ಯಲ್ಲಾಪುರ : ಆರೋಗ್ಯಕರ ಜೀವನಕ್ಕಾಗಿ ಎಲ್ಲರೂ ಪರಿಸರ ಸಂರಕ್ಷಿಸುವ ಜೊತೆಗೆ ಗಿಡ ನೆಡುವ ಕಾರ್ಯ ಮಾಡಬೇಕು. ಮರಗಳನ್ನು, ಪರಿಸರವನ್ನು ನಾಶಮಾಡುವುದು ಅಧರ್ಮವಾಗಿದೆ. ಇಂತಹ ಅಧರ್ಮ ಕೆಲಸವನ್ನು ಯಾರೂ ಮಾಡಬಾರದು. ಸಮಾಜದಲ್ಲಿ ಅಧರ್ಮ ಹೆಚ್ಚಾದಾಗ ಮಹಾ ವ್ಯಾಧಿಗಳು ಕಾಣಿಸಿಕೊಳ್ಳುತ್ತವೆ ಎಂದು ಸ್ವರ್ಣವಲ್ಲೀ ಮಠಾಧೀಶರಾದ ಪೂಜ್ಯ ಗಂಗಾಧರೇAದ್ರ ಸರಸ್ವತಿ ಮಹಾಸ್ವಾಮಿಗಳು ನುಡಿದರು.
ಅವರು ಪಟ್ಟಣದ ನಾಯಕನಕೆರೆಯ ಶ್ರೀಶಾರದಾಂಬಾ ದೇವಸ್ಥಾನದ ಆವಾರದಲ್ಲಿ ಅರಣ್ಯ ಇಲಾಖೆಯ ಸಹಕಾರದಲ್ಲಿ ವೃಕ್ಷಾರೋಹಣ ನೆರವೇರಿಸಿ, ಆಶೀರ್ವಚನ ನೀಡಿದರು. ಇಂದು ಜಗತ್ತನ್ನು ಕಾಡುತ್ತಿರುವ ಕೊರೋನಾ ಮಹಾಮಾರಿಯು ವಕ್ಕರಿಸಲು ಜಗತ್ತಿನಲ್ಲಿ ಹೆಚ್ಚುತ್ತಿರುವ ಅಧರ್ಮವೇ ಕಾರಣವಾಗಿದೆ. ಕೊರೋನಾ ಇನ್ನು ಮುಗಿದಿಲ್ಲ. ಆ ಕುರಿತು ಜಾಗ್ರತರಾಗಿರಬೇಕು, ಸರ್ಕಾರದ ನಿಯಮಾವಳಿಗಳ ಪಾಲನೆ ಹಾಗೂ ಮುನ್ನೆಚ್ಚರಿಕೆ ಅಗತ್ಯ. ಸಸ್ಯನಾಶ, ಪರಿಸರ ನಾಶ, ಬೇಕಾಬಿಟ್ಟಿ ಕೊಳವೆ ಬಾವಿ ತೋಡುವುದು, ಧರ್ಮ ಹಾಗೂ ಅಗ್ನಿ ಆರಾಧನೆಯನ್ನು ನಿರ್ಲಕ್ಷಿಸುವದು ಅಧರ್ಮವಾಗಿದೆ. ಧರ್ಮಾಚರಣೆಯು ಮನೆಯಿಂದಲೇ ಪ್ರಾರಂಭವಾಗಬೇಕು. ಯುಕ್ತವಾದ ಧರ್ಮಾಚರಣೆ ಮಾಡುವ ಮೂಲಕ ನಮ್ಮ ಬದುಕನ್ನು ಹಸನಾಗಿಸಿಕೊಳ್ಳಬೇಕು. ಸಮಾಜದಲ್ಲಿ ಕ್ಲೇಶಗಳು ಉಂಟಾಗುತ್ತಿವೆ. ಅದರ ಪರಿಹಾರಕ್ಕೆ ಪ್ರತಿಯೊಬ್ಬರೂ ತಮ್ಮ ಕರ್ತವ್ಯ, ಪ್ರಾಮಾಣಿಕತನ, ನಿಷ್ಠೆಯಿಂದ ಧರ್ಮಾಚರಣೆಯಲ್ಲಿ ಮುನ್ನಡೆದಾಗ ಮಾತ್ರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ ಎಂದರು.ಚರ್ಚಾ ಸ್ಫರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಜ್ಯೋತಿರಾದಿತ್ಯ ಭಟ್ನನ್ನು ಶ್ರೀಗಳು ಇದೇ ಸಂದರ್ಭದಲ್ಲಿ ಸನ್ಮಾನಿಸಿ, ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಶ್ರೀಕೃಷ್ಣ ಕಾಮಕರ, ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಭಟ್ಟ, ವಲಯಾರಣ್ಯಾಧಿಕಾರಿ ಬಾಲಸುಬ್ರಹ್ಮಣ್ಯಂ, ವೇದಮೂರ್ತಿ ಶಂಕರ ಭಟ್ಟ ಕಟ್ಟೆ, ವೇದಮೂರ್ತಿ ರಾಮಚಂದ್ರ ಭಟ್ಟ ಹಿತ್ಲಕಾರಗದ್ದೆ, ಅರ್ಚಕ ವೇದಮೂರ್ತಿ ಗೋಪಾಲಕೃಷ್ಣ ಭಟ್ಟ, ಶ್ರೀಶಾರದಾಂಬಾ ದೇವಸ್ಥಾನದ ಅಧ್ಯಕ್ಷರಾದ ಡಿ.ಶಂಕರ ಭಟ್ಟ, ಕಾರ್ಯದರ್ಶಿ ಶಂಕರ ಭಟ್ಟ ತಾರೀಮಕ್ಕಿ ಉಪಸ್ಥಿತರಿದ್ದರು.
ವರದಿ: – ವೇಣುಗೋಪಾಲ ಮದ್ಗುಣಿ
More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ