May 14, 2024

Bhavana Tv

Its Your Channel

ಕುಮಟಾದಲ್ಲಿ ಕನ್ನಡ ಸಂಘ ಅಸ್ತಿತ್ವಕ್ಕೆ

ಕುಮಟಾ: ಕನ್ನಡಾಭಿಮಾನಿ ಸಮಾನ ಮನಸ್ಕರು ಸಂಘಟಿತರಾಗಿ “ಕುಮಟಾ ಕನ್ನಡ ಸಂಘ” ವನ್ನು ಹುಟ್ಟು ಹಾಕಿದ್ದಾರೆ.
ಕುಮಟಾದ ಪ್ರವಾಸಿ ಮಂದಿರದಲ್ಲಿ ಸೋಮವಾರ ಅಧ್ಯಾಪಕ ಮಂಜುನಾಥ ಗಾಂವಕರ ಬರ್ಗಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕನ್ನಡಪರ ಕಾರ್ಯಚಟುವಟಿಕೆಗಳನ್ನು ವ್ಯಾಪಕವಾಗಿ ನಿರಂತರವಾಗಿ ಕೈಗೊಳ್ಳುವ ಆಶಯದಿಂದ ಮೈದಳೆದ “ಕುಮಟಾ ಕನ್ನಡ ಸಂಘ”ದ ಪದಾಧಿಕಾರಿಗಳನ್ನು ಒಕ್ಕೋರಲಿನಿಂದ ಆಯ್ಕೆಗೊಳಿಸಲಾಯಿತು. ಪ್ರಗತಿ ಟ್ಯುಟೋರಿಯಲ್ಸ್‍ನ ಪ್ರಾಚಾರ್ಯ: ಪ್ರೊ.ಎಮ್.ಜಿ.ಭಟ್ಟ ಗೌರವಾಧ್ಯಕ್ಷರಾಗಿ, ವಿಜಯಶಾಲಿ ವಾರಪತ್ರಿಕೆಯ ಸಂಸ್ಥಾಪಕ ಕಾರ್ಯ ನಿರ್ವಾಹಕ ಸಂಪಾದಕ ಸದಾನಂದ ದೇಶಭಂಡಾರಿ ಅಧ್ಯಕ್ಷರಾಗಿ, ಆಂಗ್ಲಭಾಷಾ ಪ್ರಾಧ್ಯಾಪಕಿ ಡಾ.ಪ್ರತಿಭಾ ಭಟ್ಟ ಉಪಾಧ್ಯಕ್ಷರಾಗಿ, ಅಧ್ಯಾಪಕ ಮಂಜುನಾಥ ಗಾಂವಕರ,ಬರ್ಗಿ ಪ್ರಧಾನ ಕಾರ್ಯದರ್ಶಿಗಳಾಗಿ, ನಿತಿನ್ ಗೌರಯ್ಯ ಸಹ ಕಾರ್ಯದರ್ಶಿಗಳಾಗಿ, ಗೋಕರ್ಣದ ಭದ್ರಕಾಳಿ ಮಹಾ ವಿದ್ಯಾಲಯದ ಪ್ರಾಚಾರ್ಯ ಎಸ್.ಸಿ.ನಾಯ್ಕ ಖಜಾಂಚಿಯಾಗಿ, ಯಕ್ಷಗಾನ ಭಾಗವತರಾದ ಕೂಜಳ್ಳಿಯ ಜಿ.ಎಲ್.ನಾಯ್ಕ ಸಹ ಖಜಾಂಚಿಯಾಗಿ, ಕೆನರಾ ಪ್ಲಸ ವಾಹಿನಿಯ ಚರಣರಾಜ ನಾಯ್ಕ ಸಂಚಾಲಕರಾಗಿ, ಕರಾವಳಿ ಧ್ವನಿ ಪತ್ರಿಕೆಯ ಸಂಪಾದಕ ನೀಲಕಂಠ ಬಲೆಗಾರ ಸಂಯೋಜಕರಾಗಿ, ನ್ಯಾಯವಾದಿ ರಾಘವಿ ನಾಯಕ ಸಂಘಟನಾ ಕಾರ್ಯದರ್ಶಿಯಾಗಿ, ಮಂಜುನಾಥ ಸುದ್ದಿ ವಾಹಿನಿಯ ರವಿ ಗಾವಡಿ ಸಹ ಸಂಘಟನಾ ಕಾರ್ಯದರ್ಶಿಯಾಗಿ, ವಿಜಯಶಾಲಿ ಪತ್ರಿಕೆಯ ವರದಿಗಾರ ರಾಘವೇಂದ್ರ ಪಟಗಾರ ಕೊಡಕಣಿ ವಕ್ತಾರರಾಗಿ, ಡಾ.ಎಮ್.ಆರ್.ನಾಯಕ, ಜಯದೇವ ಬಳಗಂಡಿ, ಡಾ.ಶ್ರೀಧರ ಗೌಡ ಉಪ್ಪಿನಗಣಪತಿ, ತಿಗಣೇಶ ಮಾಗೋಡ ಹಾಗೂ ರವೀಂದ್ರ ಭಟ್ಟ ಸೂರಿ ಗೌರವ ಸಲಹೆಗಾರರಾಗಿ, ಗಣೇಶ ಪಟಗಾರ ಮತ್ತು ಚಿದಾನಂದ ಭಂಡಾರಿ ಸದಸ್ಯರಾಗಿ ನಿಯುಕ್ತಿಗೊಂಡಿದ್ದಾರೆ.
ನಾಡಗೀತೆಯೊಂದಿಗೆ ಪ್ರಾರಂಭಿಸಿದ ಸಭೆಯಲ್ಲಿ, ತಾಯಿ ಭುವನೇಶ್ವರಿಗೆ ಪುಷ್ಪ ನಮನಗೈದು ಅಗಲಿದ ನಾಡಿನ ಹೆಸರಾಂತ ಸಾಹಿತಿ ಚಂದ್ರಶೇಖರ ಪಾಟೀಲರವರಿಗೆ ಶೃದ್ದಾಂಜಲಿ ಸಲ್ಲಿಸಲಾಯಿತು. ಸದಾನಂದ ದೇಶಭಂಡಾರಿ ಸ್ವಾಗತಿಸಿದರು. ಡಾ.ಶ್ರೀಧರ ಗೌಡ ವಂದಿಸಿದರು.
ಕನ್ನಡಪರ ಚಟುವಟಿಕೆಗಳನ್ನು ನಿರಂತರವಾಗಿ ಕೈಗೊಳ್ಳಲು, ಸಮರ್ಥ ಪ್ರತಿಭೆಗಳನ್ನು ಅನಾವರಣಗೊಳಿಸಲು ಹಾಗೂ ಸಾಧಕರನ್ನು ಅಭಿನಂದಿಸಲು ಕುಮಟಾ ಕನ್ನಡ ಸಂಘದ ನಿರ್ಮಾಣವು ಅರ್ಥಪೂರ್ಣವೆಂದು ಖ್ಯಾತ ಬರಹಗಾರ ತಿಗಣೇಶ ಮಾಗೋಡ ಹೇಳಿದರು.
ಯಾವುದೇ ಆರ್ಥಿಕ ಮತ್ತು ರಾಜಕೀಯ ಅಪೇಕ್ಷೆಯನ್ನು ಹೊಂದಿರದ, ಯಾವುದೇ ಸಂಘಟನೆಗಳಿಗೆ ಪರ್ಯಾಯವಾಗಿರದ, ಸೌಹಾರ್ದಯುತವಾಗಿ ಕನ್ನಡವನ್ನು ಕಟ್ಟುವ ಸಂಘಟನೆಯಾಗಿ ಕುಮಟಾ ಕನ್ನಡ ಸಂಘವು ಬೆಳೆಯಲಿ ಎಂದು ವಿಶ್ರಾಂತ ಪ್ರಾಧ್ಯಾಪಕ ಹಾಗೂ ಹೆಸರಾಂತ ಯಕ್ಷಗಾನ ಕಲಾವಿದ ಡಾ.ಎಮ್.ಆರ್.ನಾಯಕ ಹಿಚ್ಕಡ ಅಭಿಪ್ರಾಯಿಸಿದರು.
ಸಮಾಜಮುಖಿ ಚಿಂತಕ ಜಯದೇವ ಬಳಗಂಡಿ-ಕನ್ನಡದ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲು ಎದುರಾಗುವ ಯಾವುದೇ ಅಡಚಣೆಗಳಿಗೂ ಎದೆಗುಂದದೇ ಸಕ್ರೀಯವಾಗಿ ತೊಡಗಿಸಿಕೊಂಡು ಸಂಘಟನೆಯನ್ನು ಬಲಪಡಿಸಲು ಕರೆ ನೀಡಿದರು.

error: