May 15, 2024

Bhavana Tv

Its Your Channel

ಶಿರಸಿ ತಾಲ್ಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಶಿರಸಿ: ತಳಮಟ್ಟದ ಅಧ್ಯಯನ ನಡೆಸಿ ವರದಿ ಮಾಡುವ ಮೂಲಕ ಪತ್ರಕರ್ತ ಸಮಾಜದಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅವರು ಶಿರಸಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಶಿರಸಿ ತಾಲ್ಲೂಕು ಘಟಕದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತರು ವಸ್ತುನಿಷ್ಠ, ಸತ್ಯ ವರದಿ ಮೂಲಕ ಜನರ ಭಾವನೆಗೆ ಧ್ವನಿಯಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಸಕ್ರೀಯವಾಗಿರಲು ಪತ್ರಿಕಾರಂಗದ ಕೊಡುಗೆ ಮಹತ್ವದ್ದಿದೆ. ಜನರನ್ನು ಸಂಘಟಿಸಲು, ತತ್ವ, ಸಿದ್ಧಾಂತಗಳನ್ನು ಜಾಗೃತಗೊಳಿಸಲು ಮಾಧ್ಯಮ ಅಗತ್ಯವಿದೆ ಎಂದರು.
ಸಾಮಾಜಿಕ ಜಾಲತಾಣಗಳು ಪತ್ರಕರ್ತರ ಸುದ್ದಿಮೂಲಕ್ಕೆ ಆಧಾರವಾಗಬಾರದು. ಅದನ್ನೇ ಸುದ್ದಿ ಎಂದು ಪರಿಗಣಿಸಬಾರದು ಎಂದರು.
ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಮಾತನಾಡಿ, ಸಕಾರಾತ್ಮಕ ವಿಷಯಗಳಿಗೆ ಮಾಧ್ಯಮಗಳು ಆದ್ಯತೆ ನೀಡಬೇಕು. ಪತ್ರಕರ್ತರು ಸಮಾಜದ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದರು.
ಸ್ಕೊಡ್ ವೇಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಮಾತನಾಡಿ,ಪತ್ರಕೋದ್ಯಮ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಪತ್ರಕೋದ್ಯಮದ ಅರಿವಿಲ್ಲದವರೂ ಪತ್ರಕರ್ತರಾಗುತ್ತಿರುವುದು ಕಳವಳಕಾರಿ. ಇದು ಪತ್ರಿಕೋದ್ಯಮ ಕ್ಷೇತ್ರದ ಮೌಲ್ಯ ಕುಸಿಯಲು ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಸಾಮಾಜಿಕ ಕಾರ್ಯಕರ್ತ ರವೀಂದ್ರ ನಾಯ್ಕ ಮಾತನಾಡಿ, ಸುದ್ದಿಮೂಲ ಕಟ್ಟಿಕೊಳ್ಳುವ, ಪರಿಣಾಮಕಾರಿ ಸುದ್ದಿ ಬರೆಯುವ ಯಶಸ್ವಿ ಪತ್ರಕರ್ತನಾಗುತ್ತಾನೆ. ಜನರು ಪತ್ರಿಕೆಗಳನ್ನು ಕೊಂಡು ಓದಬೇಕು, ಜಾಹೀರಾತು ನೀಡಿ ಪತ್ರಿಕೆಗಳನ್ನು ಬೆಳೆಸಬೇಕು ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ, ಪತ್ರಕರ್ತರು ಅನಗತ್ಯ ಆರೋಪ ಎದುರಿಸಬೇಕಾದ ದುಸ್ಥಿತಿ ಎದುರಾಗಿದೆ. ಉದ್ಯಮಿ, ರಾಜಕಾರಣಿಗಳು ಮಾಧ್ಯಮ ಸಂಸ್ಥೆಯ ಒಡೆಯರಾಗುತ್ತಿರುವ ಕಾರಣ ನಿಷ್ಪಕ್ಷಪಾತ ವರದಿ ಮಾಡಲು ಅಡ್ಡಿಯಾಗುತ್ತಿದೆ ಎಂದರು.
ಪತ್ರಕರ್ತ ಪ್ರದೀಪ ಶೆಟ್ಟಿ ಅವರಿಗೆ ಮಾಧ್ರಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಅವರು, ಪತ್ರಕರ್ತರು ಪೂರ್ವಾಗೃಹ ಪೀಡಿತರಾಗಬಾರದು. ಸಾಮಾಜಿಕ ಬದ್ಧತೆ ಇಟ್ಟು ಕೆಲಸ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ ಭಟ್, ಶಿರಸಿಗೆ ವಾರ್ತಾ ಇಲಾಖೆ ಕಚೇರಿ ಸ್ಥಾಪನೆಯಾಗಲಿ. ಸಾರ್ವಜನಿಕರ ಹಿತದೃಷ್ಟಿಯಿಂದ ಶಿರಸಿಯಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣಗೊಳ್ಳಬೇಕು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಜೆ.ಆರ್.ಸಂತೋಷಕುಮಾರ್ ಇದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ಮಹಾದೇವ ನಾಯ್ಕ ಸಹಕರಿಸಿದರು. ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಕೆರೆಗದ್ದೆ ಸ್ವಾಗತಿಸಿದರು. ರಾಘವೇಂದ್ರ ಬೆಟ್ಕೊಪ್ಪ ಕಾರ್ಯಕ್ರಮ ನಿರೂಪಿಸಿದರು. ವಿನುತಾ ಹೆಗಡೆ ಸನ್ಮಾನ ಪತ್ರ ವಾಚಿಸಿದರು. ಗಣೇಶ್ ಹೆಗಡೆ ವಂದನಾರ್ಪಣೆ ಮಾಡಿದರು.

error: