May 2, 2024

Bhavana Tv

Its Your Channel

ಶ್ರೀ ಕೆರೆಕೋಡಿಮಾರಮ್ಮ ದೇವಾಲಯದ ಉದ್ಘಾಟನಾ ಕಾರ್ಯಕ್ರಮ

ಕಿಕ್ಕೇರಿ:- ಮಾನವ ಎಷ್ಟೇ ಹಣ, ಅಂತಸ್ತು, ಆಸ್ತಿ ಸಂಪಾದನೆ ಮಾಡಿದರೂ ಅವುಗಳು ನಮ್ಮ ಜೊತೆ ಬರುವುದಿಲ್ಲ. ನಾವು ಮಾಡಿರುವ ಒಳ್ಳೆಯ ಕೆಲಸಗಳು ಮಾತ್ರ ನಮ್ಮೊಂದಿಗೆ ಬರುತ್ತವೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾಕ್ಟರ್ ಸಿ ಎನ್ ಮಂಜುನಾಥ್ ತಿಳಿಸಿದರು.

ಕೃಷ್ಣರಾಜಪೇಟೆ ತಾಲ್ಲೂಕಿನ ಚಿಕ್ಕತರಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮನೆ ದೇವತೆಯಾದ ಶ್ರೀ ಕೆರೆಕೋಡಿಮಾರಮ್ಮ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿ.ಎನ್ ಮಂಜುನಾಥ್ ರವರು ಹಾಗೂ ಅನುಸೂಯ ಮಂಜುನಾಥ್, ಮಗ ಡಾಕ್ಟರ್ ಸಾತ್ವಿಕ್ ಸೇರಿದಂತೆ ಕುಟುಂಬ ಸದಸ್ಯರೆಲ್ಲಾ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಮಾತನಾಡಿ ದೇವರಿಗೆ ನೀವು ಹತ್ತು ರೂಪಾಯಿಯನ್ನೇ ಹಾಕಿ ಎರಡು ಕೋಟಿಯನ್ನೇ ಕಾಣಿಕೆಯಾಗಿ ಹಾಕಿ ಎಷ್ಟೇ ಕಾಣಿಕೆ ಹಾಕಿದರೂ ನೀವು ಭಕ್ತರೇ ಆಗಿರುತ್ತೀರಿ. ದೇವರು ಅದನ್ನು ನೋಡುವುದಿಲ್ಲ. ಅದನ್ನು ಬಿಟ್ಟು ಕಷ್ಟದೆಲ್ಲಿರುವ ಬಡಜನರಿಗೆ ಕಷ್ಟಕಾಲದಲ್ಲಿ ಸಹಾಯ ಮಾಡಿದರೆ ಅವರು ನಿಮ್ಮನ್ನು ಸದಾ ನೆನೆಯುತ್ತಾರೆ. ದೇವರಲ್ಲಿ ಭಯ, ಭಕ್ತಿ ಇದ್ದರೆ ಸಾಕು ಭಗವಂತ ನಿಮಗೆ ಯಾವುದಾದರೂ ರೂಪದಲ್ಲಿ ಸಹಾಯ ಮಾಡುತ್ತಾನೆ.
ಇತ್ತೀಚಿನ ದಿನಗಳಲ್ಲಿ ಜನರು ಅನಾರೋಗ್ಯಕ್ಕೆ ಒಳಗಾಗಿ ಹೆಚ್ಚಾಗಿ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ದೇಶದಲ್ಲಿ ಪ್ರತೀವರ್ಷ ಮೂವತ್ತು ಲಕ್ಷ ಜನ ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ. ಆಹಾರ ಪದ್ದತಿ, ವ್ಯಾಯಾಮ, ಮುಂತಾದುವುಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಆರೋಗ್ಯವಂತರಾಗಿ ಬದುಕಬಹುದು. ಇತ್ತೀಚಿಗೆ ೨೦-೩೦ ವರ್ಷದ ಯುವಕರಿಗೂ ಹೃದಯಾಘಾತ ಉಂಟಾಗುತ್ತಿದೆ. ಇದು ಉತ್ತಮ ಬೆಳವಣಿಗೆಯಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಶ್ರವಣಬೆಳಗೊಳ ಶಾಸಕ ಸಿ.ಎನ್ ಬಾಲಕೃಷ್ಣ,ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಕುಸುಮ ಬಾಲಕೃಷ್ಣ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮು, ಸಿ.ಎನ್.ಪುಟ್ಟಸ್ವಾಮಿಗೌಡ್ರು, ಮನ್ಮುಲ್ ನಿರ್ದೇಶಕ ಹೆಚ್.ಟಿ.ಮಂಜು, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಸೇರಿದಂತೆ ಹಲವರು ಹಾಜರಿದ್ದರು.

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: