರಮ ಏರ್ಪಡಿಸುತ್ತೀದ್ದೇವೆ. ತಂದೆಯ ವರಲ್ಲಿರುವ ಓದಿನ ಆಸಕ್ತಿ ನಮ್ಮನ್ನು ಓದಿನ ಕಡೆ ನೋಡುವಂತೆ ಮಾಡಿತು ಎಂದರು.

ಪ್ರಾರ0ಭದಲ್ಲಿ ತಾಲೂಕ ಘಟಕದ ಅಧ್ಯಕ್ಷ ಸುಬ್ಬಯ್ಯ ನಾಯ್ಕ ಸ್ವಾಗತಿಸಿದರೆ, ಜಿಲ್ಲಾ ಕಾರ್ಯದರ್ಶಿ ಪಿ.ಆರ್.ನಾಯ್ಕ ಗಣ್ಯರನ್ನು ಪರಿಚಯಿಸಿದರು. ತಾಲೂಕು ಕಾರ್ಯದರ್ಶಿ ಪ್ರಮೋದ್ ನಾಯ್ಕ ವಂದಿಸಿದರು. ಇನ್ನೋರ್ವ ಕಾರ್ಯದರ್ಶಿ ವನ್ನಳ್ಳಿ ಗಿರಿ ಕಾರ್ಯಕ್ರಮ ನಿರೂಪಿಸಿದರು.

error: