April 25, 2024

Bhavana Tv

Its Your Channel

ಅಬಕಾರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಲಿಕ್ಕರ್ ಷಾಪ್ ಗಳು ಹಾಗೂ ಬಾರ್‌ಗಳ ಪರಿಶೀಲನೆ

ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ರಮ ಮದ್ಯ ಮಾರಾಟ ಹಾಗೂ ಅಬಕಾರಿ ನಿಯಮಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಅಬಕಾರಿ ಜಿಲ್ಲಾಧಿಕಾರಿ ಶಿವಪ್ರಸಾದ್ ಅವರ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಪೋಲಿಸರ ತಂಡವು ಲಿಕ್ಕರ್ ಷಾಪ್ ಗಳು ಹಾಗೂ ಬಾರ್‌ಗಳ ಪರಿಶೀಲನೆ ನಡೆಸಿತು.

ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಮದ್ಯದಂಗಡಿಗಳು ಬಂದ್ ಆಗಿದ್ದರೂ ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಮಾತ್ರ ಅಕ್ರಮವಾಗಿ ಮಧ್ಯದ ಮಾರಾಟ ಮಾತ್ರ ಎಗ್ಗಿಲ್ಲದೇ ನಡೆಯುತ್ತಿದೆ. ೧ ಸಾವಿರ ರೂಪಾಯಿ ಮೌಲ್ಯದ ಮ್ಯಾನ್ಸನ್ ಹೌಸ್ ಬ್ರಾಂಡಿಯು ೩೫೦೦ರೂ, ೨ ಸಾವಿರ ರೂ ಬೆಲೆಯ ಟೀಚರ್ಸ್ ಮತ್ತು ೧೦೦ಪೈಪರ್ಸ್ ವಿಸ್ಕಿಯು ೬ ಸಾವಿರ ರೂಗಳು ಹಾಗೂ ಒಂದು ಕ್ವಾಟರ್ ರಾಜಾ ವಿಸ್ಕಿಯು ೫೦೦ರೂಗಳಿಗೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಕಿಕ್ಕೇರಿ ಹೋಬಳಿಯ ಕಳ್ಳನಕೆರೆ ಗ್ರಾಮದಲ್ಲಿ ೬೫ ಬಾಕ್ಸ್ ಅಕ್ರಮ ಮಧ್ಯವು ವಶವಾಗಿರುವುದು ಅಕ್ರಮ ದಂಧೆಗೆ ಕೈಗನ್ನಡಿಯಂತಿದೆ.

ಅಬ್ಕಾರಿ ಜಿಲ್ಲಾಧಿಕಾರಿ ಶಿವಪ್ರಸಾದ್ ಪತ್ರಕರ್ತರೊಂದಿಗೆ ಮಾತನಾಡಿ ಲಿಕ್ಕರ್ ಶಾಪ್ ಗಳಿಗೆ ಅಧಿಕೃತವಾಗಿ ಬೀಗಮುದ್ರೆ ಹಾಕಿದ್ದರೂ ಹಿಂಬಾಗಿಲಿನ ಮೂಲಕ ಕಳ್ಳ ವ್ಯವಹಾರ ನಡೆಸಿರುವುದು ಕಂಡು ಬಂದಿದೆ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು…ಕಾನೂನುಬಾಹಿರವಾಗಿ ಅಕ್ರಮ ದಂಧೆ ನಡೆಸಿರುವವರಿಗೆ ದಂಡ ವಿಧಿಸುವ ಜೊತೆಗೆ ಸರ್ಕಾರವು ನೀಡಿರುವ ಅಧಿಕೃತ ಸನ್ನದನ್ನು ರದ್ದು ಮಾಡುವ ಮೂಲಕ ತಕ್ಕಶಾಸ್ತಿಯನ್ನು ಮಾಡಲಾಗುತ್ತದೆ ಎಂದು ಶಿವಪ್ರಸಾದ್ ಎಚ್ಚರಿಸಿದರು …

ಮಧ್ಯದಂಗಡಿಗಳು ಹಾಗೂ ಬಾರ್ ಗಳ ಪರಿಶೀಲನೆಯ ಸಂದರ್ಭದಲ್ಲಿ ಕೆ.ಆರ್.ಪೇಟೆ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್, ಅಬ್ಕಾರಿ ನಿರೀಕ್ಷಕಿ ಭವ್ಯ, ಸಬ್ ಇನ್ಸಪೆಕ್ಟರ್ ಪುಟ್ಟಸ್ವಾಮಿ, ಅಣ್ಣಪ್ಪಸ್ವಾಮಿ, ಪಟ್ಟಣ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ, ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ಮತ್ತು ಅಬ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ಭಾಗವಹಿಸಿದ್ದರು.
ವರದಿ. ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ .

error: