ಕೃಷ್ಣರಾಜಪೇಟೆ : ಮಾನವರಾದ ನಾವು ಹುಟ್ಟಿನಿಂದ ಸಾಯುವವರೆಗೂ ಕಾನೂನಿನ ನಡುವೆಯೇ ಜೀವನವನ್ನು ನಡೆಸಬೇಕಾದ ಅನಿವಾರ್ಯತೆ ಇರುವುದರಿಂದ ನಾವು ಕಡ್ಡಾಯವಾಗಿ ಕಾನೂನನ್ನು ಪಾಲಿಸುವ ಮೂಲಕ ಅಪಘಾತಗಳು ಹಾಗೂ ವ್ಯಾಜ್ಯಗಳಿಂದ ಮುಕ್ತರಾಗಿ ನೆಮ್ಮದಿಯ ಜೀವನ ನಡೆಸಿ ಅಪಘಾತ ಮುಕ್ತವಾದ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಯುವಜನರು ಮುಂದಾಗಬೇಕು ಎಂದು ಪಟ್ಟಣ ಪೋಲಿಸ್ ಠಾಣೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್ ರಮೇಶ್ ಕರೆ ನೀಡಿದರು.
ಅವರು ಪಟ್ಟಣದ ಕೆಪಿಎಸ್ ಪಬ್ಲಿಕ್ ಸ್ಕೂಲ್ನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮಂಡ್ಯ ಜಿಲ್ಲಾ
ಪೋಲಿಸ್ ಇಲಾಖೆಯ ವತಿಯಿಂದ ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ಹಾಗೂ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯುವಜನರು ಹಾಗೂ ವಿದ್ಯಾರ್ಥಿಗಳು ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿರುವುದರಿAದ ಪ್ರತಿನಿತ್ಯವೂ ಅಪಘಾತಗಳು ಸಂಭವಿಸಿ ಅಮೂಲ್ಯವಾದ ಜೀವಗಳು ಅಕಾಲಿಕವಾಗಿ ಬಲಿಯಾಗುತ್ತಿವೆ. ಆದ್ದರಿಂದ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು. ದ್ವಿಚಕ್ರ ವಾಹನಗಳನ್ನು ಚಲಾಯಿಸುವಾಗ ತಲೆಗೆ ಹೆಲ್ಮೆಟ್ ಧರಿಸಬೇಕು. ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನಿನಲ್ಲಿ ಮಾತನಾಡಿಕೊಂಡು ಅಡ್ಡಾದಿಡ್ಡಿಯಾಗಿ ವಾಹನ ಚಾಲನೆ ಮಾಡಬಾರದು, ಅತಿಯಾದ ವೇಗಕ್ಕೆ ಅಪಘಾತವು ಸಂಭವಿಸುವುದಲ್ಲದೇ ನಮ್ಮ ಅಮೂಲ್ಯವಾದ ಪ್ರಾಣವನ್ನು ಕಳೆದುಕೊಂಡು ನಮ್ಮ ಜೀವನವನ್ನು ನಾವೇ ಅಂತ್ಯಗೊಳಿಸಿ ಕೊಳ್ಳಬೇಕಾಗುತ್ತದೆ. ಆದ್ದರಿಂದ ಯುವಜನರು ಮೊಬೈಲ್ ಫೋನಿನ ದಾಸರಾಗದೇ ಮೊಬೈಲ್ ಫೋನನ್ನು ಶೈಕ್ಷಣಿಕ ವಿಕಾಸಕ್ಕೆ ಹಾಗೂ ವಿಜ್ಞಾನದ ಸಂಶೋಧನೆಗೆ ಬಳಸಿಕೊಂಡು ಸಾಧನೆ ಮಾಡಬೇಕು. ಕಾಲೇಜು ವಿದ್ಯಾರ್ಥಿಗಳು ಮೊಬೈಲ್ ಫೋನಿನ ದಾಸರಾಗಿ ಫೇಸ್ಬುಕ್, ವಿಡಿಯೋಗೇಮ್, ಮೊಬೈಲ್ ಚಾಟಿಂಗ್ ಎಂದು ಅಮೂಲ್ಯವಾದ ಸಮಯವನ್ನು ಹಾಳುಮಾಡಿಕೊಂಡು ವಿದ್ಯಾರ್ಥಿಗಳು ಸಮಾಜಕಂಟಕರಾಗಿ ಬದಲಾಗಬಾರದು ಎಂದು ರಮೇಶ್ ಮನವಿ ಮಾಡಿದರು. ಪೋಲಿಸರು ಇರುವುದು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಎಂಬ ಸತ್ಯವನ್ನು ಅರಿತು ಸಮಾಜದ ಸ್ವಾಸ್ಥ್ಯಕ್ಕೆ ಭಂಗತರುವ ಕಿಡಿಗೇಡಿಗಳ ಬಗ್ಗೆ ಪೋಲಿಸರಿಗೆ ಅಥವಾ 112 ದೂರವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಿ.ಬಿ.ಸತ್ಯ ಮಾತನಾಡಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವು ಅತ್ಯುತ್ತಮವಾದ ಸಾಮಾಜಿಕ ಕಾರ್ಯಕ್ರಮವಾಗಿದೆ. ಯುವಜನರಲ್ಲಿ ಕಾನೂನು ಅರಿವು ಮೂಡಿಸಿ ಅಪಘಾತಗಳಿಂದಾಗುವ ಹಾನಿಯ ಬಗ್ಗೆ ಮನವರಿಕೆ ಮಾಡಿಕೊಡುವ ಈ ಕಾರ್ಯಕ್ರಮವು ಯುವಜನರು ಎಚ್ಚೆತ್ತುಕೊಳ್ಳಲು ಅನುಕೂಲವಾಗಿದೆ. ವಿಶೇಷವಾಗಿ ಹೆಣ್ಣು ಮಕ್ಕಳು ಸಾಮಾಜಿಕ ಕಟ್ಟುಪಾಡುಗಳು ಹಾಗೂ ಮೂಡನಂಬಿಕೆಗಳ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು. ವರದಕ್ಷಿಣೆ, ಬಾಲ್ಯವಿವಾಹದಂತಹ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಟ ನಡೆಸಬೇಕು ಎಂದು ಪ್ರಾಂಶುಪಾಲರಾದ ಸತ್ಯ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರೊಬೆಷನರಿ ಸಬ್ಇನ್ಸ್ಪೆಕ್ಟರ್ ವಿನೋದ್ಕುಮಾರ್, ಎಎಸ್ಐ ಚಂದ್ರಶೇಖರ್,
ಉಪನ್ಯಾಸಕರಾದ ಸುರೇಶ್, ಡಿ.ಟಿ.ಪುಲಿಗೆರಯ್ಯ, ಉಪಪ್ರಾಂಶುಪಾಲ ಹೆಚ್.ವಿ.ತಿಮ್ಮೇಗೌಡ, ಪುರಸಭೆಯ ಮಾಜಿಸದಸ್ಯ ಕೆ.ಆರ್.ನೀಲಕಂಠ, ಪತ್ರಕರ್ತ ಸಯ್ಯದ್ ಖಲೀಲ್ ಮತ್ತಿತರರು ಉಪಸ್ಥಿತರಿದ್ದರು.
More Stories
ತಮಟೆಯ ಸದ್ದಿಗೆ ಲಯಬದ್ದವಾಗಿ ಹೆಜ್ಜೆ ಹಾಕಿ ರಂಗ ಕುಣಿದು ಸಂಭ್ರಮಿಸಿದ ಗ್ರಾಮಸ್ಥರು..
ಇಂಧನ ದಕ್ಷ ಪಂಪ್ ಉಪಕರಣಗಳ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ
ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಚುನಾವಣಾಧಿಕಾರಿ ಚಂದ್ರಯ್ಯ ಮನವಿ