April 20, 2024

Bhavana Tv

Its Your Channel

ರಾಜ್ಯ ಸರಕಾರ ಬೆಳೆ ಸಾಲ ಸಮಸ್ಯೆಯನ್ನು ಬಗೆಹರಿಸಬೇಕು

ಬೆಳಗಾವಿ: ಕೊರೋನಾ ಮಹಾಮಾರಿಯಿಂದಾಗಿ ರೈತರು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರೈತರ ಮತ್ತು ಕೃಷಿ ಹಾಗೂ ವಿವಿಧ ಕ್ಷೇತ್ರಗಳ ಕಾರ್ಮಿಕರ ಬದುಕು ಅತ್ಯಂತ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ರೈತರಿಗೆ ಎದುರಾಗಿರುವ ಬೆಳೆ ಸಾಲ ಮರುಪಾವತಿ ಸಮಸ್ಯೆಯನ್ನು ರಾಜ್ಯ ಸರಕಾರ ತಕ್ಷಣ ಬಗೆಹರಿಸಬೇಕು ಎಂದು ಭಾರತೀಯ ಕೃಷಿಕ ಸಮಾಜ (ಸಂ) ದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಅವರು ರಾಜ್ಯ ಸರಕಾರಕ್ಕೆ ಆಗ್ರಹಿಸಿದ್ದಾರೆ.

ಬಹುತೇಕ ರೈತರ ಬೆಳೆ ಸಾಲ ಮರುಪಾವತಿ ಅವಧಿಯು ಪ್ರತಿ ವರ್ಷ ಎಪ್ರಿಲ್‌ದಿಂದ ಜೂನ್ ತಿಂಗಳಲ್ಲಿ ಅಂತ್ಯವಾಗುತ್ತದೆ. ಈ ಅವಧಿಯಲ್ಲಿ ರೈತರು ಸಾಲ ಮರುಪಾವತಿ ಮಾಡಿದರೆ, ೩ ಪ್ರತಿಶತ ಬಡ್ಡಿ ಆಕರಿಸಲಾಗುತ್ತದೆ. ಸರಕಾರದಿಂದ ೪ ಪ್ರತಿಶತ ಬಡ್ಡಿಯ ರಿಯಾಯತಿ ದೊರೆಯುತ್ತದೆ. ನಿಗಧಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡದಿದ್ದರೇ, ಬ್ಯಾಂಕುಗಳು ೧೪ ಪ್ರತಿಶತ ಬಡ್ಡಿ ವಿಧಿಸುತ್ತವೆ. ಕೊರೋನಾದಿಂದ ಮಾರುಕಟ್ಟೆ ವ್ಯವಸ್ಥೆ ಇಲ್ಲದರಿಂದ ಕೃಷಿ ಉತ್ಪನ್ನಗಳು ಮಾರಾಟವಾಗದೇ, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಸಾಲ ಮರುಪಾವತಿಯ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ನೆರೆ ಮತ್ತು ಬರಕ್ಕಿಂತಲೂ ಇಂದು ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಇತ್ತೀಚೆಗೆ ಎಪಿಎಂಸಿ ಮಾರುಕಟ್ಟೆಗಳು ಆರಂಭಿಸಿದ್ದರೂ ಅದರಿಂದ ರೈತರಿಗೆ ನಿರೀಕ್ಷಿತ ಸಹಾಯ ಆಗುತ್ತಿಲ್ಲ. ರಾಜ್ಯದ ಕೃಷಿ ಉತ್ಪನ್ನಗಳು ಕೇವಲ ಸ್ಥಳೀಯ ಮಾರುಕಟ್ಟೆಯಲ್ಲಿ ಖರ್ಚಾಗುವದಿಲ್ಲ. ಕೃಷಿ ಉತ್ಪನ್ನಗಳಿಗೆ ಅಂತಾರಾಜ್ಯ ಮಾರುಕಟ್ಟೆಯ ವ್ಯವಸ್ಥೆ ಬೇಕು. ಈಗಾಗಲೇ ಸಮಯ ಮೀರಿದೆ. ರೈತರು ಈಗಿನ ಸಂಕಷ್ಟದ ಸಮಯದಲ್ಲಿ ಹೊಲದಲ್ಲಿಯ ಬೆಳೆಗಳನ್ನು ತೆಗೆದು ಮುಂಗಾರು ಹಂಗಾಮಿಗೆ ಭೂಮಿಯನ್ನು ಹದಗೊಳಿಸಬೇಕಾಗಿದೆ. ಭೂಮಿಯನ್ನು ಹದಗೊಳಿಸುವುದೇ ದೊಡ್ಡ ಸಮಸ್ಯೆಯಾಗಿರುವದರಿಂದ ಸಾಲ ಮರುಪಾವತಿ ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಾರೆ.
ಕೆಲ ಕ್ಷೇತ್ರಗಳ ಸಾಲಗಳ ಕಂತುಗಳ ಪಾವತಿಗೆ ಸರಕಾರಗಳು ಮೂರು ತಿಂಗಳ ರಿಯಾಯತಿ ನೀಡಿವೆ. ಆದರೆ, ಕೃಷಿ ಸಾಲಗಳ ಮರುಪಾವತಿಗೆ ಮೂರು ತಿಂಗಳು ಕಾಲಾವಕಾಶ ನೀಡಿದರೇ, ರೈತರಿಗೆ ಯಾವ ಪ್ರಯೋಜನವೂ ಆಗುವದಿಲ್ಲ. ಮುಂಗಾರು ಹಂಗಾಮು ಉತ್ತಮವಾಗಿದ್ದರೇ, ಮುಂಗಾರು ಹಂಗಾಮಿನ ಬೆಳೆಗಳು ಮಾರುಕಟ್ಟೆಗೆ ಬರಲು ಕನಿಷ್ಟ ಆರು ತಿಂಗಳು ಬೇಕು. ಅಲ್ಲಿಯವರೆಗೆ ರೈತರಿಗೆ ಆರ್ಥಿಕ ಸಂಪನ್ಮೂಲಗಳೇ ಇಲ್ಲ ಎಂಬುದನ್ನು ಗಮನಿಸಬೇಕಾದ ಅಂಶ ಎಂದು ಅವರು ವಿವರಿಸಿದ್ದಾರೆ.
ತಪ್ಪು ಯಾರದೇ ಇರಲಿ. ರೈತರ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡುವ ಮನಸ್ಥಿತಿ ಮತ್ತು ಅದಕ್ಕಿಂತ ಮುಖ್ಯವಾಗಿ ಆರ್ಥಿಕ ಪರಿಸ್ಥಿತಿಯು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಇಲ್ಲ ಎಂಬ ಅರಿವು ರೈತರಿಗಿದೆ. ಹಾಗಾಗಿ ಈ ವರ್ಷ ಮಾಡಲಾಗದ ಅಭಿವೃದ್ಧಿ ಕಾಮಗಾರಿ ಹಾಗೂ ಇತರ ಚಟುವಟಿಕೆಗಳ ಹಣವನ್ನು ಬಳಸಿಕೊಂಡು ರೈತರ ಸಹಕಾರಿ ಸಂಸ್ಥೆಗಳ ಮತ್ತು ರಾಷ್ಟೀಕೃತ ಬ್ಯಾಂಕುಗಳಲ್ಲಿಯ ಬೆಳೆ ಸಾಲದ ಬಡ್ಡಿಯನ್ನು ಮನ್ನಾ ಮಾಡಬೇಕು. ಬೆಳೆ ಸಾಲ ಸೇರಿದಂತೆ ಅವಧಿ ಮುಗಿದ ಎಲ್ಲ ಕೃಷಿ ಸಂಬAಧಿತ ಸಾಲಗಳನ್ನು ಕನಿಷ್ಟ ಒಂದು ವರ್ಷದವರೆಗೆ ಸರಕಾರವೇ ನವೀಕರಿಸಬೇಕು ಎಂದು ಅವರು ಮಾಧ್ಯಮ ಪ್ರಕಟನೆಯಲ್ಲಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಕೊರೋನಾ ಪರಿಣಾಮದಿಂದ ಮಾರುಕಟ್ಟೆಯಿಲ್ಲದೆ ನಷ್ಟವಾಗಿರುವ ಬೆಳೆಗಳು, ಹೂವು, ತರಕಾರಿ, ಹಣ್ಣು ಹಂಪಲಗಳಿಗೆ ರಾಜ್ಯ ಸರಕಾರ ಗೌರವಯುತ ಪರಿಹಾರ ನೀಡುವ ಮೂಲಕ ಮುಂಗಾರು ಹಂಗಾಮಿಗೆ ಸಿದ್ದರಾಗಲು ರೈತರಿಗೆ ಆರ್ಥಿಕ ಬಲ ನೀಡಬೇಕು. ಈ ಬಗ್ಗೆ ಸರಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೇ ಇಡಿ ದೇಶದಲ್ಲಿ ಆಹಾರದ ಹಾಹಾಕಾರ ಉಂಟಾಗುತ್ತದೆ ಎಂಬುದನ್ನು ಸರಕಾರಗಳು ಮರೆಯಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

error: