April 26, 2024

Bhavana Tv

Its Your Channel

ಗ್ರಾಮೀಣ ಶಿಕ್ಷಣ ವ್ಯವಸ್ಥೆಗೆ ಸ್ಪಂದಿಸುವ ನಿಯಮವಿರಲಿ:-ಪ್ರೊ.ಸಿದ್ದು ಯಾಪಲಪರವಿ. ಕಾರಟಗಿ.

ಕೊರೋನಾ ಸಂದರ್ಭದಲ್ಲಿ ಶೈಕ್ಷಣಿಕ ಬದಲಾವಣೆಗೆ ಚಿಂತನೆ ನಡೆದಿರುವುದು ಸ್ವಾಗತಾರ್ಹ. ಅದರಲ್ಲೂ ವಿಶೇಷವಾಗಿ ಆನ್ ಲೈನ್ ಶಿಕ್ಷಣ ನೀಡಲು ಇರಬಹುದಾದ ತೊಂದರೆಗಳನ್ನು ಚರ್ಚಿಸಲು ಪಾಲಕರು ಮುಂದಾಗಿರುವುದು ಅಭಿನಂದನೀಯ ಪ್ರೊ.ಸಿದ್ದು ಯಾಪಲಪರವಿ. ಕಾರಟಗಿ ಹೇಳಿದ್ದಾರೆ.

ರಾಜ್ಯದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯ ಸರಾಸರಿ ನೋಡಿದಾಗ ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಆದರೆ ಶಿಕ್ಷಣ ತಜ್ಞರು ಮತ್ತು ಸರ್ಕಾರ ಯೋಜನೆಯನ್ನು ರೂಪಿಸುವಾಗ ಗ್ರಾಮೀಣ ಭಾಗದ ಸಮಸ್ಯೆಗಳನ್ನು ಪರಿಗಣನೆ ಮಾಡದೇ ಬೆಂಗಳೂರು ಕೇಂದ್ರಿತ ಆಲೋಚನಾ ಲಹರಿಯ ಅಭಿಪ್ರಾಯಗಳಿಗೆ ಮನ್ನಣೆ ಕೊಡುವುದು ಸರಿಯಲ್ಲ.

ರಾಜ್ಯದ ಅನೇಕ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳೇ ಇಲ್ಲ.
ಅಂತಹ ಪ್ರದೇಶಗಳಲ್ಲಿ ಹೆಚ್ಚು ವಿದ್ಯಾರ್ಥಿಗಳು ಲಭ್ಯವಿರುವ ಮಿತಿಯಲ್ಲಿ ಕೇವಲ ಶಿಕ್ಷಕರ ನೆರವಿನಿಂದ ಉತ್ತಮ ಶಿಕ್ಷಣ ಪಡೆಯುತ್ತಾರೆ.ಗ್ರಾಮೀಣ ಪ್ರದೇಶಗಳಲ್ಲಿ ಪಾಠ ಮಾಡುವ ಶಿಕ್ಷಕರ ಅಭಿಪ್ರಾಯ ಪಡೆದು ವಾಸ್ತವ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಳ್ಳಬೇಕು.ಸುಸಜ್ಜಿತ ಪ್ರಯೋಗ ಶಾಲೆಗಳು, ಆಧುನಿಕ ತಂತ್ರಜ್ಞಾನ ಸೌಲಭ್ಯ ಮತ್ತು ಮೊಬೈಲ್ ಬಳಕೆ ಕೂಡ ಹಲವು ಕಡೆ ಇರುವುದಿಲ್ಲ.

ಇನ್ನೂ ಹಲವಾರು ಕಾರಣಗಳಿಂದ ಆನ್ ಲೈನ್ ಶಿಕ್ಷಣ ನೀಡಲು ಶಿಕ್ಷಕರು ಈಗ ಹಿಂದೇಟು ಹಾಕುತ್ತಿರುವುದು ಬೆಳಕಿಗೆ ಬಂದಿದೆ. ಕೆಲವರು ವರ್ಗ ಕೋಣೆಯಲ್ಲಿ ಉತ್ತಮ ಶಿಕ್ಷಕರು ಎಂದು ಗೌರವಿಸಲ್ಪಟ್ಟವರು ಕ್ಯಾಮರಾ ಮುಂದೆ ಪಾಠ ಮಾಡುವಾಗ ಸಂಕೋಚ ಮತ್ತು ಭೀತಿಯಿಂದ ಕೀಳರಿಮೆಗೆ ಒಳಗಾಗುತ್ತಾರೆ. ಹಾಗಂತ ಅವರನ್ನು ಕೆಟ್ಟ ಶಿಕ್ಷಕ ಎಂದು ಪರಿಗಣಿಸಲಾಗದು.

ಆನ್ ಲೈನ್ ಪಾಠದ ಸಾಮರ್ಥ್ಯದ ಆಧಾರದ ಮೇಲೆ ಶಿಕ್ಷಕರ ಗುಣಮಟ್ಟದ ಮೌಲ್ಯಮಾಪನ ಮಾಡಲಾಗದು.

ಮನೆಯಲ್ಲಿ ಆನ್ ಲೈನ್ ಪಾಠಗಳನ್ನು ಮಕ್ಕಳ ಜೊತೆಗೆ ಪಾಲಕರು ಮತ್ತು ಇತರ ಸದಸ್ಯರು ಸಾಮೂಹಿಕ ಪಾಠ ಕೇಳುತ್ತಾರೆ.ಅಲ್ಲದೆ ಶಿಕ್ಷಕರು ಪಾಠ ಮಾಡುವ ಶೈಲಿ ಮತ್ತು ಸಾಮರ್ಥ್ಯದ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿ ಪರಾಮರ್ಶೆ ಮಾಡುವುದನ್ನು ಕೇಳಿದ್ದೇನೆ.

ಕೆಲವು ಎಜುಕೇಟೆಡ್ ಪಾಲಕರು ಶಿಕ್ಷಕರ ಶೈಕ್ಷಣಿಕ ಗುಣಮಟ್ಟ ಅಳೆದು ತೂಗಿ ಮಕ್ಕಳ ಎದುರಿಗೆ ಪ್ರತಿಕ್ರಿಯಿಸುವುದು ಅಪಾಯಕಾರಿ ಧೋರಣೆ. ಇದರಿಂದ ಮಕ್ಕಳಿಗೆ ಶಿಕ್ಷಕರ ಮೇಲಿನ ಗೌರವ ಕಡಿಮೆಯಾಗಿ ಪಾಠದ ಮೇಲೆ ಆಸಕ್ತಿ ಕುಂಠಿತವಾಗುತ್ತದೆ.

ಶಿಕ್ಷಕರು ಪಾಠ ಮಾಡುವುದು ಮಕ್ಕಳ ಮಟ್ಟಕ್ಕೆ ಇಳಿದು ಎಂಬುದನ್ನು ಪಾಲಕರು ಅರ್ಥಮಾಡಿಕೊಂಡು ಆನ್ ಲೈನ್ ಕಲಿಕೆಗೆ ಏಕಾಂತ ಕಲ್ಪಿಸಿಕೊಡಬೇಕು. ಪಾಠಗಳ ಕಲಿಕಾ ವಿಧಾನ ವಿದ್ಯಾರ್ಥಿ ಮತ್ತು ಶಿಕ್ಷಕರ ಮಧ್ಯೆ ನಡೆಯುವ ಆಪ್ತ ಸಂವಹನ ಅದರಲ್ಲಿ ಪಾಲಕರು ಮೂಗು ತೂರಿಸುವುದು ಸರಿಯಲ್ಲ.

ಹೀಗೆ ಹತ್ತು ಹಲವು ಆಯಾಮಗಳಿಗೆ ಅಂತಿಮ ಸ್ವರೂಪ ನೀಡುವಾಗ ರಾಜ್ಯದ ಎಲ್ಲ ಪ್ರದೇಶಗಳನ್ನು ದೃಷ್ಟಿಕೋನದಲ್ಲಿ ಇಟ್ಟುಕೊಂಡು ನಿಯಮಗಳನ್ನು ರೂಪಿಸಲಿ ಎಂದು ಪ್ರಾಧ್ಯಾಪಕ, ಸಾಹಿತಿ ಮತ್ತು ಜೀವನಶೈಲಿ ತರಬೇತುದಾರ ಪ್ರೊ.ಸಿದ್ದು ಯಾಪಲಪರವಿ. ಕಾರಟಗಿ ಅವರ ಆಶಯ.

ಪ್ರೊ.ಸಿದ್ದು ಯಾಪಲಪರವಿ. ಕಾರಟಗಿ.
( ಇಂಗ್ಲಿಷ್ ಪ್ರಾಧ್ಯಾಪಕ, ಸಾಹಿತಿ ಮತ್ತು ಜೀವನಶೈಲಿ ತರಬೇತುದಾರ)

error: