April 27, 2024

Bhavana Tv

Its Your Channel

ವಾಸುಕಿ ಸರ್ಪ ಮತ್ತು ಸಪರಿವಾರ ದೇವರುಗಳ ಪ್ರತಿಷ್ಠಾಪನಾ ಮಹೋತ್ಸವ

ಭಟ್ಕಳ ತಾಲೂಕಿನ ಸರ್ಪನಕಟ್ಟೆಯಲ್ಲಿ ಸರ್ಪನಕಟ್ಟೆ ಜೀರ್ಣೋದ್ಧಾರ ಸಮಿತಿ ಮುಂದಾಳತ್ವದಲ್ಲಿ ವಾಸುಕಿ ಸರ್ಪ ಮತ್ತು ಸಪರಿವಾರ ದೇವರುಗಳ ಪ್ರತಿಷ್ಠಾಪನಾ ಮಹೋತ್ಸವ ಅತ್ಯಂತ ಅದ್ಧೂರಿಯಾಗಿ ನಡೆಯಿತು.
ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಮೇಲುಕೋಟೆಯ ಯತಿರಾಜ ಜೀಯರ್ ಸ್ವಾಮೀಜಿ ಭಾಗವಹಿಸಿ ಧಾರ್ಮಿಕ ಕೈಂಖರ್ಯಗಳನ್ನು ನೆರವೇರಿಸಿದರು.

ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಸುನಿಲ್ ನಾಯ್ಕ ಮಾತನಾಡಿ ಭಟ್ಕಳ ತಾಲೂಕಿಗೆ ಸರ್ಪನಕಟ್ಟೆ ಎನ್ನುವುದು ಶಕ್ತಿಪೀಠ ಇದ್ದಂತೆ. ಹಲವಾರು ವಿಷಯಗಳಲ್ಲಿ ಇದು ಸಾಬೀತಾಗಿದೆ. ಇಲ್ಲಿನ ಯುವಜನತೆಯ ಒಕ್ಕಟ್ಟು ಹಾಗೂ ಸಾರ್ವಜನಿಕರ ಸಹಕಾರ ಎಲ್ಲಾ ವಿಷಯದಲ್ಲಿ ಸರ್ಪನಕಟ್ಟೆ ಇತರರಿಗೆ ಮಾದರಿಯಾಗಿದೆ. ಇಲ್ಲಿ ಊರಿನ ಶ್ರೇಯಸ್ಸಿಗಾಗಿ ಸರ್ಪನಕಟ್ಟೆಯಲ್ಲಿ ಹಿಂದೆ ಅಜೀರ್ಣವಾಗಿದ್ದ ಕಟ್ಟೆಯನ್ನು ಜೀರ್ಣೋದ್ಧಾರ ಮಾಡಿ ಇಲ್ಲಿ ನಾಗ ಮತ್ತು ಸಪರಿವಾರ ದೇವರುಗಳ ಪ್ರತಿಷ್ಠಾನೆ ಮಾಡಿದ್ದಾರೆ. ಇದರಿಂದ ಊರಿನ ಜನತೆಗೆ ಶ್ರೇಯಸ್ಸಾಗಲಿದೆ. ಹಾಗೆಯೇ ಇಂತಹ ಕಾರಣಗಳಿಂದ ಇಲ್ಲಿನ ಜನರ ಒಕ್ಕಟ್ಟು ಇನ್ನಷ್ಟು ಹೆಚ್ಚಾಗಿ ಚೆನ್ನಾಗಿ ಬಾಳುವಂತಾಗಲಿ ಎಂದು ಹಾರೈಸಿದರಲ್ಲದೇ, ಇಲ್ಲಿನ ಜನರ ಯಾವುದೇ ಸಮಸ್ಯೆಗಳಿಗೆ ನಾನು ಸ್ಪಂಧಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಾಸ್ಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಈಶ್ವರ ನಾಯ್ಕ ಮಾತನಾಡಿ ಸರ್ಪನಕಟ್ಟೆಯ ಮಹಮೆಯ ಬಗ್ಗೆ ಪೂರ್ವಜರಿಂದ ನಾವು ತಿಳಿದುಕೊಂಡಿದ್ದೆವು. ಈಗ ಜೀರ್ಣೋದ್ಧಾರ ಆಗಿರುವುದರಿಂದ ಇದರ ಮಹಿಮೆ ಇನ್ನಷ್ಟು ಹೆಚ್ಚಾಗಲಿ ಎಂದರು.
ಉಪಸ್ಥಿತರಿದ್ದ ಕೃಷ್ಣಾ ನಾಯ್ಕ ಆಸರಕೇರಿ ಮಾತನಾಡಿ ಭಟ್ಕಳದ ನಿಚ್ಚಲಮಕ್ಕಿ ವೆಂಕಟ್ರಮಣ ದೇವಸ್ಥಾನದ ಮೂರ್ತಿಯನ್ನು ಅಂದಿನ ಸ್ವಾಮೀಜಿಗಳಾದ ರಾಮಾನುಜಾಚಾರ್ಯರು ಪ್ರತಿಷ್ಟಾಪನೆ ಮಾಡಿದ್ದರು ಎಂದು ಕೇಳಿ ತಿಳಿದಿದ್ದೇವೆ. ಇಂದು ಸರ್ಪನಕಟ್ಟೆಗೆ ಅದೇ ಮಠದ ಸ್ವಾಮೀಜಿಗಳಾದ ಯತಿರಾಜ ಜೀಯರ್ ಸ್ವಾಮೀಜಿ ಇಲ್ಲಿನ ಸರ್ಪನಕಟ್ಟೆಯ ವಾಸುಕಿ ಸರ್ಪ ಮತ್ತು ಪರಿವಾರ ದೇವರುಗಳ ಪ್ರತಿಷ್ಟಾಪನೆಗೆ ಬಂದಿದ್ದಾರೆ. ಯತಿರಾಜ ತೀರ್ಥರು ಒಬ್ಬ ಉತ್ತಮವಾದ ಗುರುಗಳು. ಸರ್ಪನಕಟ್ಟೆಯ ಸಮಿತಿಯವರು ಮೇಲುಕೋಟೆಯ ಯತಿರಾಜ ಜೀಯರ್ ಸ್ವಾಮೀಜಿಯವರನ್ನು ಕರೆಸುವ ಮೂಲಕ ಒಂದು ಉತ್ತಮವಾದ ಬದಲಾವಣೆಗೆ ನಾಂದಿ ಹಾಡಿದ್ದಾರೆ. ಮುಂದಿನ ದಿನಗಳಲ್ಲಿ ಇಡೀ ಜಿಲ್ಲೆಯಾದ್ಯಂತ ನಾಮಧಾರಿ ಸಮಾಜ ಒಂದು ಮುಖ್ಯವಾದ ಬದಲಾವಣೆಯತ್ತ ಮುಖಮಾಡಲಿದೆ. ಇದರಿಂದ ಎಲ್ಲವೂ ಒಳ್ಳೆಯದಾಗಲಿದೆ ಎಂದ ಅವರು ಈ ಕಾರ್ಯಕ್ರಮ ನಡೆಯುವಲ್ಲಿ ಕೆಲವರು ತೊಂದೆ ಕೊಟ್ಟಿದ್ದಾರೆ. ಆದರೆ ಅವರಿಗೆ ಉತ್ತರ ಕೊಡುವ ಕಾಲ ಸಧ್ಯದಲ್ಲೇ ಬರಲಿದೆ ಎಂದರು.
ಕಾರ್ಯಕ್ರಮದಲ್ಲಿ ಯಲ್ವಡಿಕವೂರ್ ಗ್ರಾಮಪಂಚಾಯತ್ ಅಧ್ಯಕ್ಷೆ ಸುಶೀಲಾ ನಾಯ್ಕ, ಸತ್ಯ ಸಾಯಿ ಸೇವಾ ಸಮಿತಿಯ ಭಾಸ್ಕರ ನಾಯ್ಕ, ಅರ್ಚಕರಾದ ಮುರಳಿ ಭಟ್ ಮಾತನಾಡಿದರು. ವೇದಿಕೆಯಲ್ಲಿ ಸರ್ಪನಕಟ್ಟೆ ಸಮಿತಿಯ ಅಧ್ಯಕ್ಷ ಹನುಮಂತ ನಾಯ್ಕ, ಊರಿನ ಹಿರಿಯರಾದ ಗೋಯ್ದಪ್ಪ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

error: